'ಕಾಶ್ಮೀರ ಮುಕ್ತ' ಭಿತ್ತಿಪತ್ರ ಪ್ರದರ್ಶನ: ಆರೋಪಿ ಪರ ವಕಾಲತ್ತು ವಹಿಸದಂತೆ ನಿರ್ಣಯ- ವಿವರಣೆ ಕೇಳಿದ ಹೈಕೋರ್ಟ್
ಬೆಂಗಳೂರು, ಫೆ.16: 2020ರಲ್ಲಿ ಮೈಸೂರಿನಲ್ಲಿ ಸಿಎಎ ಹಾಗೂ ಎನ್ಆರ್ಸಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ‘ಕಾಶ್ಮೀರ ಮುಕ್ತ’ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ವಿದ್ಯಾರ್ಥಿನಿ ನಳಿನಿ ಬಾಲಕುಮಾರ್ ಪರ ವಕಾಲತ್ತು ವಹಿಸದಂತೆ ನಿರ್ಣಯ ಕೈಗೊಂಡ ಮೈಸೂರು ನಗರ ವಕೀಲರ ವಿವಿಧೋದ್ದೇಶ ಸಹಕಾರ ಸಂಘದ ವಿರುದ್ಧ ಕ್ರಮ ಜರುಗಿಸದ ಬಗ್ಗೆ ವಿವರಣೆ ನೀಡುವಂತೆ ಮೈಸೂರು ವಕೀಲರ ಸಂಘ ಹಾಗೂ ರಾಜ್ಯ ವಕೀಲರ ಪರಿಷತ್ತಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಸಂಘದ ನಿರ್ಣಯದ ವಿರುದ್ಧ ವಕೀಲ ರಮೇಶ್ ನಾಯಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.
ಮೈಸೂರು ವಿವಿ ಆವರಣದಲ್ಲಿ 2020ರ ಜ.8ರಂದು ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ‘ಕಾಶ್ಮೀರ ಮುಕ್ತ’ ಭಿತ್ತಿಪತ್ರ ಪ್ರದರ್ಶಿಸಿದ ಆರೋಪದಡಿ ವಿದ್ಯಾರ್ಥಿನಿ ನಳಿನಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.
ಸದ್ಯ ಬಂಧನದಲ್ಲಿರುವ ನಳಿನಿ ಪರ ಯಾರೊಬ್ಬ ವಕೀಲರೂ ವಕಾಲತ್ತು ವಹಿಸಬಾರದೆಂದು ಮೈಸೂರು ಜಿಲ್ಲಾ ವಕೀಲರ ಸಂಘ ಜ. 16ರಂದು ನಿರ್ಣಯ ಕೈಗೊಂಡಿದೆ. ಇಂಥ ನಿರ್ಣಯ ಕೈಗೊಂಡಿರುವುದು ಕಾನೂನು ಬಾಹಿರ ನಡೆಯಾಗಿದ್ದು, ಸಂಘದ ವಿರುದ್ಧ ಕ್ರಮ ಜರುಗಿಸಲು ರಾಜ್ಯ ವಕೀಲರ ಪರಿಷತ್ಗೆ ನಿರ್ದೇಶಿಸುವಂತೆ ಅರ್ಜಿದಾರರು ಕೋರಿದ್ದಾರೆ.