ನಗರ ಸಮೀಪದಲ್ಲಿ ಚಿರತೆ, ಕರಡಿ ಪ್ರತ್ಯಕ್ಷ: ನಾಗರಿಕರಲ್ಲಿ ಆತಂಕ

Update: 2021-02-03 16:18 GMT

ಚಿಕ್ಕಮಗಳೂರು, ಫೆ.3: ನಗರದ ಸಮೀಪದಲ್ಲಿರುವ ಗಾಲ್ಫ್ ರಸ್ತೆಯಲ್ಲಿ ಚಿರತೆ ಹಾಗೂ ಕರಡಿ ಪ್ರತ್ಯಕ್ಷವಾಗಿದ್ದು, ಈ ಮಾರ್ಗದಲ್ಲಿ ಸಂಜೆ ವೇಳೆ ಜನರು ಸಂಚರಿಸಲು ಭಯ ಪಡುವಂತಾಗಿದೆ.

ಮಂಗಳವಾರ ರಾತ್ರಿ ಕಾರಿನಲ್ಲಿ ತೆರಳುತ್ತಿದ್ದವರಿಗೆ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಚಿರತೆ ಪ್ರತ್ಯೇಕ್ಷೆವಾಗಿದೆ. ಕಾರಿನ ಬೆಳಕಿಗೆ ಮುಖವೊಡ್ಡಿ ನಿಂತಿದ್ದ ಚಿರತೆ ಸ್ವಲ್ಪ ಸಮಯದ ಬಳಿಕ ಕಾಡಿನೊಳಗೆ ಹೋಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕಾರಿನಲ್ಲಿದ್ದವರು ಚಿರತೆ ರಸ್ತೆ ಬದಿಯಲ್ಲಿರುವುದನ್ನು ತಮ್ಮ ಮೊಬೈಲ್ ಪೋನ್‍ನಲ್ಲಿ ಚಿತ್ರಿಕರಿಸಿಕೊಂಡಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದೇ ರೀತಿ ಪ್ರತ್ಯೇಕ ಪ್ರಕರಣದಲ್ಲಿ ಕಾರಿನಲ್ಲಿ ಸಾಗುತ್ತಿದ್ದವರಿಗೆ ರಸ್ತೆ ಬದಿ ಸಂಚರಿಸುತ್ತಿದ್ದ ಕರಡಿ ಪ್ರತ್ಯಕ್ಷವಾಗಿದೆ. ಕರಡಿ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ದೃಶ್ಯ ಕಾರಿನಲ್ಲಿದ್ದವರು ಸೆರೆ ಹಿಡಿದಿದ್ದಾರೆ.

ಈ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗಾಲ್ಫ್ ರಸ್ತೆಯಲ್ಲಿ ಜನರು ಓಡಾಡಲು ಭಯಪಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News