18 ಸಾವಿರ ಕೋಟಿ ರೂ. ಅದಿರು ನಿಧಿ ಬಳಸಲು ಕಾನೂನಿನ ನೆರವು ಕೋರಿದ ಸಚಿವ ಮುರುಗೇಶ್ ನಿರಾಣಿ

Update: 2021-02-13 14:37 GMT

ಹೊಸದಿಲ್ಲಿ, ಫೆ. 13: ಸುಪ್ರೀಂಕೋರ್ಟ್ ನಿದೇರ್ಶನದಂತೆ ಆರು ವರ್ಷಗಳಿಂದ ಕಬ್ಬಿಣದ ಅದಿರು ಗಣಿ ಕಂಪೆನಿಗಳಿಂದ ಸಂಗ್ರಹಿಸಿರುವ ಸುಮಾರು 18 ಸಾವಿರ ಕೋಟಿ ರೂ.ಯನ್ನು ಕರ್ನಾಟಕಕ್ಕೆ ನೀಡುವ ನಿಟ್ಟಿನಲ್ಲಿ ಕಾನೂನು ಮತ್ತು ಆಡಳಿತಾತ್ಮಕ ನೆರವು ನೀಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.

ಶನಿವಾರ ದಿಲ್ಲಿಯಲ್ಲಿ ಈ ಸಂಬಂಧ ಭೇಟಿ ಮಾಡಿದ ಅವರು, ಅಧಿಕೃತವಾಗಿ ರಾಜ್ಯದ ಪರವಾಗಿ ಮನವಿಪತ್ರವನ್ನು ಸಲ್ಲಿಸಿದರು. ಹೈಕೋರ್ಟ್ ನಿರ್ದೇಶನದಂತೆ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸಿರುವ ದಂಡ ಮತ್ತು ಸುಂಕದ (ಲೆವಿ) ರೂಪದಲ್ಲಿ ಸಂಗ್ರಹಿಸಿದ ಸುಮಾರು 18 ಸಾವಿರ ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ.

ಆ ಹಣವನ್ನು ಗಣಿಗಾರಿಕೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ರೂಪುರೇಷೆಯನ್ನು ಸಿದ್ಧಪಡಿಸುವ ಕುರಿತಂತೆ ಪ್ರಹ್ಲಾದ್ ಜೋಶಿ ಅವರ ಜೊತೆ ಸಚಿವ ನಿರಾಣಿ ಸಮಗ್ರವಾಗಿ ಚರ್ಚಿಸಿದ್ದಾರೆ. ನಿಧಿ ಬಳಕೆಗೆ ನ್ಯಾಯಾಲಯವು ಅನುಮತಿ ನೀಡಿದರೆ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ ಮತ್ತು ತುಮಕೂರು ಸೇರಿದಂತೆ ಗಣಿಗಾರಿಕೆ ನಡೆಯುವ ಪ್ರದೇಶಗಳಲ್ಲಿ ಈ ಭಾಗದ ಜನರಿಗೆ ಪುನರ್ವಸತಿಗೆ ಅವಕಾಶ ನೀಡುವ ಅಗತ್ಯದ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ಅವರು ತಂದರು.

ಈಗಾಗಲೇ ಒರಿಸ್ಸಾದಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸಿದ ಕಂಪೆನಿಗಳನ್ನು ಆಯಾ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಸೇರಿದಂತೆ ಮತ್ತಿತರ ಅಗತ್ಯತೆಗಳನ್ನು ಕಲ್ಪಿಸಿಕೊಡಲು ಅನುಮತಿ ನೀಡಿತ್ತು. ನಮ್ಮ ರಾಜ್ಯದ ಒಂದು ಪ್ರಕರಣದಲ್ಲಿ ಇದೇ ರೀತಿಯ ಆದೇಶ ಬಂದಿತ್ತು ಎಂಬುದನ್ನು ಮನವರಿಕೆ ಮಾಡಿಕೊಟ್ಟರು.

ಪ್ರಸ್ತುತ ನ್ಯಾಯಾಲಯದ ಅಧೀನದಲ್ಲಿರುವ 18 ಸಾವಿರ ಕೋಟಿ ರೂ.ಗಳು ಹಾಗೂ ಮುಂದೆ ಸಂಗ್ರಹವಾಗಲಿರುವ ರಾಜಧನ ಸೇರಿದಂತೆ ಒಟ್ಟು 25 ಸಾವಿರ ಕೋಟಿ ರೂ.ಕ್ರಿಯಾ ಯೋಜನೆಯನ್ನು ಇಲಾಖೆ ಸಿದ್ಧಪಡಿಸಿದೆ ಎಂದ ಅವರು, ವಿವಿಧ ಜಿಲ್ಲೆಗಳಲ್ಲಿ ಜಿಲ್ಲಾ ಖನಿಜ ನಿಧಿ ಅಡಿ 2,200ಕೋಟಿ ರೂ.ಸಂಗ್ರಹವಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು ಮುಖ್ಯಸ್ಥರಾಗುತ್ತಾರೆ. ಈ ಹಣದಿಂದಲೂ ನಾವು ವಿವಿಧ ರೀತಿಯ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳಬಹುದಾಗಿದೆ. ಕೇಂದ್ರ ನಮಗೆ ಅಗತ್ಯ ನೆರವು ನೀಡಬೇಕೆಂದು ನಿರಾಣಿ ಒತ್ತಾಯ ಮಾಡಿದರು.

