ಹಳೆಯ ವ್ಯಾಜ್ಯಗಳ ತ್ವರಿತ ವಿಚಾರಣೆಗೆ ಸೂಚಿಸಲಾಗಿದೆ: ಎ.ಎಸ್.ಓಕ

Update: 2021-01-30 17:29 GMT

ಹುಬ್ಬಳ್ಳಿ, ಜ.30: ಹೈಕೋರ್ಟ್ ಸೇರಿ ವಿವಿಧ ಹಂತದ ಕೋರ್ಟ್‍ಗಳಲ್ಲಿ ಬಾಕಿ ಇರುವ 5 ರಿಂದ 10 ವರ್ಷದ ವ್ಯಾಜ್ಯಗಳನ್ನು ಆದ್ಯತೆ ಮೇರೆಗೆ ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಹೇಳಿದ್ದಾರೆ. 

ಶನಿವಾರ ಹುಬ್ಬಳ್ಳಿಯ ನೂತನ ನ್ಯಾಯಾಲಯ ಆವರಣದಲ್ಲಿ 9.8 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಹುಬ್ಬಳ್ಳಿ ವಕೀಲರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಪ್ರಕರಣ ಇರಬಾರದು ಎಂಬ ದೃಷ್ಟಿಯಿಂದ ಹಳೆಯ ವ್ಯಾಜ್ಯಗಳ ವಿಚಾರಣೆ ಪೂರ್ಣಗೊಳಿಸುವಂತೆ ನ್ಯಾಯಾಧೀಶರುಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.  

ಶೇ.50ರಷ್ಟು ಪ್ರಕರಣಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ವಾದಿ ಅಥವಾ ಪ್ರತಿವಾದಿಯಾಗಿವೆ. ವ್ಯಾಜ್ಯಗಳನ್ನು ತ್ವರಿತವಾಗಿ ಪರಿಹರಿಸುವಲ್ಲಿ ವಕೀಲರ ಸಹಾಯ ಅಗತ್ಯ ಎಂದು ತಿಳಿಸಿದರು. 

ರಾಜ್ಯ ಸರಕಾರ ನ್ಯಾಯಾಂಗ ವ್ಯವಸ್ಥೆಗೆ ಎಲ್ಲ ರೀತಿಯ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುತ್ತಿದೆ. ರಾಜ್ಯದಲ್ಲಿ ನ್ಯಾಯಾಲಯಗಳಲ್ಲಿ ಉತ್ತಮ ಸೌಲಭ್ಯಗಳಿವೆ. ಜತೆಗೆ 35 ರಿಂದ 40 ನ್ಯಾಯಾಲಯಗಳಲ್ಲಿ ಹೆಚ್ಚಿನ ಸೌಕರ್ಯ ಒದಗಿಸುವಂತೆ ಸರಕಾರಕ್ಕೆ ಕೋರಲಾಗಿದೆ. ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣ ಉತ್ತಮವಾಗಿದೆ ಎಂದು ಹೇಳಿದರು. 

ಇದರ ಆವರಣದಲ್ಲಿ ಉತ್ತಮ ಸೌಲಭ್ಯಗಳುಳ್ಳ ವಕೀಲರ ಭವನ ನಿರ್ಮಿಸಲಾಗಿದೆ. ಇದರ ಸದುಪಯೋಗವಾಗಬೇಕು. ವಕೀಲರು ನಿರ್ಭೀತರಾಗಿ ಕಾರ್ಯನಿರ್ವಹಿಸಬೇಕು. ಸಂವಿಧಾನದ 21ನೆ ವಿಧಿಯ ಅನ್ವಯ ನಾಗರಿಕರಿಗೆ ನೀಡಿರುವ ಸ್ವಾತಂತ್ರ್ಯ ರಕ್ಷಣೆಯಲ್ಲಿ ವಕೀಲರ ಪಾತ್ರ ಮಹತ್ವವಾದದ್ದು. ಸ್ವಾತಂತ್ರ್ಯ ಹೋರಾಟ ಹಾಗೂ ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವಕೀಲರು ಮುಖ್ಯಪಾತ್ರ ನಿಭಾಯಿಸಿದ್ದಾರೆ ಎಂದು ತಿಳಿಸಿದರು.

ಮಾಧ್ಯಮ ವಿಚಾರಣೆಗಳ ಸಂಪ್ರದಾಯಕ್ಕೆ ಪ್ರತಿಯಾಗಿ ವಕೀಲರು ಹಾಗೂ ನ್ಯಾಯಾಲಯಗಳು ತಮ್ಮ ಪಾತ್ರವನ್ನು ಗಟ್ಟಿಧ್ವನಿಯಲ್ಲಿ ಎತ್ತಿ ಹೇಳಬೇಕಾಗಿದೆ. ನ್ಯಾಯಾಲಯ ಹಾಗೂ ವಕೀಲರ ಸಂಘ ಸಹಕಾರದಿಂದ ಕರ್ತವ್ಯ ನಿರ್ವಹಿಸಿದೆ, ನಾಗರಿಕರಿಗೆ ಉತ್ತಮ ನ್ಯಾಯದೊರಕಲಿದೆ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News