×
Ad

ರೈತರ ಪರೇಡ್ ಗೆ ಶಿವಮೊಗ್ಗದಲ್ಲಿ ವ್ಯಾಪಕ ಬೆಂಬಲ: ಕೇಂದ್ರದ ವಿರುದ್ಧ ಹರಿಹಾಯ್ದ ಮುಖಂಡರು

Update: 2021-01-26 22:52 IST

ಶಿವಮೊಗ್ಗ, ಜ.26: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸುಗ್ರಿವಾಜ್ಞೆಗಳ ಮೂಲಕ ಜಾರಿಗೆ ತಂದಿರುವ ನೂನತ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಶಿವಮೊಗ್ಗದಲ್ಲಿ ಹಮ್ಮಿಕೊಂಡಿದ್ದ ರೈತರ ಪರ್ಯಾಯ ಗಣರಾಜ್ಯೋತ್ಸವ ಪರೇಡ್ ಗೆ ವ್ಯಾಪಕ ಬೆಂಬಲ ದೊರೆಯಿತು.

ಗಣರಾಜ್ಯೋತ್ಸವ ದಿನದಂದು ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಟ್ರ್ಯಾಕ್ಟರ್ ರ್‍ಯಾಲಿ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿತ್ತು. ಈ ಹಿನ್ನಲೆಯಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಶಿವಮೊಗ್ಗದ ಸೈನ್ಸ್ ಮೈದಾನದಿಂದ ರೈತರು ನೂರಾರು ಟ್ರ್ಯಾಕ್ಟರ್, ಜೀಪುಗಳೊಂದಿಗೆ ಡಿಸಿ ಕಾಂಪೌಡ್ ವರೆಗೆ ಬೃಹತ್ ರ್‍ಯಾಲಿ ನಡೆಸಿದರು.

ರೈತರ ಗಣರಾಜ್ಯೋತ್ಸವ ಪರೇಡ್ ಬೆಂಬಲಿಸಿ ಜಿಲ್ಲೆಯ ಸಾವಿರಾರು ರೈತರು, ಕಾರ್ಮಿಕರು, ದಲಿತರು, ಮುಸ್ಲಿಂ ಸಂಘಟನೆಗಳು, ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಟ್ರಾಕ್ಟರ್, ಬೈಕ್, ಕಾರುಗಳ ಮೇಲೆ ರಾಷ್ಟ್ರಧ್ವಜ ಹಾಗೂ ರೈತ ಸಂಘಟನೆಗಳ ಬಾವುಟಗಳನ್ನು ಕಟ್ಟಿಕೊಂಡು ಜಾಥಾದಲ್ಲಿ ಭಾಗವಹಿಸಿದರು.

ನಗರದ ಸೈನ್ಸ್ ಮೈದಾನದಿಂದ ಹೊರಟ ಮೆರವಣಿಗೆ ಬಿ.ಹೆಚ್. ರಸ್ತೆ ಮುಖಾಂತರ ಸಾಗಿ ಅಮೀರ್ ಅಹಮ್ಮದ್ ವೃತ್ತ, ಗೋಪಿ ವೃತ್ತ, ಕೋರ್ಟ್ ಸರ್ಕ್ಲ್ ತಲುಪಿ ಅಲ್ಲಿಂದ ಡಿಸಿ ಕಾಂಪೌಂಡ್ ಗೆ ಬಂದು ತಲುಪಿತು. ರ್‍ಯಾಲಿಯುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಅನ್ನದಾತರು ಘೋಷಣೆ ಕೂಗಿದರು. ಪ್ರಧಾನಿ ಮೋದಿಯವರು ರೈತರ ಪರವಾಗಿಲ್ಲ. ಬಂಡವಾಳ ಶಾಹಿಗಳ ಪರವಾಗಿದ್ದಾರೆ. ಮೋದಿ ಹಠಾವೋ...ದೇಶ್ ಬಚಾವ್ ಎಂದು ಘೋಷಣೆ ಕೂಗಿದರು.

