‘ಎಂಎಸ್‍ಎಂಇ, ಇ-ಕಾಮರ್ಸ್ ಉತ್ತೇಜನಕ್ಕೆ ಅಮೆಝಾನ್ ಜತೆ ಕರ್ನಾಟಕದ ಒಪ್ಪಂದ’

Update: 2021-01-28 15:43 GMT

ಬೆಂಗಳೂರು, ಜ.28: ರಾಜ್ಯದ ಇ-ಕಾಮರ್ಸ್ ರಫ್ತು ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಇ-ಕಾಮರ್ಸ್ ದಿಗ್ಗಜ ಅಮೆಝಾನ್ ಜತೆಗಿನ ಒಪ್ಪಂದಕ್ಕೆ ಕರ್ನಾಟಕ ಸರಕಾರ ಸಹಿ ಹಾಕಿದೆ. 

ನಗರದಲ್ಲಿರುವ ಕರ್ನಾಟಕ ಉದ್ಯೋಗ ಮಿತ್ರದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ವೇಳೆ ಮಾತನಾಡಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ ಶೆಟ್ಟರ್, ಉತ್ಪಾದನೆ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ರಾಜ್ಯದ ಸಾಮಥ್ರ್ಯವನ್ನು ಜಗತ್ತಿಗೆ ಪರಿಚಯಿಸುವ ಪ್ರಯತ್ನವಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದರು.

ನೂತನ ಕೈಗಾರಿಕಾ ನೀತಿ 2020-25 ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಬೆಂಗಳೂರಿನಿಂದ ಹೊರಗೆ ಕೈಗಾರಿಕೆಗಳನ್ನು ಟಯರ್-2 ಹಾಗೂ ಟಯರ್-3 ನಗರಗಳಲ್ಲಿ ವಿಸ್ತರಿಸುವುದು ನಮ್ಮ ಉದ್ದೇಶ. ಆಟೋಮೊಬೈಲ್, ಕೃಷಿ, ಏರೋಸ್ಪೇಸ್, ಜವಳಿ, ಬಯೋಟೆಕ್, ಆಟಿಕೆಗಳು/ಕರಕುಶಲ ವಲಯದಂಥ ಹಲವಾರು ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಕರ್ನಾಟಕ ನೆಲೆಯಾಗಿದೆ ಎಂದು ಅವರು ಹೇಳಿದರು.

ಜಾಗತಿಕ ಮಟ್ಟದಲ್ಲಿ ವಿಸ್ತೃತ ಜಾಲ ಹೊಂದಿರುವ ಅಮೆಝಾನ್ ಜತೆಗಿನ ಈ ಒಪ್ಪಂದದಿಂದ ನಮ್ಮ ರಾಜ್ಯದ ಎಂಎಸ್‍ಎಂಇಗಳಿಗೆ ಉತ್ತೇಜನ ದೊರೆಯಲಿದೆ. ಸ್ಥಳೀಯವಾಗಿ ತಯಾರಾದ ಉತ್ಪನ್ನಗಳು ವಿಶ್ವದ ಯಾವುದೆ ಭಾಗದಲ್ಲಿರುವ ಗ್ರಾಹಕರನ್ನು ತಲುಪಲು ಇದರಿಂದ ನೆರವಾಗಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. 

ಹೊಸ ಕೈಗಾರಿಕಾ ನೀತಿ ಹಾಗೂ ಕೈಗಾರಿಕಾ ಸೌಲಭ್ಯ ಅಧಿನಿಯಮದ ತಿದ್ದುಪಡಿಯಿಂದ ಉದ್ಯಮ ಸ್ನೇಹಿ ವಾತಾವರಣ ಸೃಷ್ಟಿಯಾಗಿದೆ. ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್(ಎಬಿಸಿ) ಯೋಜನೆಯನ್ನು ರಾಜ್ಯ ಸರಕಾರ ಜಾರಿಗೊಳಿಸಿದೆ. ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ‘ಸಾರ್ಥಕ್’ ಕಾರ್ಯಕ್ರಮದಡಿ ಸಮಗ್ರ ವೇದಿಕೆ ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್‍ಅನ್ನು ಪರಿಚಯಿಸಲಾಗಿದೆ. ಕಚ್ಚಾವಸ್ತು ಪೂರೈಕೆದಾರರು, ಗುಣಮಟ್ಟ ಮತ್ತು ಪ್ರಮಾಣೀಕರಣದ ಜತೆಗೆ, ಸುಲಭ ಸಾಲ ಸೌಲಭ್ಯಕ್ಕೆ ಅನುವು ಮಾಡಿಕೊಡುವುದು ಈ ವೇದಿಕೆಯ ಉದ್ದೇಶ ಎಂದು ಅವರು ವಿವರಿಸಿದರು. 

