ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳನ್ನಾಗಿಸುವ ಕಾರ್ಯ ಮುಂದಿನ ವರ್ಷ ಪೂರ್ಣ: ಯಡಿಯೂರಪ್ಪ

Update: 2021-02-14 16:41 GMT

ದಾವಣಗೆರೆ, ಫೆ.14: ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿರುವ ಎಲ್ಲಾ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು.

ನ್ಯಾಮತಿ ತಾಲೂಕಿನ ಸೂರಗೊಂಡನ ಕೊಪ್ಪ ಭಾಯಾಗಢ್ ನ ಶ್ರೀ ಸಂತ ಸೇವಾಲಾಲ್ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿ ಸಹಯೋಗದಲ್ಲಿ ಸಂತ ಸೇವಾಲಾಲ್ ಅವರ 282ನೇ ಜಯಂತ್ಯೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ ಹೊಂದಿರುವ ಈ ಸಮಾಜ ತನ್ನ ಕಾಯಕ ನಿಷ್ಠೆಯಿಂದ ಶ್ರಮಿಕ ವರ್ಗವಾಗಿದ್ದು, ಬೇಡದೆ ದುಡಿದು ತಿನ್ನುವ ಒಂದು ಸಮಾಜವಾಗಿದೆ ಎಂದರು. 

ತನ್ನ ಪಾರಂಪರಿಕ ಗುಳೆ ಸಂಸ್ಕೃತಿಯಂತೆ ಈ ಸಮಾಜ ಪ್ರತಿ ವರ್ಷ ಉದ್ಯೋಗ ಅರಸಿ ವಲಸೆಯನ್ನು ಅವಲಂಬಿಸಿತ್ತು. ಆದರೆ, ಈ ವರ್ಷ ಸಂಭವಿಸಿದ ಕೊರೋನ ಪರಿಸ್ಥಿತಿಯಿಂದ ಗುಳೆ ಹೋದ ಸಂದರ್ಭದಲ್ಲಿ  ಅವರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಯಿತು. ಹಾಗಾಗಿ, ಈ ಗುಳೆ ಸಂಸ್ಕೃತಿ ತಪ್ಪಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ತಾಂಡಾ ರೋಜ್‍ಗಾರ್ ಯೋಜನೆಯ ಮೂಲಕ ಅವರು ವಾಸಿಸುವ ಗ್ರಾಮಗಳಲ್ಲಿ ಉದ್ಯೋಗ ನೀಡಲು ಅವಕಾಶ ಕಲ್ಪಿಸಲಾಗಿದೆ ಹಾಗೂ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದರೊಂದಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಇವರ ಗ್ರಾಮಗಳಿಗೆ ವ್ಯವಸ್ಥಿತ ರಸ್ತೆ ಅಭಿವೃದ್ಧಿ  ಹಾಗೂ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದರು.

ಬಂಜಾರ ಭಾಷೆಯನ್ನು ಉಳಿಸಲು ಹಾಗೂ ಬಂಜಾರ ಭಾಷಾ ಸಂಸ್ಕೃತಿ ಅಭಿವೃದ್ಧಿ ಪಡಿಸಲು ಡಾ. ಹಂ.ಪ ನಾಗರಾಜಯ್ಯ ನೇತೃತ್ವದ ತಜ್ಞರ ಸಮಿತಿ ವರದಿಯಂತೆ “ಬಂಜಾರ ಭಾಷಾ ಅಕಾಡೆಮಿ” ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಅಕಾಡೆಮಿ ಸ್ಥಾಪನೆಗೆ ಆದೇಶಿಸಲಾಗಿದೆ. ಹುಮ್ನಬಾದ್ ಬಳಿಯ ಲಾಲ್‍ಗರಿಯಲ್ಲಿ 34 ಎಕರೆ ಪ್ರದೇಶದಲ್ಲಿ ಸಿದ್ಧ ಉಡುಪು ಘಟಕ, ಕೊಪ್ಪಳದ ಬಹುದ್ದೂರು ಬಂಡಿ ಅಭಿವೃದ್ಧಿಗೆ ರೂ. 50 ಕೋಟಿ ಅನುದಾನ ಒದಗಿಸಲಾಗಿದೆ. ಸೂರಗೊಂಡನಕೊಪ್ಪದ ಸಂತ ಸೇವಲಾಲ್ ಪ್ರತಿಷ್ಠಾನದ ಅಭಿವೃದ್ಧಿಗೆ 10 ಕೋಟಿ, ಚಿನ್ನಿಕಟ್ಟೆಯಿಂದ ಸೂರಗೊಂಡನಕೊಪ್ಪ ರಸ್ತೆ ಅಭಿವೃದ್ಧಿಗೆ ರೂ. 10 ಕೋಟಿ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಶೀಘ್ರದಲ್ಲೆ ಸೂರಗೊಂಡನಕೊಪ್ಪ ಸಮೀಪ ರೈಲ್ವೆ ಸಂಪರ್ಕ ದೊರೆಯಲಿದ್ದು, ಈ ರೈಲ್ವೆ ನಿಲ್ದಾಣಕ್ಕೆ ಭಾಯಾಗಡ್ ನಿಲ್ದಾಣ ಎಂಬ ಹೆಸರಿಡಲು ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗುವುದು. ಈ ಕ್ಷೇತ್ರಕ್ಕೆ ಆಗಮಿಸುವ ಮಹಾರಾಷ್ಟ್ರ ಸೇರಿದಂತೆ ವಿವಿಧ ಪ್ರದೇಶಗಳಿಂದ ಆಗಮಿಸುವ ಭಕ್ತರಿಗೆ ಹಾಗೂ ಈ ಭಾಗದ ಜನರಿಗೆ ಅನುಕೂಲ ಆಗಲಿದೆ. ಸಂತ ಸೇವಾಲಾಲರ ಈ ಪುಣ್ಯ ಕ್ಷೇತ್ರ ಒಂದು ಧಾರ್ಮಿಕ ಕ್ಷೇತ್ರವಾಗಿಯಷ್ಟೇ ಉಳಿಯದೆ ಬಂಜಾರ ಸಮುದಾಯದ ಆಚಾರ-ವಿಚಾರ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಲು ಒಂದು ಪ್ರಮುಖ ಪ್ರವಾಸಿ ತಾಣವಾಗಿ ಅಭಿವೃದ್ದಿ ಕೇಂದ್ರವಾಗಬೇಕು ಎಂದರು.