ಬಾಕಿ ಪ್ರಸ್ತಾವನೆಗಳಿಗೆ ಅನುಮತಿ ಕೊಡಿ: ರಾಜ್ಯದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಗಣಿಗಾರಿಕೆ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿದ್ದು, ಮೈಸೂರು ಮಿನರಲ್ಸ್ ಲಿಮಿಟೆಡ್ ಎಂಬ ಸಂಸ್ಥೆಯ ಹೆಸರನ್ನು ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿ. ಎಂದು ಬದಲಾಯಿಸುವ ಪ್ರಸ್ತಾವನೆಯೂ ಸೇರಿದಂತೆ, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪಡುವರಿ, ಯಡಿಟರೆ ಮತ್ತು ಬೈಂದೂರುಗಳಲ್ಲಿ ಬಾಕ್ಸೈಟ್ ಖನಿಜಕ್ಕಾಗಿ 120.60 ಹೆಕ್ಟೇರ್ ಪ್ರದೇಶವನ್ನು ಕಾಯ್ದಿರಿಸಲಾಗಿದೆ. 

ಕುಂದಾಪುರ ತಾಲೂಕಿನ ಪಡುವರೆ ಗ್ರಾಮದಲ್ಲಿ 23.80 ಹೆಕ್ಟೇರ್ ಪ್ರದೇಶವನ್ನು ಕಾಯ್ದಿರಿಸಲಾಗಿದೆ. ಈ ಪ್ರಸ್ತಾಪವು ಕೇಂದ್ರದ ಮುಂದೆ ಬಾಕಿ ಉಳಿದಿದೆ. ಉದ್ದೇಶಿತ ಕಾರ್ಯಯೋಜನೆ ಜಾರಿಗೊಳಿಸುವ ಅಗತ್ಯ ಇದೆ ಎಂಬುದನ್ನು ಸಚಿವ ಜೋಶಿ ಅವರಿಗೆ ಮನವರಿಕೆ ಮಾಡಿಕೊಟ್ಟರು.

ಅಂತೆಯೇ ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಗಣಿಗಾರಿಕೆಗಾಗಿ 145 ಹೆಕ್ಟೇರ್ ಗಣಿಗಾರಿಕೆಗೆ ಸಂಬಂಧಿಸಿದ ಪ್ರಸ್ತಾವನೆ ಕೇಂದ್ರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್ ಮತ್ತು ಸಿಸಿ) ಬಾಕಿ ಇದೆ. ಈ ಬಗ್ಗೆ ಕರ್ನಾಟಕ ಅರಣ್ಯ ಮತ್ತು ಪರಿಸರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನುಮೋದನೆ ನೀಡುವ ಬಗ್ಗೆ ಕೋರಿತ್ತು. ಗಣಿಕಾರಿಕೆ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಿದರೆ ರಾಜ್ಯದ ವರಮಾನ ಹೆಚ್ಚಾಗಲಿದೆ ಎಂದು ಅವರು ತಿಳಿಸಿದರು.

ಲಕ್ಷಾಂತರ ಉದ್ಯೋಗಗಳ ಸೃಷ್ಟಿಗೆ ನೆರವು ಆಗುತ್ತದೆ ಈ ಬಗ್ಗೆ ಸೂಕ್ತ ತೀರ್ಮಾನವನ್ನು ತೆಗೆದುಕೊಳ್ಳಬೇಕೆಂದು ರಾಜ್ಯ ಸರಕಾರದ ಪರವಾಗಿ ಕೇಂದ್ರ ಸಚಿವರಿಗೆ ಮನವಿ ಮಾಡಿದ ನಿರಾಣಿ, ಈ ಸಂಬಂಧ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ಭರವಸೆಯನ್ನೂ ಕೇಂದ್ರ ಸಚಿವ ಜೋಶಿ ನೀಡಿದರು ಎಂದು ಗೊತ್ತಾಗಿದೆ. ಕರ್ನಾಟಕದಲ್ಲಿ ಪ್ರಸ್ತಾವಿತ ಗಣಿಕಾರಿಕೆ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂಬ ಸಂಗತಿ ನನ್ನ ಗಮನಕ್ಕೂ ಬಂದಿದೆ. ಸದ್ಯದಲ್ಲೇ ಅಧಿಕಾರಿಗಳ ಸಭೆ ಕರೆದು ಕಾನೂನಿನ ವ್ಯಾಪ್ತಿಯಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳುವ ಬಗ್ಗೆ ನಿರ್ದೇಶನ ನೀಡುವುದಾಗಿ ಅಭಯ ನೀಡಿದ್ದಾರೆ.

‘ರಾಜ್ಯ ಸರಕಾರ ಮುಂದಿಟ್ಟಿರುವ ಪ್ರಸ್ತಾವನೆಗಳನ್ನು ಅಧಿಕಾರಿಗಳ ಜೊತೆ ಚರ್ಚೆಸಿ ಸೂಕ್ತ  ನಿರ್ಧಾರ ತೆಗೆದುಕೊಳ್ಳುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಂದ ಭರವಸೆ ಸಿಕ್ಕಿದೆ. ನಮಗೆ ಕೇಂದ್ರ ಸರಕಾರದಿಂದ ನ್ಯಾಯ ಸಿಗುವ ವಿಶ್ವಾಸವಿದೆ’

-ಮುರುಗೇಶ್ ಆರ್.ನಿರಾಣಿ, ಗಣಿ ಮತ್ತು ಭೂ ವಿಜ್ಞಾನ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News