ಯಡಿಯೂರಪ್ಪಗೆ ಬಿಜೆಪಿ ನಾಯಕರೇ ಟಾರ್ಗೆಟ್: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

Update: 2021-01-27 12:47 GMT

ವಿಜಯಪುರ, ಜ.27: ಡಿ.ಕೆ.ಶಿವಕುಮಾರ್, ಝಮೀರ್ ಅಹ್ಮದ್‍ಖಾನ್, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಟೀಕಿಸುವ ಬಿಜೆಪಿ ನಾಯಕರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಟಾರ್ಗೆಟ್ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ಪ್ರಮುಖ ನಾಯಕರ ವಿರುದ್ಧ ಮಾತನಾಡುತ್ತಿರುವ ಬಿಜೆಪಿ ಸಚಿವರ ಖಾತೆಗಳು ಪದೇ ಪದೇ ಬದಲಾಗುತ್ತಿವೆ. ಬಿಜೆಪಿ ಹಿರಿಯ ನಾಯಕ ಮಾಧುಸ್ವಾಮಿ, ವಿಧಾನಸಭೆಯಲ್ಲಿ ವಿರೋಧ ಪಕ್ಷಗಳ ಆರೋಪಗಳಿಗೆ ಸಮರ್ಥವಾಗಿ ಪ್ರತಿಕ್ರಿಯಿಸಿ, ಅವರ ಮಾತನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಯಡಿಯೂರಪ್ಪಗೆ ಬಿಜೆಪಿಯ ಇಂತಹ ನಾಯಕರೇ ಟಾರ್ಗೆಟ್ ಆಗಿದ್ದಾರೆಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿರೋಧ ಪಕ್ಷದ ನಾಯಕರು ಸಹಭಾಗಿಗಳು. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದ್ದು, ಈ ಬಗ್ಗೆ ಅಸಮಾಧಾನವಿದೆ. ಇದು ಹೆಚ್ಚು ದಿನ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಬೆಳವಣಿಗೆಗಳಾಗಲಿವೆ ಎಂದು ಅವರು ಹೇಳಿದ್ದಾರೆ.

ನನ್ನ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪವಿಲ್ಲ. ಹೀಗಾಗಿ ನನಗೆ ಯಾವುದೇ ಭಯವಿಲ್ಲ. ನನ್ನ ವಿರುದ್ಧ ರಾಜ್ಯ ಸರಕಾರ ನೂರು ಗುಪ್ತಚರ ಅಧಿಕಾರಿಗಳನ್ನು ಬಿಟ್ಟರೂ ಭಯ ಪಡುವವನಲ್ಲ. ನನ್ನ ಮೇಲಿನ ಕೋಪಕ್ಕೆ ಅಧಿಕಾರಿಗಳಿಗೆ ಶಿಕ್ಷೆ ಆಗದಿರಲಿ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News