ಕತ್ತೆಗಳಿಗೆ ಮದುವೆ ಮಾಡಿಸಿ 'ಪ್ರೇಮಿಗಳ ದಿನಾಚರಣೆ' ಆಚರಿಸಿದ ವಾಟಾಳ್ ನಾಗರಾಜ್

Update: 2021-02-14 13:55 GMT

ಬೆಂಗಳೂರು, ಫೆ.14: ಪ್ರೇಮಿಗಳ ದಿನಾಚರಣೆ ಹಿನ್ನೆಲೆ ಕತ್ತೆಗಳಿಗೆ ವಿನೂತನ ರೀತಿಯಲ್ಲಿ ವಿವಾಹ ಮಾಡಿಸುವ ಮೂಲಕ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರೇಮಿಗಳ ದಿನವನ್ನು ಆಚರಿಸಿದರು.

ರವಿವಾರ ನಗರದ ಕಬ್ಬನ್‍ ಉದ್ಯಾನದಲ್ಲಿ ವಾಟಾಳ್ ನಾಗರಾಜ್ ಅವರು ‘ಸುಂದರಾಂಗ-ಸೌಂದರ್ಯವತಿ’ ಹೆಸರಿನ ಎರಡು ಕತ್ತೆಗಳಿಗೆ ವಿವಾಹ ಮಾಡಿಸಿದರು.

ಬೆಳಗ್ಗೆ ಬೆಳ್ಳಿ ರಥದಲ್ಲಿ ಎರಡೂ ಕತ್ತೆಗಳನ್ನು ಕಬ್ಬನ್‍ಉದ್ಯಾನಕ್ಕೆ ಕರೆತಂದು ಸುಂದರಾಂಗ ಮತ್ತು -ಸೌಂದರ್ಯವತಿ ಎಂದು ನಾಮಕರಣ ಮಾಡಿ ವಿವಾಹ ನಡೆಸಿಕೊಟ್ಟರು. ಸೌಂದರ್ಯವತಿ ಕತ್ತೆಗೆ ಹಳದಿ ವಸ್ತ್ರ ಹಾಗೂ ಸುಂದರಾಂಗ ಕತ್ತೆಗೆ ಬಿಳಿ ವಸ್ತ್ರವನ್ನು ಹಾಕಿ ತಾಳಿ ಕಟ್ಟಿಸಿ, ಮಂಗಳ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಿದರು.

ನಂತರ ಅಲ್ಲಿ ಪಾಲ್ಗೊಂಡಿದ್ದ ಪ್ರೇಮಿಗಳಿಗೆ ಗುಲಾಬಿ ಹೂ ಕೊಟ್ಟು ಶುಭ ಹಾರೈಸಿದರು. ಬಳಿಕ ಕಬ್ಬನ್‍ ಉದ್ಯಾನದಿಂದ ಎಂ.ಜಿ. ರಸ್ತೆವರೆಗೆ ಬೆಳ್ಳಿ ರಥದಲ್ಲಿ ಯುವ ಪ್ರೇಮಿಗಳನ್ನು ಕೂರಿಸಿ ಮೆರವಣಿಗೆ ನಡೆಸುವ ಮೂಲಕ ಗಮನ ಸೆಳೆದರು.

ಈ ವೇಳೆ ಮಾತನಾಡಿದ ವಾಟಾಳ್‍ ನಾಗರಾಜ್, ಯುವ ಪ್ರೇಮಿಗಳಿಗೆ ರಕ್ಷಣೆ ದೊರೆಯಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಂತಹ ಒಂದು ಕಾನೂನನ್ನು ರಚಿಸಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News