ಪ್ರತಿಯೊಬ್ಬರು ರಾಷ್ಟ್ರ ಮೊದಲು ಎನ್ನುವ ಮನೋಭಾವನೆ ಬೆಳೆಸಿಕೊಳ್ಳಿ: ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಕರೆ

Update: 2021-01-28 13:10 GMT

ಮಡಿಕೇರಿ, ಜ.28 : ಶ್ರದ್ಧೆ, ಶಿಸ್ತು, ಪ್ರಾಮಾಣಿಕತೆಗೆ ಹೆಸರಾಗಿದ್ದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ರಾಷ್ಟ್ರದ ರಕ್ಷಣಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಇಂದಿನ ಯುವ ಸಮೂಹ ಕೂಡ ರಾಷ್ಟ್ರ ಮೊದಲು ಎನ್ನುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು  ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರು ತಿಳಿಸಿದ್ದಾರೆ.  

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 122 ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.   

ಯುವ ಜನರು ದೇಶವನ್ನು ಪ್ರೀತಿಸಬೇಕು. ರಾಷ್ಟ್ರ ಮೊದಲು, ನಂತರ ಉಳಿದವು ಎಂಬುದು ಪ್ರತಿಯೊಬ್ಬರಲ್ಲಿಯೂ ಇರಬೇಕು. ಈ ಬಗ್ಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಸದಾ ಹೇಳುತ್ತಿದ್ದರು ಎಂದು ಅವರು ತಿಳಿಸಿದರು. 

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಸೇನಾ ಕ್ಷೇತ್ರದಲ್ಲಿ ಅದ್ಭುತ ಸೇವೆ ಸಲ್ಲಿಸಿದ್ದಾರೆ. ಆ ನಿಟ್ಟಿನಲ್ಲಿ ಯುವಜನರು ಸೇನೆ ಸೇರಬೇಕು. ರಾಷ್ಟ್ರದ ರಕ್ಷಣೆ ಮೊದಲು ಎಂಬುದು ಪ್ರತಿಯೊಬ್ಬರಲ್ಲೂ ಬರಬೇಕು. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಹೇಳಿದ್ದಂತೆ ಜೈ ಜವಾನ್ ಜೈ ಕಿಸಾನ್ ಎಂಬ ಶಬ್ಧ ಸದಾ ಮೊಳಗಬೇಕು ಎಂದರು. 

ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ ಕೊಡಗು ಎಂದರೆ ತಲಕಾವೇರಿ, ಕಾಫಿ, ಕರಿಮೆಣಸು ಹಾಗೂ ಕಿತ್ತಳೆಗೆ ಹೇಗೆ ಹೆಸರುವಾಸಿಯೋ, ಹಾಗೆಯೇ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರು ಸೇನಾ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ ಎಂದರು. 

ನಾವೆಲ್ಲರೂ ಮೊದಲು ಭಾರತೀಯರಾಗಿ ಬದುಕಬೇಕು ಎಂಬುದನ್ನು ಕಾರ್ಯಪ್ಪ ಅವರು ತೋರಿಸಿಕೊಟ್ಟಿದ್ದಾರೆ. ಅವರ ಸೇನಾ ಕ್ಷೇತ್ರದ ಕೊಡುಗೆ ಅವಿಸ್ಮರಣೀಯ, ಭಾರತೀಯ ಅಂಚೆ ಚೀಟಿಯಲ್ಲಿ ಕಾರ್ಯಪ್ಪ ಅವರ ಭಾವಚಿತ್ರವಿರುವುದು ವಿಶೇಷ ಎಂದರು. 

ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಮಾತನಾಡಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ದೇಶ ಕಂಡ ಅಪ್ರತಿಮ ವೀರ ಸೇನಾನಿ. ಇವರ ಸೇನಾ ಕ್ಷೇತ್ರದಲ್ಲಿನ ಶಿಸ್ತು, ಸಮಯಪ್ರಜ್ಞೆ, ಶ್ರದ್ಧೆ, ಪ್ರಾಮಾಣಿಕತೆ ಹೀಗೆ ಹಲವು ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವಂತಾಗಬೇಕು ಎಂದು ಅವರು ಹೇಳಿದರು. 

ರಾಷ್ಟ್ರದ ಪ್ರಥಮ ಮಹಾದಂಡನಾಯಕರಾಗಿ ಸೇನಾ ಕ್ಷೇತ್ರಕ್ಕೆ ಕಾರ್ಯಪ್ಪ ಅವರು ಅಪಾರ ಕೊಡುಗೆ ನೀಡಿದ್ದಾರೆ. ಕಾರ್ಯಪ್ಪ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಎಂದರು. 