ಸಂತ ಸೇವಲಾಲ್‍ರ ಈ ಕ್ಷೇತ್ರ ಒಂದು ಪ್ರವಾಸಿ ತಾಣವಾಗಿ ಆಗುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಂಡಾ ಅಭಿವೃದ್ಧಿ ನಿಗಮದ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಸಮಗ್ರವಾಗಿ ಅಭಿವೃದ್ದಿ ಪಡಿಸಲು ನೆರವು ನೀಡಲಾಗುವುದು ಎಂದು ಹೇಳಿದರು.

ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಮಾತನಾಡಿ, ಬಂಜಾರ ಸಮುದಾಯ ಕಸೂತಿ ಕಲೆಯಲ್ಲಿ ವಿಶಿಷ್ಟ ಪರಿಣಿತಿ ಹೊಂದಿದ್ದು ಬಂಜಾರ ಸಿದ್ಧ ಉಡುಪು ಘಟಕಗಳ ಸ್ಥಾಪನೆಗೆ ಪ್ರತಿ ಜಿಲ್ಲೆಗೆ 5 ಕೋಟಿ ವೆಚ್ಚದಲ್ಲಿ ಉದ್ಯಮ ಸ್ಥಾಪನೆಗೆ ಅನುವು ಮಾಡಿಕೊಟ್ಟರೆ ಈ ಸಮಾಜ ಗುಳೆಯಿಂದ ಹೊರಗುಳಿದು ಒಂದೆಡೆ ನೆಲೆ ನಿಲ್ಲಲಿದೆ. ಪ್ರತಿ ತಾಂಡಾಾಗಳಲ್ಲಿ ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ಸರ್ಕಾರ ತೆರೆಯಬೇಕು ಹಾಗು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಹೆಚ್ಚು ಅನುದಾನ ಒದಗಿಸಬೇಕೆಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ಈ ಕ್ಷೇತ್ರದ ಅಭಿವೃದ್ದಿಗೆ ಯಡಿಯೂರಪ್ಪನವರ ಕೊಡುಗೆ ಅಪಾರವಾಗಿದ್ದು ಈ ಭಾಗದ ಕೆರೆಗಳನ್ನು ತುಂಬಿಸಲು 435 ಕೋಟಿ ರೂ. ಬಿಡುಗಡೆ ಮಾಡಿದ್ದು, ಕ್ಷೇತ್ರದಲ್ಲಿ ತುಂಗಭದ್ರಾ ನದಿಯಿಂದ ಕುಡಿಯುವ ನೀರಿಗಾಗಿ 72 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದೆ. ಭಕ್ತರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಭಾಯಗಡ್ ರೈಲ್ವೆ ಯೋಜನೆ ಸರ್ವೇ ಆಗಿದ್ದು,  46 ರೂ. ಕೋಟಿಗೆ ಡಿಪಿಆರ್ ಆಗಿದೆ ಹಾಗೂ ತಾಂಡಾ ಅಭಿವೃದ್ಧಿ ನಿಗಮದಿಂದ ಈ ಪುಣ್ಯ ಕ್ಷೇತ್ರ ಒಂದು ರೀತಿ ಎರಡನೇ ಧರ್ಮಸ್ಥಳದಂತೆ ಅಭಿವೃದ್ಧಿ ಹೊಂದುತ್ತಿದೆ ಎಂದರು.

ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ. ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿದರು.   

ಇದೇ ಸಂದರ್ಭದಲ್ಲಿ ಬಂಜಾರ ಮಾದರಿಯ ಆಧುನಿಕ ಶೈಲಿಯ ವಿವಿಧ ಉಡುಪುಗಳನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದರು. ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ತೋಟಗಾರಿಕೆ ಸಚಿವ ಆರ್.ಶಂಕರ್, ಸಂಸದರಾದ ಜಿ.ಎಂ.ಸಿದ್ದೇಶ್ವರ, ಬಿ.ವೈ.ರಾಘವೇಂದ್ರ, ಜಿಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಶಿವಮೊಗ್ಗ ಗ್ರಾಮೀಣ ಶಾಸಕ ಅಶೋಕ್ ನಾಯಕ, ಪ್ರತಿಷ್ಠಾನದ ಅಧ್ಯಕ್ಷ ರುದ್ರಪ್ಪ ಲಮಾಣಿ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಜಿ.ಪಂ. ಸದಸ್ಯರಾದ ಉಮಾ ರಮೇಶ್, ಸುರೇಂದ್ರನಾಯ್ಕ್ , ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತಪ್ಪ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News