ಹುಣಸೋಡು ಸ್ಫೋಟ ಪ್ರಕರಣ: ಮತ್ತೊಬ್ಬ ಆರೋಪಿಯ ಸೆರೆ, ಬಂಧಿತರ ಸಂಖ್ಯೆ 9ಕ್ಕೆ ಏರಿಕೆ
ಶಿವಮೊಗ್ಗ, ಫೆ.12: ಹುಣಸೋಡು ಸ್ಫೋಟ ಪ್ರಕರಣ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಒಟ್ಟು ಸಂಖ್ಯೆ 9ಕ್ಕೆ ಏರಿದೆ.
ಅನಂತಪುರಂನ ರಾಯದುರ್ಗದಲ್ಲಿ 9ನೇ ಆರೋಪಿಯಾಗಿ ಪೃಥ್ವಿರಾಜ್ ಸಾಯಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಬಂಧಿಸಲ್ಪಟ್ಟಿರುವ ಶ್ರೀರಾಮುಲುವಿನ ಪುತ್ರ. ಪೃಥ್ವಿರಾಜ್ ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದ್ದಾರೆ.
ಬಂಧಿತ ಶ್ರೀರಾಮುಲುವಿಗೆ ಸಂಬಂಧಪಟ್ಟ ಸ್ಫೋಟಕ ದಾಸ್ತಾನು ಗೋದಾಮಿನಲ್ಲಿ ಅಕ್ರಮವಾಗಿ ಒಂದು ಲೋಡ್ ಸ್ಫೋಟಕಗಳನ್ನು ದಾಸ್ತಾನು ಮಾಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಈ ಸಂಬಂಧ ಈಗಾಗಲೇ ಶ್ರೀರಾಮುಲು ಹಾಗೂ ಆತನ ಮಗ ಪಿ.ಮಂಜುನಾಥ್ ಸಾಯಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಇದುವರೆಗೆ ಪ್ರಕರಣದಲ್ಲಿ 9 ಜನರನ್ನು ಬಂಧಿಸಿದಂತಾಗಿದೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸ್ಫೋಟ ಪ್ರಕರಣ ದಾಖಲಾಗಿದೆ.