ರಾಜ್ಯ ಎಲ್ಲ ಕ್ಷೇತ್ರಗಳಲ್ಲಿ ದೇಶದಲ್ಲೇ ಮೊದಲ ಸ್ಥಾನಕ್ಕೇರಲು ಸಹಕಾರ ನೀಡಿ: ರಾಜ್ಯಪಾಲ ವಜೂಭಾಯಿ ವಾಲಾ ಮನವಿ

Update: 2021-01-28 12:06 GMT

ಬೆಂಗಳೂರು, ಜ. 28: ‘ನಮ್ಮ ರಾಜ್ಯವನ್ನು ಎಲ್ಲ ಕ್ಷೇತ್ರಗಳಲ್ಲಿ ದೇಶದಲ್ಲಿ ಮೊದಲನೆ ಸ್ಥಾನಕ್ಕೆ ತರಲು ಎಲ್ಲ ಶಾಸಕರು ಮತ್ತು ಮೇಲ್ಮನೆ ಸದಸ್ಯರು ನನ್ನ ಸರಕಾರಕ್ಕೆ ಸಹಕಾರ ನೀಡಬೇಕು' ಎಂದು ರಾಜ್ಯಪಾಲ ವಜೂಭಾಯಿ ವಾಲಾ ಇಂದಿಲ್ಲಿ ಕರೆ ನೀಡಿದ್ದಾರೆ.

ಗುರುವಾರ ವಿಧಾನ ಮಂಡಲ ಜಂಟಿ ಅಧಿವೇಶದಲ್ಲಿ ‘ಬೆಳಗಾವಿಯಲ್ಲಿ ಅಧಿವೇಶನ ನಡೆಸದೆ, ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿರುವುದಕ್ಕೆ ವಿರೋಧಿಸಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯ ನಡುವೆ ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ, ಸಂಕಷ್ಟಕ್ಕೆ ಸಿಲುಕಿದ ಜನರಿಗೆ ನೆರವು, ಪ್ರವಾಹದಲ್ಲಿ ನೊಂದವರಿಗೆ ಪರಿಹಾರ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದರು.

ಕೊರೋನ ಸೋಂಕಿನಿಂದ ಮೃತಪಟ್ಟ ಸರಕಾರಿ ನೌಕರರಿಗೆ 30 ಲಕ್ಷ ರೂ. ವಿಮಾ ಸೌಲಭ್ಯವನ್ನು ಸರಕಾರ ಘೋಷಿಸಿದೆ. ಸಾಂಕ್ರಾಮಿಕ ಪರಿಸ್ಥಿತಿ ನಡುವೆಯೂ ಸಾಧನೆ ಗಣನೀಯವಾಗಿದೆ. 80 ಲಕ್ಷಕ್ಕೂ ಹೆಚ್ಚು ಆರ್‍ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಿದ್ದು, ಪ್ರತಿ ಲಕ್ಷ ಜನಸಂಖ್ಯೆ ಆಧಾರದ ಮೇಲೆ ದೇಶದಲ್ಲಿಯೇ ಅತಿಹೆಚ್ಚು ಪರೀಕ್ಷೆಗಳು ರಾಜ್ಯದಲ್ಲಿ ನಡೆದಿವೆ. 248ಕೋಟಿ ರೂ.ವೆಚ್ಚದಲ್ಲಿ 1.36ಲಕ್ಷ ಕೊರೋನ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ ಎಂದು ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾದಕ ವಸ್ತುಗಳ ವಿರುದ್ಧ ಯುದ್ಧ: ಸಮಾಜದ ಮೇಲೆ ಅದರಲ್ಲೂ ವಿಶೇಷವಾಗಿ ಯುವಕರ ಮೇಲೆ ಮಾದಕ ವಸ್ತುಗಳು ಕೆಟ್ಟಪರಿಣಾಮ ಬೀರುವುದನ್ನು ಗಮನಿಸಿ ರಾಜ್ಯ ಸರಕಾರ ಮಾದಕ ವಸ್ತುಗಳ ವಿರುದ್ಧ ಯುದ್ಧ ಘೋಷಿಸಿದೆ. ಅನೈತಿಕ ವ್ಯವಹಾರ ಮತ್ತು ಮಾದಕ ವಸ್ತುಗಳ ಸಾಗಾಣೆ ಮತ್ತು ಸೇವೆಯನ್ನು ತಡೆಯುವುದು ಮತ್ತು ನಿಯಂತ್ರಣಕ್ಕಾಗಿ ಕಾನೂನು ಜಾರಿ ಸಂಸ್ಥೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿದರು.