ಡಿಸಿ ಕಾಂಪೌಂಡ್ ಬಳಿ ರೈತರ ಪರ್ಯಾಯ ಗಣರಾಜ್ಯೋತ್ಸವ ಪರೇಡ್ ನಡೆಸಿ ಮಾತನಾಡಿದ ರೈತ ಮುಖಂಡ ಕೆ.ಟಿ ಗಂಗಾಧರ್, ಗುತ್ತಿಗೆ ವ್ಯವಸಾಯ ಪದ್ದತಿಗೆ ಕಾರ್ಪೊರೇಟ್ ಕಂಪನಿಗಳಿಗೆ ಬಂಡವಾಳ ಹೂಡಿಕೆಗೆ ಅನುಕೂಲ ಮಾಡಿಕೊಡಲು ಭಾರತ ಸರ್ಕಾರ ಮುಂದಾಗಿದೆ. ಇದು ಅಪಾಯಕಾರಿ ಎಂದು ಹೇಳಿದರು.

ಇಂದು ರೈಲ್ವೆ, ವಿಮಾನ, ಕಾರ್ಖಾನೆ ಸೇರಿದಂತೆ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಖಾಸಗೀಕರಣ ಮಾಡಿದ್ದಾರೆ. ನೀರು ಮತ್ತು ಖನಿಜಗಳು ಮಾತ್ರ ಖಾಸಗೀಕರಣ ಮಾಡುವುದು ಬಾಕಿ ಇದೆ. ಇದು ಶೀಘ್ರದಲ್ಲೇ ಖಾಸಗೀಕರಣ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಸುಗ್ರಿವಾಜ್ಞೆಗಳ ಮೂಲಕ ಕೃಷಿ ಕಾಯ್ದೆಗಳನ್ನು ಬದಲಾವಣೆ ಮಾಡುವ ಅಗತ್ಯ ಇತ್ತಾ ಎಂದು ಪ್ರಶ್ನಿಸಿದ ಅವರು, ನೂತನ ಕೃಷಿ ಕಾಯ್ದೆಗಳನ್ನು ಸಂಸತ್ತಿನಲ್ಲಿ ಚರ್ಚೆ ಮಾಡಿ ಜಾರಿಗೆ ತಂದಿದ್ದರೆ ಒಪ್ಪಿಕೊಳ್ಳುತ್ತಿದ್ದೆವು. ಏಕಪಕ್ಷಿಯವಾಗಿ ಸುಗ್ರಿವಾಜ್ಞೆಗಳ ಮೂಲಕ ಜಾರಿಗೆ ತಂದಿರುವುದು ಅತ್ಯಂತ ಅಮಾನುಷ, ಅನಗತ್ಯ. ಹಾಗಾಗಿ ಈ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಪ್ರಚಾರ ಮಾಡಲು ಬಂದ ಬಿಜೆಪಿಗೆ ನೂತನ ಕೃಷಿ ಕಾಯ್ದೆಗಳ ಬಗ್ಗೆ ಸ್ಪಷ್ಟತೆ ಇಲ್ಲ. ಈ ಕಾಯ್ದೆಗಳು ನಮ್ಮ ಭೂಮಿ, ಗ್ರಾಮೀಣ ಸಂಸ್ಕೃತಿ, ಗ್ರಾಮೀಣ ಬದುಕು, ಆರ್ಥಿಕತೆ, ಸಾಮಾಜಿಕ ಅಭದ್ರತೆಗೆ ಅಪಾಯ ತರಲಿದೆ. ವಿದೇಶದಲ್ಲಿ ಗುತ್ತಿಗೆ ಕೃಷಿ ಪದ್ದತಿ ಜಾರಿ ಬಂದು ವಿಫಲವಾಗಿದೆ ಎಂದು ಹೇಳಿದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಹೋರಾಟ ಮಾಡದಿದ್ದರೆ ಈ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಭೂಮಿ ವಿಚಾರದಲ್ಲಿ ಮೋದಿ ಸರ್ಕಾರ ರೈತರಿಗೆ ದ್ರೋಹ ಮಾಡುತ್ತಿದೆ. ಒಬ್ಬ ವ್ಯಕ್ತಿ ಇವತು ಎಷ್ಟು ಬೇಕಾದರೂ ಖರೀದಿ ಮಾಡಬಹುದು ಎಂದು ಕಾಯ್ದೆ ಜಾರಿಗೆ ತಂದಿದ್ದಾರೆ. ಇದು ಅವೈಜ್ಣಾನಿಕ. ಮೋದಿ ಸರ್ಕಾರ ಈ ದೇಶದ ರೈತರಿಗೆ ಅನ್ಯಾಯ ಮಾಡುತ್ತಿದೆ. ಸಬ್ ಕ್ ಸಾಥ್ ,ಅಚ್ಚೇದಿನ್ ಎಂಬ ಬಣ್ಣಬಣ್ಣದ ಘೋಷಣೆ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಮೋದಿಗೆ ಬೇಕಾಗಿರುವುದು ಕೈಗಾರಿಕೋದ್ಯಮಿಗಳೇ ಹೊರತು ರೈತರಲ್ಲ ಎಂದು ಹೇಳಿದರು.

