ಮುಂದಿನ 5 ವರ್ಷಗಳಲ್ಲಿ ರಾಜ್ಯದಲ್ಲಿ ಹತ್ತು ದಶಲಕ್ಷ ಉದ್ಯೋಗ ಸೃಷ್ಟಿ ಗುರಿ: ಡಿಸಿಎಂ ಅಶ್ವತ್ಥನಾರಾಯಣ

Update: 2021-02-18 12:50 GMT

ಬೆಂಗಳೂರು, ಫೆ. 18: ಕೊವಿಡೋತ್ತರ ಕಾಲದಲ್ಲಿ ಡಿಜಿಟಲ್ ಕಲಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇನ್ನು ಎರಡು ತಿಂಗಳಲ್ಲಿ ರಾಜ್ಯದ ಉನ್ನತ ಶಿಕ್ಷಣ ವ್ಯಾಪ್ತಿಯಲ್ಲಿ ಶಿಕ್ಷಣ ಸಂಸ್ಥೆಗಳ 2,500 ಕಾಲೇಜು ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಮುಗಳನ್ನಾಗಿ ಪರಿವರ್ತನೆ ಮಾಡಲಾಗುವುದೆಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಕಟಿಸಿದ್ದಾರೆ.

ಗುರುವಾರ ಇಲ್ಲಿನ ಸರಕಾರಿ ಕಲಾ ಕಾಲೇಜ್‍ನಲ್ಲಿ ನೂತನ ಜಿಮ್ ಹೌಸ್ ಹಾಗೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ಕೋವಿಡ್ ಕಾರಣಕ್ಕೆ ಕಲಿಕೆಯ ಮಾದರಿಗಳೇ ಬದಲಾಗಿವೆ. ಹೀಗಾಗಿ ಸರಕಾರ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಲಾರ್ಟ್ ಕ್ಲಾಸ್ ರೂಂ ಪರಿಕಲ್ಪನೆಯನ್ನು ರೂಪಿಸಲಾಗಿದೆ.

2,500 ಕಾಲೇಜು ಕೊಠಡಿಗಳು ಸ್ಮಾರ್ಟ್‍ಕ್ಲಾಸ್‍ಗಳು ಆದ ನಂತರ ಮುಂಬರುವ 6 ತಿಂಗಳಲ್ಲಿ ಇನ್ನೂ 5,500 ತರಗತಿ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಮುಗಳಾಗಿ ರೂಪಿಸಲಾಗುವುದು. ಹೈಸ್ಪೀಡ್ ಇಂಟರ್‍ನೆಟ್, ಅತ್ಯಾಧುನಿಕ ಗುಣಮಟ್ಟದ ಟ್ಯಾಬ್ ನೀಡುವುದು ಹಾಗೂ ಸಮಗ್ರ ಕಲಿಕಾ ವ್ಯವಸ್ಥೆ(ಎಲ್‍ಎಂಎಸ್)ಯನ್ನು ಜಾರಿ ಮಾಡುವ ಮೂಲಕ ಸ್ಮಾರ್ಟ್‍ಕ್ಲಾಸ್ ರೂಂ ವ್ಯವಸ್ಥೆಯನ್ನು ಪರಿಪೂರ್ಣಗೊಳಿಸಲಾಗುವುದು. ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಗತಿಯೇ ಬದಲಾಗುತ್ತದೆ. ಗುಣಮಟ್ಟದ ಕಲಿಕೆಯ ಕನಸು ಈ ಮೂಲಕ ಸಾಕಾರವಾಗುತ್ತದೆ ಎಂದು ಹೇಳಿದರು.

ಸಮಗ್ರ ಕಲಿಕಾ ವ್ಯವಸ್ಥೆ(ಎಲ್‍ಎಂಎಸ್): ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿ ಮಾಡಲಾಗಿರುವ ಸಮಗ್ರ ಕಲಿಕಾ ವ್ಯವಸ್ಥೆಯು ಕ್ರಾಂತಿಕಾರಕ. ಇಡೀ ದೇಶದಲ್ಲಿ ಇಂಥ ವ್ಯವಸ್ಥೆ ಯಾವುದೇ ರಾಜ್ಯದಲ್ಲೂ ಇಲ್ಲ. ನಮ್ಮದೇ ಮಾನವ ಸಂಪನ್ಮೂಲ ಬಳಸಿಕೊಂಡು ಈ ವ್ಯವಸ್ಥೆಯನ್ನು ರೂಪಿಸಲಾಗಿದೆ. ಎಲ್ಲೇ ಇದ್ದರೂ ಟ್ಯಾಬ್ ಮತ್ತು ಇಂಟರ್‍ನೆಟ್ ಇದ್ದರೆ ಕಲಿಯಬಹುದು. ಜತೆಗೆ, ವಿದ್ಯಾರ್ಥಿ ಕಲಿಕೆಯ ಮಟ್ಟವನ್ನೂ ಬೋಧಕರು ಟ್ರ್ಯಾಕ್ ಮಾಡಬಹುದು ಎಂದು ಅಶ್ವತ್ಥನಾರಾಯಣ ಹೇಳಿದರು.

ಈ ಎಲ್ಲ ಉಪಕ್ರಮಗಳ ಮೂಲಕ ಸರಕಾರಿ ಕಾಲೇಜುಗಳು ಖಾಸಗಿ ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಜತೆ ಮಾತ್ರವಲ್ಲ, ಜಾಗತಿಕ ಶಿಕ್ಷಣ ಸಂಸ್ಥೆಗಳ ಜತೆಗೂ ಪೈಪೋಟಿ ನಡೆಸಲು ಸಜ್ಜಾಗುತ್ತಿವೆ. ಅದಕ್ಕೆ ಅಗತ್ಯವಾದ ಎಲ್ಲ ಉಪ ಕ್ರಮಗಳನ್ನು ಸರಕಾರ ಕೈಗೊಳ್ಳುತ್ತಿದೆ ಎಂದು ಅವರು ನುಡಿದರು.

