ಗಗನಕ್ಕೇರುತ್ತಿರುವ ಇಂಧನ ಬೆಲೆ: ಹೊಟೇಲ್‍ಗಳಲ್ಲಿ ಊಟ, ತಿಂಡಿ ಮತ್ತಷ್ಟು ದುಬಾರಿ !

Update: 2021-02-16 17:00 GMT

ಬೆಂಗಳೂರು, ಫೆ.16: ದಿನೇ ದಿನೇ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಆಗುತ್ತಿರುವ ಕಾರಣದಿಂದಾಗಿ ದಿನಸಿ ಮತ್ತು ಸಾಮಗ್ರಿಗಳ ಬೆಲೆಯೂ ಹೆಚ್ಚಾಗಿದೆ. ಇದರಿಂದ ಕೆಂಗೆಟ್ಟಿರುವ ಹೊಟೇಲ್ ಮಾಲಕರು, ರಾಜ್ಯದಾದ್ಯಂತ ಕಾಫಿ-ಟೀ ಬೆಲೆಯನ್ನು 2 ರೂ. ಹಾಗೂ ತಿಂಡಿ ತಿನಿಸುಗಳ ದರವನ್ನು 5 ರೂಪಾಯಿ ಹೆಚ್ಚಳ ಮಾಡಲು ನಿರ್ಧರಿಸಿದ್ದಾರೆ.

ಪ್ರಮುಖವಾಗಿ ಅಡುಗೆ ಅನಿಲ, ಡೀಸೆಲ್ ದರ ಏರಿಕೆಯಿಂದ ಹೊಟೇಲ್ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಿದೆ. ಹೊಟೇಲ್ ಉದ್ಯಮ ಈಗಾಗಲೇ ನೌಕರರ ಸಮಸ್ಯೆ ಹಾಗೂ ಅಡುಗೆ ಅನಿಲ ದರ ಏರಿಕೆ ಎದುರಿಸುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಹೊಟೇಲ್ ತಿಂಡಿ ತಿನಿಸುಗಳ ದರ ಏರಿಕೆ ಮಾಡಬೇಕಾಗಿದೆ ಎಂದು ಹೊಟೇಲ್ ಮಾಲಕರ ಸಂಘ-ಸಂಸ್ಥೆಗಳು ತಿಳಿಸಿವೆ. ಇನ್ನು, ಈ ಸಂಬಂಧ ಈಗಾಗಲೇ ಹೊಟೇಲ್ ಮಾಲಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಿದ್ದು, ಶೀಘ್ರದಲ್ಲಿಯೇ ನಿಗದಿತ ದರ ಪ್ರಕಟಿಸಲಿದ್ದಾರೆ.

ಕೋವಿಡ್ ಪರಿಣಾಮದಿಂದ ಹೊಟೇಲ್ ಉದ್ಯಮವೇ ಈಗಾಗಲೇ ನಷ್ಟದಲ್ಲಿದೆ. ಇದೀಗ ಇಂಧನ ಬೆಲೆ ಏರಿಕೆಯಿಂದ ತರಕಾರಿ ಬೆಲೆ ಸೇರಿದಂತೆ ಇನ್ನಿತರೆ ಪದಾರ್ಥಗಳ ದರವೂ ಹೆಚ್ಚಾಗಿದೆ. ಮತ್ತೊಂದೆಡೆ ಮಾರುಕಟ್ಟೆಗಳಿಂದ ವಸ್ತುಗಳು ಸಾಗಾಟ ಮಾಡುವ ಸಲುವಾಗಿ ವಾಹನದ ಮಾಲಕರು ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಹಾಗಾಗಿ, ನಾವು ಊಟ, ತಿಂಡಿ-ತಿನಿಸುಗಳ ಬೆಲೆ ಏರಿಸದೆ ಬೇರೆ ದಾರಿ ಇಲ್ಲ ಎಂದು ಬೆಂಗಳೂರಿನ ಪ್ರಮುಖ ಉಡುಪಿ ಹೊಟೇಲ್‍ನ ಮಾಲಕ ಸುಬ್ಬರಾವ್ ತಿಳಿಸಿದರು.

ಅಡುಗೆ ಅನಿಲದ ಬೆಲೆ ಇತ್ತೀಚಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸೊಪ್ಪು, ತರಕಾರಿ, ತೆಂಗಿನ ಕಾಯಿ ಬೆಲೆ ಕೂಡ ದಿನೇ ದಿನೇ ದುಬಾರಿಯಾಗುತ್ತಿದೆ. ಹೊಟೇಲ್‍ಗಳ ಬಾಡಿಗೆ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಹೀಗಾಗಿ ಕಾಫಿ, ಟೀ, ಉಪಾಹಾರ, ಊಟದ ಬೆಲೆಯನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಕಾಟನ್‍ಪೇಟೆಯ ಅಮೃತಾ ಹೊಟೇಲ್‍ನ ಮಾಲಕ ಶ್ರೀಧರ್ ಕಾಮತ್ ತಿಳಿಸಿದರು.

