ರೈತರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ಸಫಲವಾಗುವುದಿಲ್ಲ: ಸಚಿವ ಡಾ. ಸುಧಾಕರ್

Update: 2021-01-26 09:27 GMT

ಚಿಕ್ಕಬಳ್ಳಾಪುರ, ಜ. 26: ದೇಶದ ಬೆನ್ನೆಲುಬು ರೈತರ ಜೀವನಗುಣಮಟ್ಟ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಕೃಷಿಯಲ್ಲಿ ಸುಧಾರಣೆ ತಂದಿದ್ದಾರೆ. ಆದರೆ ರಾಜಕೀಯ ಪ್ರೇರಿತವಾಗಿ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ಇದು ಸಫಲ ಆಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ನಡೆದ 72 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಕೆಲ ಕಾನೂನುಗಳಲ್ಲಿ ಬದಲಾವಣೆ ತರುವ ಮೂಲಕ ಅಭಿವೃದ್ಧಿ ಮಾಡಿದ್ದಾರೆ. ಕಿಸಾನ್ ಸಮ್ಮಾನ್ ನಡಿ, ನೇರವಾಗಿ ಖಾತೆಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಈ ಯೋಜನೆಯಡಿ ಹಣ ನೀಡುತ್ತಿದ್ದಾರೆ. ಆದರೆ ದುರದೃಷ್ಟವೆಂಬಂತೆ ಕೆಲ ಸಂಘಟನೆ, ಮಧ್ಯವರ್ತಿ, ರಾಜಕೀಯ ಪ್ರೇರಿತವಾಗಿ ಪಕ್ಷಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದರು.

ರಾಜ್ಯದಲ್ಲಿ ಕೈಗೊಂಡ ತ್ವರಿತ ಕ್ರಮಗಳಿಂದ ಕೊರೋನ ನಿಯಂತ್ರಣಕ್ಕೆ ಬಂದಿದೆ. ಅತಿ ಶೀಘ್ರದಲ್ಲಿ ಕೊರೋನ ಲಸಿಕೆ ದೊರೆತಿದ್ದು, ಬೇರೆ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಬ್ರೆಝಿಲ್ ಅಧ್ಯಕ್ಷರು ಲಸಿಕೆ ನೀಡಿರುವುದಕ್ಕೆ ಭಾರತಕ್ಕೆ ಧನ್ಯವಾದ ಹೇಳಿದ್ದಾರೆ. ಈ ರೀತಿ ಬೇರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಕಾರ್ಯವನ್ನು ಪ್ರಧಾನಿ ಮೋದಿ ಮಾಡಿದ್ದಾರೆ. ಜಗತ್ತಿನ ಮುಂದೆ ತಲೆ ಎತ್ತಿ ನಡೆಯುವಂತೆ ಭಾರತ ಬೆಳೆದಿದೆ ಎಂದರು.

ಭಾರತದಲ್ಲಿ ಅತಿ ಹೆಚ್ಚು ಯುವಜನರಿದ್ದಾರೆ. ದೇಶದಲ್ಲಿ ಉತ್ತಮ ಮಾನವ ಸಂಪನ್ಮೂಲವಿದ್ದು, ಇದನ್ನು ಸಮರ್ಥವಾಗಿ ಬಳಸಿ ಕೊಳ್ಳಬೇಕು. ಮೂಲಭೂತ ಹಕ್ಕುಗಳಂತೆ, ಮೂಲಭೂತ ಕರ್ತವ್ಯಗಳಿವೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾ ಗಿದ್ದು, ನಾಗರಿಕರಾಗಿ ದೇಶವನ್ನು ಉನ್ನತಿಗೆ ಕೊಂಡೊಯ್ಯಲು ಕರ್ತವ್ಯ ಪಾಲಿಸಬೇಕು ಎಂದರು.

ರೈತರು, ಯೋಧರನ್ನು ಸ್ಮರಿಸಲು ಜೈ ಜವಾನ್ ಜೈ ಕಿಸಾನ್ ಎಂದು ಲಾಲ್ ಬಹಾದ್ದೂರ್ ಶಾಸ್ತ್ರಿ ಹೇಳಿದ್ದರು. ವಿಜ್ಞಾನಿಗಳನ್ನು ಸ್ಮರಿಸಲು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಜೈ ವಿಜ್ಞಾನ್ ಎಂದು ಹೇಳಿದ್ದರು. ಅದೇ ರೀತಿ ಕವಿ ಕುವೆಂಪು ವಿಶ್ವಮಾನವ ಸಂದೇಶ ಸಾರಲು ಜೈ ಇನ್ಸಾನ್ ಎಂಬ ಸಂದೇಶ ಸಾರಬೇಕಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News