ಮಹಾರಾಷ್ಟ್ರ ಮುಖ್ಯಮಂತ್ರಿಗೆ ಜನಪ್ರಿಯತೆ ಕಡಿಮೆ ಆಗುತ್ತಿದೆ: ಸಚಿವ ಕೆ.ಎಸ್.ಈಶ್ವರಪ್ಪ

Update: 2021-01-28 12:34 GMT

ಬೆಂಗಳೂರು, ಜ.28: ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ದುರುದ್ದೇಶದಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. 

ಗುರುವಾರ ನಗರದಲ್ಲಿ ಹ.ನೀ.ದೀಪಕ್ ನೇತೃತ್ವದ ಕರುನಾಡು ವಿಜಯಸೇನೆಯ ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮರಾಠಿಗರು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿದ್ದಾರೋ ಆ ಪ್ರದೇಶಗಳೆಲ್ಲಾ ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವ ಅಸಂಬದ್ಧ ಹೇಳಿಕೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ನೀಡಿದ್ದಾರೆ ಎಂದರು.

ಇದೇ ರೀತಿ ಕರ್ನಾಟಕದ ವಿವಿಧ ಭಾಗಗಳ ಜನರು ಮಹಾರಾಷ್ಟ್ರ ಹಾಗೂ ವಿಶೇಷವಾಗಿ ಮುಂಬಯಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ, ಆ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಕೇಳುವುದು ಸರಿಯಾಗುವುದೇ ಎಂದು ಈಶ್ವರಪ್ಪ ಪ್ರಶ್ನಿಸಿದರು. 

ಅವರು ಮಾಡುತ್ತಿರುವ ತಪ್ಪನ್ನು ನಾವು ಮಾಡುವುದಕ್ಕೆ ಆಗುವುದಿಲ್ಲ. ಮಹಾಜನ್ ವರದಿಯೆ ಅಂತಿಮವಾಗಿದ್ದು, ಮರಾಠಿಗರು ಹಾಗೂ ಕನ್ನಡಿಗರು ಮೊದಲಿನಿಂದಲೂ ಸಹೋದರರಂತೆ ಬಾಳುತ್ತಿದ್ದೇವೆ. ಇದು ಮುಂದುವರೆಯಬೇಕು. ರಾಜ್ಯದ ಯುವಕರಲ್ಲಿ ಗಡಿ, ನೀರು ಹಾಗೂ ಭೂಮಿ ವಿಷಯದಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕರುನಾಡು ವಿಜಯಸೇನೆ ಸಂಘಟನೆ ಕಾರ್ಯಪ್ರವೃತ್ತರಾಗಲಿ ಎಂದು ಅವರು ಹಾರೈಸಿದರು. 

ಕೇಂದ್ರ ಕಚೇರಿಯ ಉದ್ಘಾಟನೆಯನ್ನು ತುಮಕೂರು ಸಿದ್ದಗಂಗಾ ಕ್ಷೇತ್ರದ ಮಹಾಸ್ವಾಮೀಜಿ ಸಿದ್ದಗಂಗಾ ಶ್ರೀಗಳು ನೆರವೇರಿಸಿದರು. ಉಪಮುಖ್ಯಂತ್ರಿ ಡಾ.ಸಿ.ಎನ್.ಅಶ್ವಥ ನಾರಾಯಣ, ಯುವ ಘಟಕದ ಅಧ್ಯಕ್ಷ ಮಹೇಶ್ ಆರ್.ಎಸ್, ರಾಜ್ಯ ವಕ್ತಾರ ರಾಮ್ ಪ್ರಸಾದ್, ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ರೇಣುಕಾ ಪ್ರಸಾದ್, ಬೆಂಗಳೂರು ನಗರ ಅಧ್ಯಕ್ಷ ವಿಜಯ್ ಕುಮಾರ್ ಹಾಗೂ ಆಟೋ ಮತ್ತು ಮಹಿಳಾ ಘಟಕದ ಸದಸ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News