ದಿನಗೂಲಿ ಅಧಿಕವಾಗಿದೆ: ಹೊಟೇಲ್ ಕಾರ್ಮಿಕರು ಕೂಡ ಈ ಹಿಂದಿನಂತೆ ಸಿಗುತ್ತಿಲ್ಲ. ದಿನಕ್ಕೆ ಕನಿಷ್ಠ ರೂ.500 ರಿಂದ 750 ಕೇಳುತ್ತಿದ್ದಾರೆ. ಇಂತಹ ಸಮಯದಲ್ಲಿ ಹೊಟೇಲ್‍ಗಳನ್ನು ನಡೆಸುವುದು ಬಹಳ ದುಸ್ತರದ ಕೆಲಸವಾಗಿದೆ. ಎಲ್ಲ ಬೆಲೆಗಳು ಕೂಡ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ದರ್ಶಿನಿ ಹಾಗೂ ಕಾಫಿ ಬಾರ್ ಗಳಲ್ಲಿ ಆಯಾ ಬಡಾವಣೆ ಮತ್ತು ನಿರ್ವಹಣೆಯ ಆಧಾರದಲ್ಲಿ ಬೆಲೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಅಖಿಲ ಕರ್ನಾಟಕ ಹೊಟೇಲ್ ಮಾಲಕರ ಸಮಿತಿಯ ಕಾರ್ಯದರ್ಶಿ ರಾಜೀವ್ ಆಚಾರ್ಯ ಮಾಹಿತಿ ನೀಡಿದರು.

ಒಟ್ಟಾರೆ, ಪೆಟ್ರೋಲ್, ಡೀಸೆಲ್ ದರ 100 ರೂಪಾಯಿ ಗಡಿಗೆ ತಲುಪುತ್ತಿದ್ದಂತೆ ಸರಕು ಸಾಮಗ್ರಿ ದರಗಳು ಶೇ.5 ರಿಂದ 10 ರಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ. ಇದರಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳ ಹೊಟೇಲ್‍ಗಳಲ್ಲಿ ರುಚಿರುಚಿ ತಿಂಡಿ ತಿನ್ನುವವರ ಜೇಬಿಗೆ ಕತ್ತರಿ ಬೀಳುವುದು ಖಚಿತವಾಗಿದೆ.

ಮಾಂಸಾಹಾರ ದರವೂ ಹೆಚ್ಚಳ

ಕೋಳಿ ಮತ್ತು ಕುರಿ ಮಾಂಸದಲ್ಲೂ ಹೆಚ್ಚಳವಾಗಿರುವ ಹಿನ್ನೆಲೆ ಮಾಂಸಾಹಾರ ಹೊಟೇಲ್‍ಗಳಲ್ಲಿನ ಆಹಾರ ಬೆಲೆಯೂ ಹೆಚ್ಚಳ ಮಾಡಲು ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರಕಾರದ ಬಜೆಟ್‍ನ ತೆರಿಗೆ ಅಂಶಗಳನ್ನು ನೋಡಿದ ಬಳಿಕ ಬೆಲೆ ನಿಗದಿಪಡಿಸಲಾಗುವುದು.

-ಮುಹಮ್ಮದ್ ಸುಲ್ತಾನ್ ಶರೀಫ್, ಕಾರ್ಯದರ್ಶಿ, ಬೆಂಗಳೂರು ನಗರ ಮಾಂಸಾಹಾರ ಹೊಟೇಲ್‍ಗಳ ಸಂಘ

‘ಎಲ್ಲವೂ ಹೆಚ್ಚಳ ಆಗಿದೆ, ಏನು ಮಾಡುವುದು’

ಅಡುಗೆ ಎಣ್ಣೆ, ಅಡುಗೆ ಅನಿಲ, ಇಂಧನ ಬೆಲೆ, ಬಾಡಿಗೆ, ಕಾರ್ಮಿಕರ ಕೂಲಿ ಹೀಗೆ ಎಲ್ಲವೂ ಹೆಚ್ಚಳವಾಗಿದೆ. ನಾವು ನಷ್ಟದಲ್ಲಿ ಉದ್ಯಮ ನಡೆಸುವುದಾದರೂ ಹೇಗೆ. ಹೀಗಾಗಿಯೇ, ಶೀಘ್ರದಲ್ಲಿಯೇ ಸಾರ್ವಜನಿಕರಿಗೂ ಹೊರೆ ಆಗದಂತೆ ಹೊಟೇಲ್ ತಿಂಡಿ ದರವನ್ನು ಪ್ರಕಟಿಸಲಾಗುವುದು.

-ರಾಘವೇಂದ್ರ ಅಡಿಗ, ಪದಾಧಿಕಾರಿ, ಕರ್ನಾಟಕ ರಾಜ್ಯ ಹೋಟೆಲ್ ಮಾಲಕ ಸಂಘ

ಅಂದಾಜು ದರ ಹೀಗಿವೆ?

* ಕಾಫಿ-ಟೀ ಈಗಿನ ದರ 10 ರೂ./ ನೂತನ ದರ 12 ರೂ.

* ಚೌ ಚೌ ಬಾತ್- ಈಗಿನ ದರ 30-40ರೂ./ ನೂತನ ದರ 40-50ರೂ.

* ಇಡ್ಲಿ, ವಡಾ (1 ಪ್ಲೇಟ್) ಈಗಿನ ದರ 30-35ರೂ./ ನೂತನ ದರ 35-40ರೂ.

* ದೋಸೆ ಈಗಿನ ದರ 35-40ರೂ./ ನೂತನ ದರ 40-45ರೂ.

* ರೈಸ್‍ಬಾತ್ ಈಗಿನ ದರ 30ರೂ./ ನೂತನ ದರ 35ರೂ.

* ಚಿಕನ್ ಬಿರಿಯಾನಿ ಈಗಿನ ದರ 120 ರೂ./ ನೂತನ ದರ 140 ರೂ.

* ಮಟನ್ ಬಿರಿಯಾನಿ ಈಗಿನ ದರ 260 ರೂ./ ನೂತನ ದರ 280 ರೂ.

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News