ಮೃತರ ಕುಟುಂಬಕ್ಕೆ ಮತ್ತೆ 5 ಲಕ್ಷ ರೂಪಾಯಿ ಪರಿಹಾರ: ಎಂ.ಶಿವಣ್ಣ ಘೋಷಣೆ

Update: 2021-01-30 18:33 GMT

ಕಲಬುರಗಿ, ಜ.30: ಜ.28ರಂದು ಕಲಬುರಗಿ ನಗರದ ಕೈಲಾಸ್ ಬಡಾವಣೆಯಲ್ಲಿ ಮ್ಯಾನ್ ಹೋಲ್‍ನಲ್ಲಿ ಬಿದ್ದು ಮೃತಪಟ್ಟ ಪೌರ ಕಾರ್ಮಿಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಅವರು ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಶಿವಣ್ಣ ಅವರು, ಮ್ಯಾನ್‍ಹೋಲ್‍ಗೆ ಬಿದ್ದು ಮೃತಪಟ್ಟ ರಸೀದ್(30) ಮತ್ತು ಲಾಲ್ ಅಹ್ಮದ್(25) ಕುಟುಂಬದವರಿಗೆ ಇಂದು ಮತ್ತೆ ತಲಾ 5 ಲಕ್ಷ ರೂ.ಪರಿಹಾರ ಘೋಷಿಸಲಾಗಿದೆ. ಮನೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು. ಮೃತರಾದ ರಸೀದ್, ಲಾಲ್ ಅಹ್ಮದ್ ಅವರ ಪತ್ನಿಯರಿಗೆ ಉದ್ಯೋಗ ಕೊಡಿಸಲಾಗುವುದು ಎಂದು ಭರವಸೆ ನೀಡಿದರು. ಈ ಮೊದಲು ಮೃತರಾದ ಇಬ್ಬರಿಗೂ ತಲಾ 5 ಲಕ್ಷ ರೂ.ಪರಿಹಾರ ಘೋಷಿಸಲಾಗಿತ್ತು.          

ಸುಮಾರು ಹದಿನೆಂಟು ಅಡಿ ಆಳದ ಗುಂಡಿ ಸ್ವಚ್ಛ ಮಾಡಲು ಗುಂಡಿಗೆ ಇಳಿದಾಗ ಪೌರ ಕಾರ್ಮಿಕರಾದ ಲಾಲ್ ಅಹ್ಮದ್(25) ಮತ್ತು ರಶೀದ್(30) ಎಂಬ ಇಬ್ಬರು ಉಸಿರುಗಟ್ಟಿ ಮೃತರಾಗಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ಕಾನೂನು ಸೇವೆಗಳ ಸಮಿತಿಯ ಸದಸ್ಯರಾದ ನ್ಯಾಯವಾದಿ ಎಚ್.ವೆಂಕಟೇಶ ದೊಡ್ಡೇರಿ, ರಾಷ್ಟ್ರಿಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹೀರಾಮನಿ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸದಸ್ಯ ಗೀತಾ ವಾಡೇಕರ್, ನಾಗರಾಜ ಎಸ್. ಎಂ.ವಿ.ವೆಂಕಟೇಶ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಅಲ್ಲಾಭಕ್ಷ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಕಲಬುರಗಿ ವಲಯದ ಮುಖ್ಯ ಎಂಜಿನೀಯರ್ ದಿನೇಶ ಎಸ್.ಎನ್., ಅಧೀಕ್ಷಕ ಎಂಜಿನೀಯರ್ ಬಸವರಾಜ ಅಲೇಗಾಂವ, ಕಾರ್ಯನಿರ್ವಾಹಕ ಎಂಜಿನೀಯರ್ ನರಸಿಂಹರೆಡ್ಡಿ, ಡಿಯುಡಿಸಿ ಯೋಜನಾ ನಿರ್ದೇಶಕ ಶಿವಶರಣಪ್ಪ ನಂದಗಿರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News