ಬಿಜಾಪುರ: ಸಾಮುದಾಯಿಕ ಸಂಸ್ಥೆಗಳ ದಾಖಲೆಗಳನ್ನು ಸರಿಯಾಗಿಡಿ; ಮೌಲಾನಾ ಸಯ್ಯದ್ ತನ್ವೀರ್ ಪೀರಾನ್ ಹಾಶ್ಮೀ
ಬಿಜಾಪುರ: ಭಾರತೀಯ ಸಮಾಜದಲ್ಲಿ ಮುಸ್ಲಿಮ್ ಸಮುದಾಯದ ಮೇಲೆ ಅನೇಕ ಗುರುತರವಾದ ಸಾಮಾಜಿಕ ಹೊಣೆಗಾರಿಕೆಗಳಿವೆ. ಮುಸ್ಲಿಮರು ತಮ್ಮ ಮನೆ ಮತ್ತು ಕುಟುಂಬದೊಳಗೆ ಧರ್ಮದ ವಿಶಾಲ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಜೊತೆ ತಮ್ಮ ಸಾಮಾಜಿಕ ಕರ್ತವ್ಯಗಳ ಕಡೆಗೂ ಗಮನ ಹರಿಸಬೇಕು. ಎಂತಹ ದಾರಿದ್ರ್ಯದ ಸ್ಥಿತಿಯಲ್ಲೂ ಶಿಕ್ಷಣದಿಂದ ವಿಮುಖರಾಗಬಾರದು ಎಂದು ಪ್ರಖ್ಯಾತ ವಿದ್ವಾಂಸ ಮೌಲಾನಾ ಸಯ್ಯದ್ ತನ್ವೀರ್ ಪೀರಾನ್ ಹಾಶ್ಮೀ ಕರೆ ನೀಡಿದ್ದಾರೆ.
ಅವರು ಫೆಬ್ರವರಿ 13 ರಂದು ಬಿಜಾಪುರದಲ್ಲಿ ಜರಗಿದ ಮುಸ್ಲಿಮ್ ಮುತ್ತಹಿದಾ ಕೌನ್ಸಿಲ್ (ಎಂ.ಎಂ.ಸಿ) ಇದರ ಜಿಲ್ಲಾ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಮುಸ್ಲಿಮರು ಎಲ್ಲೆಡೆಯೂ ತಮ್ಮ ಮಸೀದಿ, ಮದ್ರಸಾ, ವಿದ್ಯಾ ಸಂಸ್ಥೆಗಳು ಮತ್ತು ವಕ್ಫ್ ಸೊತ್ತುಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಸರಿಯಾದ ಸ್ಥಿತಿಯಲ್ಲಿಡಬೇಕು. ಬಿಜಾಪುರ ಜಿಲ್ಲೆಯಲ್ಲೇ ವಕ್ಫ್ ಮಾಲಕತ್ವದ ನಾಲ್ಕು ಸಾವಿರಕ್ಕೂ ಅಧಿಕ ಸೊತ್ತುಗಳಿದ್ದು ಆ ಪೈಕಿ ಹೆಚ್ಚಿನ ಸೊತ್ತುಗಳ ದಾಖಲೆ ಪತ್ರಗಳು ಸರಿಯಾಗಿಲ್ಲ. ಈ ಕುರಿತು ಸಮುದಾಯವು ತಕ್ಷಣ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದರು. CAA,NPR, NRC ಮುಂತಾದ ಸವಾಲುಗಳ ವಿಷಯದಲ್ಲಿ ಸಮಾಜದ ಎಲ್ಲ ಸದಸ್ಯರಲ್ಲಿ ಜಾಗೃತಿ ಮೂಡಿಸಬೇಕೆಂದು ಅವರು ಹೇಳಿದರು.
ಮೌಲಾನಾ ಹಶ್ಮತ್ ಅಲಿ ನೂರಿ, ಮುಹಮ್ಮದ್ ಯೂಸುಫ್ ಖಾಝಿ, ಪ್ರೊ. ಅಬ್ದುರ್ರಹ್ಮಾನ್, ಪ್ರೊ. ಅಸ್ಲಮ್ ಮುಜಾವರ್, ಮೌಲಾನಾ ಶಾಕಿರ್ ಹುಸೈನ್ ಖಾಸಿಮೀ, ಮೌಲಾನಾ ಹಾಫಿಜ್ ಹುಸೈನ್ ಉಮರೀ, ಶಾಹೀನ್ ಸಮೂಹ ಸಂಸ್ಥೆಗಳ ಮುಖ್ಯಸ್ಥ ಡಾ. ಅಬ್ದುಲ್ ಖದೀರ್ ಮುಂತಾದವರು ಅಥಿತಿಗಳಾಗಿದ್ದರು.