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ ಅಧ್ಯಕ್ಷರಾದ ಕರ್ನಲ್(ನಿ) ಕಂಡ್ರತಂಡ ಸಿ.ಸುಬ್ಬಯ್ಯ ಅವರು ಮಾತನಾಡಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಸ್ವಾತಂತ್ರ್ಯ ಸಂದರ್ಭದಲ್ಲಿ ರಕ್ಷಣಾ ಕ್ಷೇತ್ರವನ್ನು ರಾಜಕೀಯ ರಹಿತವಾಗಿ ಬೆಳೆಸಿದರು. ದೇಶದ ರಕ್ಷಣೆಗೆ ಕಾರ್ಯಪ್ಪ ಅವರ ಕೊಡುಗೆ ಅಪಾರ. ಭಾರತೀಯ ಸೇನೆಯ ಹಲವು ವಿಭಾಗಗಳಲ್ಲಿ ಪ್ರಥಮರಾಗಿ ಸೇವೆ ಸಲ್ಲಿಸಿ, ಹತ್ತು ಹಲವು ಪ್ರಶಸ್ತಿ ಪಡೆದಿದ್ದಾರೆ ಎಂದು ಅವರು ತಿಳಿಸಿದರು. 

ಕಾರ್ಯಪ್ಪ ಅವರು ದೇಶಕ್ಕೆ ಮಾದರಿ ಪ್ರಜೆಯಾಗಿ ಬದುಕಿದ್ದರು. ಇವರಿಗೆ ಭಾರತ ರತ್ನ ನೀಡುವಂತಾಗಬೇಕು. ರಾಷ್ಟ್ರಪತಿ ಅವರು ಆಗಮಿಸುವ ಸಂದರ್ಭದಲ್ಲಿ ಈ ಸಂಬಂಧ ಮನವಿ ಸಲ್ಲಿಸಲಾಗುವುದು ಎಂದರು. 

ಫೋರಂನ ಸಂಚಾಲಕರಾದ ಮೇಜರ್(ನಿ) ಬಿದ್ದಂಡ ನಂಜಪ್ಪ ಅವರು ಮಾತನಾಡಿ ನವದೆಹಲಿಯ ಮೈದಾನಕ್ಕೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಹೆಸರು ಇಟ್ಟಿರುವುದು ವಿಶೇಷವಾಗಿದೆ. ಹಾಗೆಯೇ ಪ್ರತಿಮೆಯನ್ನು ಸ್ಥಾಪಿಸಿರುವುದು ಗಮನ ಸೆಳೆಯುತ್ತದೆ ಎಂದು ಅವರು ಹೇಳಿದರು.

ಕೊಡಗಿನ ನೆಲದಲ್ಲಿ ಹುಟ್ಟಿ ಬೆಳೆದು ರಾಷ್ಟ್ರದ ಸೇನೆಯಲ್ಲಿ ಅತ್ಯುನ್ನತ್ತ ಸ್ಥಾನ ಪಡೆದು ರಾಷ್ಟ್ರಕ್ಕೆ ಹೆಸರಾಗಿದ್ದಾರೆ ಎಂದು ಅವರು ನುಡಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯ ಬರಹಗಳು ಮತ್ತು ಆಹ್ವಾನಿತ ಲೇಖಕರು ಬರೆದ ಕಾರ್ಯಪ್ಪ ಅವರ ಕುರಿತ ಲೇಖನಗಳ ಸಂಗ್ರಹವಾದ ಪತ್ರಕರ್ತ ಅನಿಲ್ ಎಚ್.ಟಿ. ನಿರ್ವಹಿಸಿದ ‘ನಿತ್ಯ ಸ್ಫೂರ್ತಿಯ ಮಹಾನ್ ಚೇತನ’ ಹೆಸರಿನ ಸ್ಮರಣ ಸಂಚಿಕೆಯನ್ನು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಬಿಡುಗಡೆ ಮಾಡಿದರು. 

ಕುಡಿಯರ ಗೋಪಮ್ಮ ಮತ್ತು ತಂಡದವರು ಜಾನಪದ ನೃತ್ಯ ಪ್ರದರ್ಶನ ಮಾಡಿದರು. ಡಾ.ರಾಘವೇಂದ್ರ ಪ್ರಸಾದ್ ಮತ್ತು ತಂಡದವರಿಂದ ವಂದೇ ಮಾತರಂ ನೃತ್ಯ ರೂಪಕ ಗಮನ ಸೆಳೆಯಿತು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮ ಮಿಶ್ರಾ, ಎನ್.ಸಿ.ಸಿ. ಮುಖ್ಯಸ್ಥರಾದ ರಾಘವ, ಕೂಡಿಗೆ ಸೈನಿಕ ಶಾಲೆಯ ಉಪ ಪ್ರಾಂಶುಪಾಲರು ಇತರರು ಹಾಜರಿದ್ದರು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಸ್ವಾಗತಿಸಿದರು. ಮೈಸೂರಿನ ರಾಘವೇಂದ್ರ ಪ್ರಸಾದ್ ಮತ್ತು ತಂಡದವರು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಮಾಧವ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News