ಕಲ್ಲುಗಣಿ, ಕ್ರಷರ್ ಅನುಮತಿಗಾಗಿ ಬಾಕಿ ಇರುವ ನಿರಪೇಕ್ಷಣಾ ಪತ್ರಗಳನ್ನು ತಕ್ಷಣ ಕೊಡಿ: ಕೆಡಿಪಿ ಸಭೆಯಲ್ಲಿ ಸಿಎಂ ಸೂಚನೆ

Update: 2021-02-14 16:49 GMT

ಶಿವಮೊಗ್ಗ: ಮರಳು ಸಾಗಾಣಿಕೆ ಮತ್ತು ಜಲ್ಲಿ ಸಾಗಾಣಿಕೆಗೆ ಯಾವುದೇ ತೊಂದರೆ ಮಾಡದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಖಡಕ್ ಸೂಚನೆ ನೀಡಿದರು.

ಶಿಕಾರಿಪುರ ತಾಲೂಕು ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆ ಆಗದಂತೆ ಜಲ್ಲಿ ಮತ್ತು ಮರಳು ಸಾಗಾಣಿಕೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಪರವಾನಿಗೆ ಪಡೆದು ನಡೆಯುತ್ತಿರುವ ಕಲ್ಲುಗಣಿ, ಕ್ರಷರ್ ಕಾರ್ಯ ನಿಲ್ಲಬಾರದು. ಅನುಮತಿಗಾಗಿ ಬಾಕಿ ಇರುವ ನಿರಪೇಕ್ಷಣಾ ಪತ್ರಗಳನ್ನು ತಕ್ಷಣ ನೀಡಬೇಕು ಎಂದರು.

ಕಾನೂನು ಬಾಹಿರವಾಗಿ ನಡೆಯುವ ಮರಳು ಮತ್ತು ಜಲ್ಲಿ ಸಾಗಾಣಿಕೆ ತಡೆಯುವಂತೆ ಸೂಚಿಸಿದ ಅವರು, ಮನೆ ಕಟ್ಟಲು, ರಸ್ತೆ ಕಾಮಗಾರಿಗೆ ತೊಂದರೆ‌ ನೀಡಬಾರದು. ಕಾನೂನು ಇರುವುದು ಜನರಿಗೆ ಅನುಕೂಲವಾಗಬೇಕೆಂದು ವಿನಃ ತೊಂದರೆ ಕೊಡಲು ಅಲ್ಲ ಎಂದು ಹೇಳಿದರು.

ಈ ಹಣಕಾಸು ಸಾಲಿನಲ್ಲಿ ಅನುಮೋದನೆಗೊಂಡಿರುವ ಎಲ್ಲಾ ಕಾಮಗಾರಿಗಳು ಮಾರ್ಚ್ ಒಳಗಾಗಿ ಪೂರ್ಣಗೊಳಿಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡದೆ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದರು.

ತೋಟಗಾರಿಕಾ ಬೆಳೆಗಳನ್ನು ಹೆಚ್ಚು ಬೆಳೆಯಲು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಪ್ರತಿ ವರ್ಷ ತೋಟಗಾರಿಕಾ ಬೆಳೆಗಳ ಕ್ಷೇತ್ರ ಹೆಚ್ಚಳವಾಗಬೇಕು. ರೈತರು ಮಿಶ್ರ ಬೆಳೆ ಬೆಲೆಯುವುದರಿಂದ ಹೆಚ್ಚಿನ ಆರ್ಥಿಕ ಲಾಭ ಪಡೆಯಲು ಸಾಧ್ಯವಿದೆ ಎಂದು ತಿಳಿಸಿದರು.

ಹನಿ ನೀರಾವರಿ ಸೌಲಭ್ಯಕ್ಕಾಗಿ ಬಾಕಿ ಇರುವ ಅರ್ಜಿಗಳ ಮಾಹಿತಿ ಒದಗಿಸಿ. ಹೆಚ್ಚಿನ ಅನುದಾನ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹನಿ ನೀರಾವರಿ ಅಳವಡಿಸಿರುವ ರೈತರಿಗೆ ಸಬ್ಸಿಡಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಶಿಕಾರಿಪುರ ತಾಲೂಕಿನಲ್ಲಿ ಎರಡು ಪಶು ವೈದ್ಯ ಆಸ್ಪತ್ರೆ ಆರಂಭಿಸಲು ಅನುಮೋದನೆ ನೀಡಲಾಗುವುದು ಎಂದರು.

ಈ ಬಾರಿ ಉತ್ತಮ ಮಳೆಯಾಗಿರುವ ಕಾರಣ ಎಲ್ಲಾ ಕೆರೆ ಕಟ್ಟೆಗಳು ತುಂಬಿವೆ. ಆದ್ದರಿಂದ ಕೆರೆ ಹೂಳು ತೆಗೆಯುವ ಕಾಮಗಾರಿಗಳನ್ನು ಸದ್ಯಕ್ಕೆ ಕೈಗೆತ್ತಿಕೊಳ್ಳಬಾರದು. ಹೂಳೆತ್ತುವ ಕಾಮಗಾರಿಗಳಿಗೆ ಈಗಾಗಲೆ ಟೆಂಡರ್ ಆಗಿದ್ದರೂ, ನೀರು ಖಾಲಿಯಾದರೆ ಮಾತ್ರ ಕಾಮಗಾರಿ ಆರಂಭಿಸಿ. ಅನುದಾನ ದುರುಪಯೋಗಕ್ಕೆ ಯಾವುದೇ ಇಲಾಖೆಗಳು ಆಸ್ಪದ ನೀಡಬಾರದು ಎಂದರು.

ಜಿಲ್ಲೆಯಲ್ಲಿ ಎಲ್ಲಾ ಹಳ್ಳಿಗಳಲ್ಲೂ ಸ್ಮಶಾನ ಜಾಗ ಗುರುತಿಸಬೇಕು ಎಂದ ಅವರು, ಜಲಜೀವನ್ ಮಿಷನ್ ಅಡಿ ಮನೆ ಮನೆಗೆ ನೀರು ಪೂರೈಕೆ ಮಾಡುವ ಯೋಜನೆಯನ್ನು ತ್ವರಿತವಾಗಿ ಅನುಷ್ಟಾನಗೊಳಿಸಬೇಕು. ಯೋಜನೆಯಡಿ ಪ್ರತಿ ಫಲಾನುಭವಿ ಮನೆಯವರು ನೀಡಬೇಕಾಗಿರುವ ಶೇ.10 ರಷ್ಟು ಹಣವನ್ನು ಸರಕಾರದಿದ ನೇರವಾಗಿ ಪಾವತಿಸುವ ಕುರಿತು ಈ ಬಾರಿಯ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಲೋಕಸಬಾ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ತಾ.ಪಂ ಅಧ್ಯಕ್ಷ ಸುರೇಶ್ ನಾಯ್ಕ್, ಜಿಲ್ಲಾಧಿಕಾರಿ ಶಿವಕುಮಾರ್, ಸಿಇಒ ವೈಶಾಲಿ, ಎಸ್ಪಿ ಶಾಂತರಾಜು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News