ಸಿದ್ದನಗೌಡ ಪಾಟೀಲ್ ಮಾತನಾಡಿ, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮವಾಗಿದೆ. ರೈತರ ಹೋರಾಟಕ್ಕೆ ಇಡೀ ಭರತ ಖಂಡ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಸ್ವರಾಜ್ ಇಂಡಿಯಾ ಜಿಲ್ಲಾ ವಕ್ತಾರ ಕೆ.ಪಿ ಶ್ರೀಪಾಲ್, ಡಿಎಸ್ಎಸ್ ಸಂಘಟನೆಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಮಾಜಿ ಶಾಸಕ ಕೆ.ಬಿ ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ರೈತ ಕಾರ್ಮಿಕ ದಲಿತರ ಸಂಯುಕ್ತ ಹೋರಾಟ ಒಕ್ಕೂಟದ ಸಂಯೋಜಕ ಶಿವಾನಂದ ಕುಗ್ವೆ, ವಿರೇಶ್ ಸೇರಿದಂತೆ ಇತರರು ಇದ್ದರು.

ಟ್ರ್ಯಾಕ್ಟರ್ ಚಾಲನೆ ಮಾಡಿದ ಕಾಗೋಡು ಪುತ್ರಿ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನಗರದಲ್ಲಿ ಆಯೋಜಿಸಲಾದ ಪ್ರತಿಭಟನೆಯಲ್ಲಿ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಟ್ರ್ಯಾಕ್ಟರ್ ಚಲಾಯಿಸಿ ಗಮನಸೆಳೆದರು.

ನಗರದಲ್ಲಿ ಸುಮಾರು ಎರಡು ಕಿ.ಮೀ ರ್‍ಯಾಲಿ ನಡೆಯಿತು. ಆರಂಭದಿಂದಲೇ ಟ್ರ್ಯಾಕ್ಟರ್ ಕೀ ಪಡೆದ ಕಾಗೋಡು ಪುತ್ರಿ ಡಾ.ರಾಜನಂದಿನಿ ಸಮಾವೇಶ ನಿಗದಿ ಸ್ಥಳದವರೆಗೂ ಟ್ರ್ಯಾಕ್ಟರ್ ಚಾಲಾಯಿಸಿದರು. ಈ ವೇಳೆ ಮಹಿಳಾ ಕಾಂಗ್ರೆಸ್ ನಾಯಕಿಯರು ಸಾಥ್ ನೀಡಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಡಾ.ರಾಜನಂದಿನಿ, ಕಾರು ಚಲಾಯಿಸುವ ಅನುಭವ ಇದೆ. ರೈತರಿಗೆ ಬೆಂಬಲ ನೀಡಲು ಟ್ರ್ಯಾಕ್ಟರ್ ಚಲಾಯಿಸಿದ್ದೇನೆ. ಇದು ಹೊಸ ಅನುಭವ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News