ಕೋವಿಡ್‍ನಿಂದ ಅತಿ ಹೆಚ್ಚು ಹಾನಿಗೊಳಗಾದ ವಲಯಗಳಲ್ಲಿ ಒಂದಾದ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳ ಚೇತರಿಕೆಗೆ ಈ ಒಪ್ಪಂದ ನೆರವಾಗಲಿದೆ. ಅದರಂತೆ, ಬಳ್ಳಾರಿ, ಮೈಸೂರು, ಚನ್ನಪಟ್ಟಣ ಮುಂತಾದ ಪ್ರಮುಖ ಎಂಎಸ್‍ಎಂಇ ಕ್ಲಸ್ಟರ್‍ಗಳಲ್ಲಿ ಉದ್ಯಮಿಗಳಿಗೆ ಅಮೆಝಾನ್ ತರಬೇತಿ, ಕಾರ್ಯಾಗಾರಗಳನ್ನು ನಡೆಸಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ವಿಶ್ವದಾದ್ಯಂತ 30 ಕೋಟಿಗೂ ಹೆಚ್ಚು ಗ್ರಾಹಕರನ್ನು ಹೊಂದಿರುವ ಅಮೆಝಾನ್ ಬಿ2ಸಿ (ಉದ್ಯಮದಿಂದ ಗ್ರಾಹಕರಿಗೆ), ಇ-ಕಾಮರ್ಸ್ ರಫ್ತಿನ ಬಗ್ಗೆ ಈ ಕಾರ್ಯಗಳಲ್ಲಿ ಅರಿವು ಮೂಡಿಸಲಿದೆ. ಇದರಿಂದ ತಮ್ಮದೇ ಬ್ರ್ಯಾಂಡ್ ಆರಂಭಿಸಿ ಅಮೆಝಾನ್ ಗ್ಲೋಬಲ್ ಸೆಲ್ಲಿಂಗ್ ಮೂಲಕ ಅಂತರ್‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸಬಹುದು ಎಂದು ಅವರು ಹೇಳಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ರೇವಣ್ಣಗೌಡ,  ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್‍ನ ವ್ಯವಸ್ಥಾಪಕ ನಿರ್ದೇಶಕ ಸತೀಶ್ ಪಾಲ್ಗೊಂಡಿದ್ದರು.

‘ಕೋವಿಡ್ ಸಮಯದಲ್ಲಿ ಪರಿಚಯಿಸಿದ ಹೊಸ ಕೈಗಾರಿಕಾ ನೀತಿಯಿಂದ 20 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. ಪ್ರಸಕ್ತ ಸನ್ನಿವೇಶದಲ್ಲಿ ಲಾಜಿಸ್ಟಿಕ್ ಆದ್ಯತಾ ವಲಯವಾಗಿದೆ. ಇ-ಕಾಮರ್ಸ್ ವಲಯದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾದರೆ ಹೆಚ್ಚಿನ ಜನರಿಗೆ ಅನುಕೂಲವಾಗುವುದು.
ಗೌರವ್ ಗುಪ್ತ, ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ 

ಅಮೆಝಾನ್‍ನಲ್ಲಿ ಮಾರಾಟ ಮಾಡುವ ರಾಜ್ಯದ ಮಾರಾಟಗಾರರ ಪೈಕಿ ಶೇ.50ಕ್ಕೂ ಹೆಚ್ಚಿನವರು 2-3ನೇ ಹಂತದ ನಗರದವರು. ಬೆಂಗಳೂರಿನ ಆಚೆಗೆ ಉದ್ಯಮಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಸರಕಾರ ಇಟ್ಟಿರುವ ಈ ಹೆಜ್ಜೆ ಮಹತ್ವವಾದುದು.
ಗುಂಜನ್ ಕೃಷ್ಣ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News