ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಯನ್ನು ಸುಧಾರಿಸಲು ವಿಚಾರ ಸಂಕಿರಣ: ಸಚಿವ ಆರ್.ಶಂಕರ್

Update: 2021-01-30 13:19 GMT

ರಾಮನಗರ, ಜ.30: ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳ ಸುಧಾರಿಸಿ ರೈತರಿಗೆ ಲಾಭದಾಯಕ ಬೆಳೆಗಳಾಗಿ ಮಾಡಲು ತಿಂಗಳಿಗೆ ಒಂದು ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದು ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್.ಶಂಕರ್ ತಿಳಿಸಿದರು.

ತೆಂಗು ಹಾಗೂ ರೇಷ್ಮೆ ಬೆಳೆಗಳಲ್ಲಿ ಉಂಟಾಗುವ ರೋಗಗಳು ಹಾಗೂ ನಿಯಂತ್ರಣಾ ಕ್ರಮಗಳ ಬಗ್ಗೆ ತಿಳಿಯಲು ಶನಿವಾರ ವಿಜ್ಞಾನಿಗಳು ಹಾಗೂ ಅಧಿಕಾರಿಗಳೊಂದಿಗೆ ಇಲ್ಲಿನ ಭೈರಮಂಗಲದ ಚಿನ್ನಸ್ವಾಮಿ ಅವರ ತೆಂಗಿನ ತೋಟಕ್ಕೆ ಹಾಗೂ ಮಧು ಅವರು ಬೆಳೆದಿರುವ ರೇಷ್ಮೆ ಬೆಳೆಯನ್ನು ಪರಿಶೀಲಿಸಿದರು.

ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ರಾಜೇಂದ್ರ ಪ್ರಸಾದ್ ಅವರು ತೆಂಗಿನಲ್ಲಿ 4 ವಿವಿಧ ಬಿಳಿ ನೊಣದ ಪ್ರಭೇದಗಳಿಂದ ಬಾಧೆ ಉಂಟಾಗಿ ಇಳುವರಿಗೆ ತೊಂದರೆಯಾಗುತ್ತಿದೆ. ಈ ರೋಗ ನಿವಾರಿಸಲು ರಾಸಾಯನಿಕ ಕೀಟನಾಶಕ ಸಿಂಪಡಿಸಬಾರದು. ಈ ರೋಗ ನಿವಾರಿಸಲು ಶಿಲೀಂದ್ರನಾಶಕ ಐಸೈಡಿಯಾ ಸಿಂಪಡಿಸಬೇಕು ಹಾಗೂ ಪರತಂತ್ರ ಜೀವಿಗಳನ್ನು ಉಪಯೋಗಿಸಬೇಕು ಎಂದರು.

ಸಚಿವರು ಸ್ಥಳದಲ್ಲಿಯೇ ಐಸೈಡಿಯಾ ಸಿಂಪಡಣೆಯ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ಪಡೆದರು. ರೈತರು ಇವುಗಳ ಸಿಂಪರಣೆಗೆ ಬೇಕಿರುವ ಯಂತ್ರೋಪಕರಣಗಳನ್ನು ಯಂತ್ರಧಾರೆ ಯೋಜನೆಯಡಿ ಬಾಡಿಗೆಗೆ ಒದಗಿಸಿಕೊಡುವಂತೆ ಕೋರಿದರು. ಇದಕ್ಕೆ ಪ್ರತಿಕ್ರಯಿಸಿದ ಶಂಕರ್, ಅಧಿಕಾರಿಗಳಿಗೆ ತೆಂಗು ಬೆಳೆಗಾರರ ಸಂಖ್ಯೆ, ತೆಂಗು ಬೆಳೆಯ ವಿಸ್ತೀರ್ಣ ಹಾಗೂ ಬೇಕಿರುವ ಸಲಕರಣೆಗಳ ವಿವರ ನೀಡಿದರೆ ಮುಖ್ಯಮಂತ್ರಿ ಜೊತೆ ಚರ್ಚಿಸುವುದಾಗಿ ತಿಳಿಸಿದರು.

ವಿಚಾರ ಸಂಕಿರಣ: ಪ್ರತಿ ತಿಂಗಳು ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಗಳ ಬಗ್ಗೆ ವಿಚಾರ ಸಂಕಿರಣ ಆಯೋಜಿಸಲು ಚಿಂತಿಸಲಾಗುತ್ತಿದೆ. ವಿಚಾರ ಸಂಕಿರಣದಲ್ಲಿ ಬೆಳೆಯಲ್ಲಿ ಲಾಭದಾಯಕ ಹಾಗೂ ಸಂಕಷ್ಟದಲ್ಲಿರುವ ರೈತರು ಭಾಗವಹಿಸಿ ತಮ್ಮ ಅನಿಸಿಕೆ ಹಾಗೂ ಸರಕಾರದಿಂದ ಬೇಕಿರುವ ಸಹಾಯಗಳ ಬಗ್ಗೆ ಚರ್ಚಿಸಬೇಕು ಎಂದ ಅವರು, ತೋಟಗಾರಿಕೆ ಬೆಳೆ ಹಾಗೂ ರೈತರ ತೊಂದರೆಗಳ ಬಗ್ಗೆ ತಿಳಿದುಕೊಳ್ಳಲು ಜಿಲ್ಲೆಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಾಗಡಿ ಶಾಸಕ ಎ.ಮಂಜುನಾಥ್, ರೇಷ್ಮೆ ಇಲಾಖೆ ಉಪನಿರ್ದೇಶಕ ಬಿ.ಪುಟ್ಟಸ್ವಾಮಿ, ತೋಟಗಾರಿಕೆ ಇಲಾಖೆ  ಜಂಟಿ ನಿರ್ದೇಶಕ ಡಾ.ಬಿ.ಎನ್. ಪ್ರಸಾದ್, ಹಿರಿಯ ಸಹಾಯಕ ನಿರ್ದೇಶಕ ಶಂಕರ್, ಪ್ರಕಾಶ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News