ದೇಶಕ್ಕೆ ಮಾದರಿಯಾದ ಮರಳು ನೀತಿ ಶೀಘ್ರದಲ್ಲೆ ಜಾರಿ: ಸಚಿವ ಮುರುಗೇಶ್ ನಿರಾಣಿ

Update: 2021-02-16 17:31 GMT

ಬಾಗಲಕೋಟೆ, ಫೆ.16: ಪ್ರತಿಯೊಬ್ಬರಿಗೂ ಕಡಿಮೆ ದರದಲ್ಲಿ ಕೈಗೆಟುಕುವ ರೀತಿ ಮರಳು ಸಿಗುವಂತಹ ಹಾಗೂ ದೇಶಕ್ಕೆ ಮಾದರಿಯಾದ ಮರಳು ನೀತಿಯನ್ನು ಶೀಘ್ರದಲ್ಲೆ ಜಾರಿ ಮಾಡಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಮಂಗಳವಾರ ನಗರದಲ್ಲಿ ಮರಳು ಹಾಗೂ ಜಲ್ಲಿ ಕ್ರಷರ್ ಮಾಲಕರಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೆಶಿಸಿ ಮಾತನಾಡಿದ ಅವರು, 2021-26ಕ್ಕೆ ಅನ್ವಯವಾಗುವಂತೆ ನೂತನ ಮರಳು ನೀತಿಯನ್ನು ಜಾರಿಗೆ ತರಲಾಗುವುದು ಎಂದರು.

ಬೇರೆ ಬೇರೆ ರಾಜ್ಯಗಳು ಮರಳು ನೀತಿಯಲ್ಲಿ ‘ಕರ್ನಾಟಕದ ಮಾದರಿ'ಯನ್ನು ಅನುಸರಿಸಬೇಕು. ಈಗಾಗಲೇ ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರತಿಯೊಬ್ಬರಿಗೂ ಸುಲಭವಾಗಿ ಹಾಗೂ ಸರಳವಾಗಿ ಮರಳು ಸಿಗುವಂತೆ ಮಾಡುವ ಉದ್ದೇಶದಿಂದ ಈ ನೂತಿಯನ್ನು ಜಾರಿ ಮಾಡಲಾಗುವುದು ಎಂದು ಅವರು ಹೇಳಿದರು.

ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯ ಕರ್ನಾಟಕ ಸೇರಿದಂತೆ ಒಂದೊಂದು ಭಾಗಕ್ಕೆ ಪ್ರತ್ಯೇಕವಾದ ಮರಳು ನೀತಿ ಇದೆ. ಈಗಾಗಲೇ ಒಂದು ಕರಡನ್ನು ತಂದಿದ್ದೇವೆ. ಇದನ್ನೆಲ್ಲವನ್ನೂ ಬಗೆಹರಿಸುವ ಬಗ್ಗೆ ಈ ನೀತಿ ತರುತ್ತಿದ್ದೇವೆ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಮರಳು ಸಿಗುತ್ತಿರಲಿಲ್ಲ. ಇಲ್ಲಿಯವರೆಗೆ ಎಲ್ಲದಕ್ಕೂ ಕಡಿವಾಣವಿತ್ತು. ಇದನ್ನು ತಪ್ಪಿಸುವುದಕ್ಕಾಗಿ ಉದ್ದೇಶದಿಂದ ಎತ್ತಿನಗಾಡಿ, ಟ್ರ್ಯಾಕ್ಟರ್ ಗಳಲ್ಲಿ ಮರಳು ತರಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದರು.

ಮರಳು ಗಣಿಗಾರಿಕೆಗೆ ಬ್ಲಾಕ್‍ಗಳನ್ನು ಗುರುತಿಸಿ ಹರಾಜಿನ ಮೂಲಕ ಗುತ್ತಿಗೆ ನೀಡಿರುವ ಪ್ರದೇಶ ಹೊರತುಪಡಿಸಿ ಹಳ್ಳ, ತೊರೆಗಳಲ್ಲಿ ಸ್ವಂತ ಬಳಕೆಗೆ ದ್ವಿಚಕ್ರ ವಾಹನ, ಕತ್ತೆ, ಬಂಡಿ ಟ್ರ್ಯಾಕ್ಟರ್ ಗಳಲ್ಲಿ ಕೊಂಡೊಯ್ಯುವ ಬಡವರು, ರೈತರಿಗೆ ಪರವಾನಗಿ, ರಾಯಲ್ಟಿ(ರಾಜಧನ)ಯಿಂದ ವಿನಾಯಿತಿ ನೀಡಲಾಗುವುದು. ಆದರೆ, ಇದನ್ನೆ ಸಂಗ್ರಹಿಸಿ ಲಾರಿ, ಟಿಪ್ಪರ್ ಗಳಲ್ಲಿ ಬೇರೆಡೆ ಸಾಗಣೆ, ಮಾರಾಟ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದರು.

ಎಲ್ಲರಿಗೂ ಮರಳು ಸಿಗಬೇಕು. ನೈಸರ್ಗಿಕವಾಗಿಯೂ ಅಪಾಯ ಆಗಬಾರದು. ಸರಕಾರದ ಬೊಕ್ಕಸಕ್ಕೆ ಆದಾಯ ಬರಬೇಕು. ಸಾರ್ವಜನಿಕರಿಗೂ ತೊಂದರೆಯಾಗಬಾರದು. ಇದು ನಮ್ಮ ಇಲಾಖೆಯ ಮೂಲ ಉದ್ದೇಶ ಎಂದ ಅವರು, ಸ್ಥಗಿತಗೊಂಡಿರುವ ಗಣಿಗಳನ್ನು ಪುನರ್ ಆರಂಭ ಮಾಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಈಗಾಗಲೇ ಜಿಲ್ಲಾವಾರು ಮಾಹಿತಿ ನೀಡುವಂತೆ ಭೂ ವಿಜ್ಞಾನ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಮಾಡಲು ಇದೇ ಮೊದಲ ಬಾರಿಗೆ ಇಲಾಖೆಯಲ್ಲಿ ಏಕಗವಾಕ್ಷಿ ಪದ್ದತಿಯನ್ನು ಜಾರಿ ಮಾಡುತ್ತಿದ್ದೇವೆ. ಅರಣ್ಯ, ಕಂದಾಯ ಮತ್ತಿತರ ಇಲಾಖೆಗಳನ್ನು ಒಟ್ಟಿಗೆ ಸೇರಿಸಿ ಗಣಿ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹರಿಸುತ್ತೇವೆ ಎಂದು ಮುರುಗೇಶ್ ನಿರಾಣಿ ತಿಳಿಸಿದರು.

ಗಣಿ ಇಲಾಖೆಯಲ್ಲಿ ಸಾವಿರಾರು ಪ್ರಕರಣಗಳಿವೆ. ಎಲ್ಲವನ್ನೂ ಪರಿಶೀಲನೆ ಮಾಡಿ ತ್ವರಿತವಾಗಿ ವಿಲೇವಾರಿ ಮಾಡಲು ಗಣಿ ಅದಾಲತ್ ಜಾರಿಗೆ ತರುತ್ತೇವೆ. ಈ ಅದಾಲತ್ ಮೂಲಕ ನೆನೆಗುದಿಗೆ ಬಿದ್ದಿರುವ ಅರ್ಜಿಗಳನ್ನು ಇತ್ಯರ್ಥ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News