ಪಠ್ಯ ಆಯ್ಕೆಯಲ್ಲಿ ಸ್ವಾತಂತ್ರ್ಯ: ಪ್ರಸಕ್ತ ಸಾಲಿನಿಂದಲೇ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದೆ. ತದ ನಂತರ ವಿದ್ಯಾರ್ಥಿಗಳು ಪೂರ್ವನಿಗದಿ ಮಾಡಿದ ಪಠ್ಯ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಇರುವುದಿಲ್ಲ. ಅಂದರೆ ವಿದ್ಯಾರ್ಥಿಗಳ ಮೇಲೆ ಪಠ್ಯವನ್ನು ಹೇರುವ ವ್ಯವಸ್ಥೆ ಅಳಿಯಲಿದೆ. ಬದಲಿಗೆ ವಿದ್ಯಾರ್ಥಿಗಳೇ ತಮಗೆ ಆಸಕ್ತಿ ಇರುವ ಪಠ್ಯವನ್ನು ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡುವ ವ್ಯವಸ್ಥೆ ಬರಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಸರಕಾರ ಮಾಡಿಕೊಂಡಿದೆ ಎಂದು ಇದೇ ವೇಳೆ ಡಿಸಿಎಂ ಪ್ರಕಟಿಸಿದರು.

ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ನಂ.1: ಉದ್ಯೋಗ ಸೃಷ್ಟಿಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇವಲ ಔಷಧ ಕ್ಷೇತ್ರವೊಂದರಲ್ಲೇ ಪ್ರತಿ ವರ್ಷ 5 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತಿದೆ. ಭವಿಷ್ಯನಿಧಿ ಖಾತೆಗಳಲ್ಲಿ ವರ್ಷಕ್ಕೆ 5 ಲಕ್ಷ ಜನ ನೋಂದಣಿ ಆಗುತ್ತಿದ್ದಾರೆ. ಜತೆಗೆ, ಇತರೆ ಕ್ಷೇತ್ರಗಳಲ್ಲಿ ಇನ್ನು ಎರಡು ಲಕ್ಷದಷ್ಟು ಉದ್ಯೋಗ ಸೃಷ್ಟಿ ಆಗುತ್ತಿದೆ. ವರ್ಷಕ್ಕೆ ಒಟ್ಟು 7 ಲಕ್ಷ ಉದ್ಯೋಗ ಸೃಷ್ಟಿ ನಮ್ಮ ಬೆಂಗಳೂರಿನಲ್ಲಿ ಆಗುತ್ತಿದೆ ಎಂದ ಅವರು, ಬೆಂಗಳೂರು ನಾಲೆಡ್ಜ್ ಸಿಟಿ ಮಾತ್ರವಲ್ಲದೆ ಆವಿಷ್ಕಾರಕ್ಕೂ ಹೆಚ್ಚು ಒತ್ತಾಸೆ ನೀಡುತ್ತಿರುವುದರಿಂದ ಇದು ಸಾಧ್ಯವಾಗಿದೆ ಎಂದರು.

ಇನ್ನು ಮುಂದಿನ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಹತ್ತು ದಶಲಕ್ಷ ಉದ್ಯೋಗಳನ್ನು ಸೃಷ್ಟಿ ಮಾಡಲು ಗುರಿ ಹೊಂದಲಾಗಿದೆ. ಅದಕ್ಕೆ ಪೂರಕವಾಗಿ ದಿನದ 24 ಗಂಟೆ ವಿದ್ಯುತ್ ಹಾಗೂ ಎಲ್ಲ ಜಾಗದಲ್ಲೂ ಹೈಸ್ಪೀಡ್ ಇಂಟರ್‍ನೆಟ್ ಸಿಗುವ ಹಾಗೆ ಮಾಡಲಾಗುತ್ತಿದೆ ಎಂದು ಅಶ್ವತ್ಥ ನಾರಾಣ ಹೇಳಿದರು.

ಅಕ್ಕಪಕ್ಕದ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಹಾಗೂ ಉದ್ಯಮಶೀಲತೆಯ ವಾತಾವರಣವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ. ಆದರೆ ಬೆಂಗಳೂರಿಗೆ ಮಾತ್ರ ಇದು ಸಾಧ್ಯವಾಗುತ್ತಿದೆ. ರಾಜ್ಯದಲ್ಲಿ ಅತ್ಯುತ್ತಮ ಪ್ರತಿಭೆಗಳು ಹೊರಹೊಮ್ಮುತ್ತಿರುವ ಜತೆಗೆ ಹೊರರಾಜ್ಯಗಳಿಂದ ಪ್ರತಿಭಾವಂತ ಯುವಕರು ನಮ್ಮ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ಅವರು ನುಡಿದರು.

ಕಾರ್ಯಕ್ರಮದಲ್ಲಿ ಶಾಸಕ ರಿಝ್ವಾನ್ ಅರ್ಶದ್, ಪರಿಷತ್ ಸದಸ್ಯ ಪುಟ್ಟಣ್ಣ, ಕಾಲೇಜು ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರ, ಸರಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ, ಕಾಲೇಜಿನ ಪ್ರಾಂಶುಪಾಲ ಪ್ರೊ.ಕೋಡದ ರಾಜಶೇಖರಪ್ಪ, ಡಾ.ಶಶಿಕಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News