ಪ್ರಕರಣ ದಾಖಲು: ರಾಜ್ಯದಲ್ಲಿ ಇದುವರೆಗೂ 4,066 ಮಾದಕ ವಸ್ತು ಕುರಿತ ಪ್ರಕರಣವನ್ನು ದಾಖಲು ಮಾಡಲಾಗಿದ್ದು, 34ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದ ಅವರು, ಬೆಂಗಳೂರಿನ ಮಡಿವಾಳದಲ್ಲಿ 30ಕೋಟಿ ರೂ. ವೆಚ್ಚದಲ್ಲಿ ವಿಧಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ನಿರ್ಮಿಸಲಾಗಿದೆ ಎಂದು ಹೇಳಿದರು.

ಕೊರೋನ ಸೋಂಕು ಸಮಯದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಸರ್ವರಿಗೂ ಆಹಾರದ ಭದ್ರತೆ ಒದಗಿಸಲಾಗಿದೆ. ವೈದ್ಯರು, ದಾದಿಯರು, ಪೊಲೀಸರು ಮತ್ತು ಕಂದಾಯ ಹಾಗೂ ಪಂಚಾಯತ್ ರಾಜ್ ಸಿಬ್ಬಂದಿಗಳ ಹಗಲು-ರಾತ್ರಿಪರಿಶ್ರಮದಿಂದಾಗಿ ಸೋಂಕುನಿಯಂತ್ರಣಕ್ಕೆ ಅವಿರತ ಶ್ರಮಿಸಲಾಗುತ್ತಿದೆ ಎಂದ ಅವರು, ಕೋವಿಡ್‍ವಿರುದ್ಧದಹೋರಾಟದಲ್ಲಿಕೊರೋನ ಯೋಧರಸೇವೆಶ್ಲಾಘನೀಯ ಎಂದು ಹೇಳಿದರು.

ರಾಜ್ಯವನ್ನು ಹಸಿವು ಮುಕ್ತ: ರಾಜ್ಯವನ್ನು ಹಸಿವು ಮತ್ತು ರಕ್ತಹೀನತೆ ಮುಕ್ತವನ್ನಾಗಿ ಹಾಗೂ ಲಿಂಗಸ್ನೇಹಿಯನ್ನಾಗಿ ಮಾಡಲು ನವೀನಾತ್ಮಕ ಕಾರ್ಯತಂತ್ರಗಳು ಮತ್ತು ಉಪಕ್ರಮಗಳನ್ನು ಒಳಗೊಂಡ ಮುನ್ನೋಟ 2030 ಸಿದ್ಧಪಡಿಸುತ್ತಿದೆ ಎಂದು ಪ್ರಕಟಿಸಿದ ವಜೂಭಾಯಿ ವಾಲಾ, ತೋಟಗಾರಿಕಾ ಕ್ಷೇತ್ರಗಳ ಬೆಳೆಗಳ ವಿಸ್ತರಣೆಗೆ ಕ್ರಮ, ಉದ್ಯೋಗ ಖಾತರಿ ಯೋಜನೆಯಡಿ 4,450ಕೋಟಿ ರೂ.ಮೊತ್ತದಲ್ಲಿ 1,194 ಲಕ್ಷ ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ ಎಂದು ಹೇಳಿದರು.

ಹೊಸ ವೈದ್ಯಕೀಯ ಕಾಲೇಜುಗಳು: ಕೇಂದ್ರ ಪುರಸದ್ಕೃತ ಯೋಜನೆಯಡಿತಲಾ 325 ಕೋಟಿ ರೂ.ವೆಚ್ಚದಲ್ಲಿ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ನನ್ನ ಸರಕಾರ ಅನುಮೋದನೆ ನೀಡಿದೆ ಎಂದು ಹೇಳಿದರು.

300 ಕೋಟಿ ರೂ.ವೆಚ್ಚದಲ್ಲಿ ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು, ಮಂಡ್ಯ, ಕೊಪ್ಪಳ, ಬೆಳಗಾವಿ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆರೆಗಳಿಗೆ ಸಂಸ್ಕರಿಸಿದ ನೀರು ತುಂಬಿಸಲು ಏತ ನೀರಾವರಿ ಯೋಜನೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ವಜೂಭಾಯಿ ವಾಲಾ ಅವರು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News