ಗಾಜೀಪುರ ಗಡಿಯಲ್ಲಿ ರಾಕೇಶ್ ಟಿಕಾಯತ್ ರನ್ನು ಭೇಟಿಯಾದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್
ಹೊಸದಿಲ್ಲಿ, ಫೆ.4: ದಿಲ್ಲಿ ಗಡಿಭಾಗಗಳಲ್ಲಿ ಪ್ರತಿಭಟನೆ ನಿರತರಾಗಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಗಾಜೀಪುರ ಗಡಿಯಲ್ಲಿ ಭೇಟಿಯಾದರು.
ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ನವೆಂಬರ್ ತಿಂಗಳಿಂದ ದಿಲ್ಲಿ ಗಡಿಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೋಡಿಹಳ್ಳಿ ಚಂದ್ರಶೇಖರ್ ಅವರು ಇಂದು ಗಾಜೀಪುರ ಗಡಿಗೆ ಭೇಟಿ ನೀಡಿ ರೈತರ ಹೋರಾಟದಲ್ಲಿ ಕೈಜೋಡಿಸಿದರು.
ಬಳಿಕ ಮಾತನಾಡಿದ ಅವರು, ರಾಕೇಶ್ ಟಿಕಾಯತ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟಕ್ಕೆ ಕರ್ನಾಟಕದಿಂದ ಬಂದ ರೈತರು ಸಂಪೂರ್ಣವಾಗಿ ಬೆಂಬಲ ನೀಡಿದ್ದಾರೆ. ಸರಕಾರವು ಈ ಕಾನೂನುಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಕರ್ನಾಟಕದ ರೈತರ ಪರವಾಗಿ ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಅಲ್ಲದೇ, 6ನೇ ತಾರೀಖಿನ ಬಳಿಕ ಈ ಜಾಗಕ್ಕೆ ಕನಿಷ್ಠ 4 ಸಾವಿರ ರೈತರು ಬಂದು ಸೇರುತ್ತೇವೆ. ರಾಕೇಶ್ ಟಿಕಾಯತ್ ಅವರ ನೇತೃತ್ವದ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ರೈತರ ಹೋರಾಟಕ್ಕೆ ಜಯವಾಗಲಿ ಎಂದು ಹೇಳಿದರು.