ಹಿಂಸಾಚಾರದ ಕಳಂಕವನ್ನು ರೈತನ ತಲೆಗೆ ಕಟ್ಟಬಾರದು: ಎಚ್.ಡಿ.ಕುಮಾರಸ್ವಾಮಿ

Update: 2021-01-27 12:11 GMT

ಬೆಂಗಳೂರು, ಜ. 27: ಕೆಂಪುಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕವನ್ನು ದೇಶದ ಯಾರೊಬ್ಬರೂ ರೈತನ ತಲೆಗೆ ಕಟ್ಟಬಾರದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ರೈತರ ಐತಿಹಾಸಿಕ ಹೋರಾಟದ ವೇಳೆ ಹೊಸದಿಲ್ಲಿಯಲ್ಲಿ ನಡೆದ ಹಿಂಸಾಚಾರ ದುರದೃಷ್ಟಕರ. ರೈತರ ಸೋಗಿನಲ್ಲಿ ಅನ್ಯ ಶಕ್ತಿಗಳು ಇದರಲ್ಲಿ ಸೇರಿರಬಹುದು. ಈಗಾಗಲೇ ರೈತರೂ ಇದನ್ನು ಸ್ಪಷ್ಟಪಡಿಸಿದ್ದಾರೆ. ನ್ಯಾಯವಾದ ತಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಲು ಚಳಿ, ಗಾಳಿಯನ್ನೂ ಲೆಕ್ಕಿಸದೇ ಹೋರಾಡುತ್ತಿರುವ ರೈತರು ಇಂಥ ಕೃತ್ಯಕ್ಕೆ ಕೈಹಾಕಲಾರರು ಎಂಬುದೂ ಸತ್ಯ' ಎಂದು ಹೇಳಿದ್ದಾರೆ.

‘ನಿನ್ನೆಯ ಘಟನೆಗೆ ರೈತರನ್ನು ದೂಷಿಸುವಂಥ ಹೇಳಿಕೆಗಳು, ಅಭಿಪ್ರಾಯಗಳನ್ನು ಕೇಳಿ ಮನಸ್ಸಿಗೆ ನೋವಾಗಿದೆ. ಘಟನೆ ಯಾಕೆ ಆಯಿತು, ಹೇಗೆ ಆಯಿತು, ಘಾತಕಶಕ್ತಿಗಳು ಹೇಗೆ ಬಂದವು ಎಂಬುದರ ಕುರಿತು ತನಿಖೆಯಾಗದೇ, ರೈತರನ್ನು ದೂಷಣೆ ಮಾಡುವುದು ಅಕ್ಷಮ್ಯ. ಕೆಂಪುಕೋಟೆಯ ಬಳಿ ನಡೆದ ಹಿಂಸಾಚಾರದ ಕಳಂಕವನ್ನು ದೇಶದ ಯಾರೊಬ್ಬರೂ ರೈತನ ತಲೆಗೆ ಕಟ್ಟಬಾರದು' ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

‘ಇದು ಸೂಕ್ತ ಮಾತುಕತೆ ಮೂಲಕ ಬಗೆಹರಿಯುವ ಸಮಸ್ಯೆ. ಸುಪ್ರೀಂಕೋರ್ಟ್ ಇದನ್ನೇ ಹೇಳಿದೆ. ಆದರೆ, ಹಾಗೆ ಆಗದೇ ಇರುವುದು ಬೇಸರದ ಸಂಗತಿ. ಈ ಘಟನೆಯನ್ನು ಆಡಳಿತದಲ್ಲಿರುವವರು ತಪ್ಪಿಸಬಹುದಿತ್ತು. ಘಟನೆ ಈಗ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಈಗಲೂ ಕಾಲ ಮಿಂಚಿಲ್ಲ. ಸೌಹಾರ್ದ ಮಾರ್ಗ ಇದಕ್ಕೆ ಮದ್ದು' ಎಂದು ಸಲಹೆ ನೀಡಿದ್ದಾರೆ.

‘ನಾಲ್ವರು ರೈತ ಮುಖಂಡರನ್ನು ಕೊಲ್ಲಲೆಂದು ಸಂಚು ನಡೆಸಿದ ಘಟನೆಗಳು ಈಗಾಗಲೇ ನಡೆದು ಹೋಗಿದೆ. ಅದಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿಯನ್ನು ಹಿಡಿದು ರೈತರೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನು ರೈತರ ಹೋರಾಟವನ್ನೇ ತಲೆಕೆಳಗು ಮಾಡಲು ಪ್ರಯತ್ನಗಳು ನಡೆಯದೇ ಇರುತ್ತವೆಯೇ? ಖಂಡಿತವಾಗಿಯೂ ಅನ್ಯ ಶಕ್ತಿಗಳು ಇದರ ಹಿಂದೆ ಇರುವ ಸಾಧ್ಯತೆಗಳಿವೆ' ಎಂದು ಕುಮಾರಸ್ವಾಮಿ ಸಂಶಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News