ರಾಮಮಂದಿರಕ್ಕೆ ಸಂಗ್ರಹವಾಗುತ್ತಿರುವ ಪ್ರತಿ ಪೈಸೆಗೂ ಲೆಕ್ಕವಿದೆ: ಡಾ.ಅಶ್ವತ್ಥನಾರಾಯಣ

Update: 2021-02-18 14:42 GMT

ಬೆಂಗಳೂರು, ಫೆ.18: ಮೀಸಲು ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಎಲ್ಲ ಸಮುದಾಯಗಳು ಕೇಳುವುದು ಸಹಜ. ಪ್ರತಿಯೊಬ್ಬರಿಗೂ ಅವರದ್ದೇ ಆದ ಆಕಾಂಕ್ಷೆಗಳಿರುತ್ತವೆ. ವೈಜ್ಞಾನಿಕವಾಗಿ ಹಾಗೂ ನ್ಯಾಯಸಮ್ಮತವಾಗಿ ಯಾರಿಗೆ ಮೀಸಲು ಸೌಲಭ್ಯ ಸಿಗಬೇಕೋ ಅವರಿಗೆ ನೀಡಲು ಸರಕಾರ ಸಂವಿಧಾನದ ಚೌಕಟ್ಟಿನಲ್ಲಿ ಪ್ರಯತ್ನ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಗುರುವಾರ ನಗರದ ಸರಕಾರಿ ಕಲಾ ಕಾಲೇಜಿನಲ್ಲಿ ನೂತನ ಜಿಮ್ ಹೌಸ್ ಹಾಗೂ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿದ ಅವರು, ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗರಿಗೆ ಮೀಸಲು ಹೆಚ್ಚಿಸುವ ಹಾಗೂ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಬೇಡಿಕೆ ಇಟ್ಟಿರುವ ಬಗ್ಗೆ ಗಮನ ಸೆಳೆದಾಗ ಈ ಮೇಲಿನಂತೆ ಉತ್ತರಿಸಿದರು.

ನಾನಾ ಸಮುದಾಯಗಳು ಮೀಸಲು ಸೌಲಭ್ಯಕ್ಕಾಗಿ ಹೋರಾಟ ನಡೆಸುತ್ತಿವೆ. ಸರಕಾರದ ಮುಂದೆ ಬೇಡಿಕೆ ಮಂಡಿಸುತ್ತಿವೆ. ಇದೀಗ ಒಕ್ಕಲಿಗರು ಬೇಡಿಕೆ ಇಟ್ಟಿದ್ದಾರೆ. ಎಲ್ಲರ ಬೇಡಿಕೆಗಳನ್ನು ಸರಕಾರ ಪರಿಶೀಲನೆ ಮಾಡಲಿದೆ. ಇತರೆ ಸಮುದಾಯಗಳಲ್ಲಿ ಇರುವಂತೆ ಒಕ್ಕಲಿಗರಲ್ಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಜನರಿದ್ದಾರೆ. ಹೀಗಾಗಿ ಸ್ವಾಮೀಜಿ ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲ ಬೇಡಿಕೆ ಹಾಗೂ ಸಮುದಾಯಗಳ ಸ್ಥಿತಿಗತಿಗಳನ್ನು ಸರಕಾರ ಪರಿಗಣನೆಗೆ ತೆಗೆದುಕೊಳ್ಳಲಿದೆ. ಯಾರಿಗೆ ಅನ್ಯಾಯ ಆಗಿದೆಯೋ ಅವರೆಲ್ಲರಿಗೂ ಮೀಸಲು ಸೌಲಭ್ಯ ಸಿಗಲಿ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಅವರು ಹೇಳಿದರು.

ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು: ಶ್ರೀರಾಮ ಮಂದಿರಕ್ಕೆ ನಿಧಿ ಸಮರ್ಪಣಾ ಅಭಿಯಾನ ಹಾಗೂ ತಮ್ಮ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ತಿರುಗೇಟು ನೀಡಿದ ಅವರು, ಕುಮಾರಸ್ವಾಮಿ ಮೊದಲು ಕನ್ನಡಿ ಮುಂದೆ ನಿಂತು ತಮ್ಮನ್ನು ತಾವು ನೋಡಿಕೊಳ್ಳಲಿ. ಯಾರು ಹೇಗೆ ಎನ್ನುವುದು ಗೊತ್ತಾಗುತ್ತದೆ. ಯಾವ ರೀತಿ ಇವರು ವ್ಯವಸ್ಥೆಯನ್ನು ನಡೆಸಿಕೊಂಡು ಬಂದಿದ್ದಾರೆ. ಅನಗತ್ಯವಾಗಿ ನನ್ನ ಬಗ್ಗೆ ಮಾತಾಡುವುದು ಬೇಡ. ಕಾನೂನಿನ ಅಡಿಯಲ್ಲಿ ನಾವೆಲ್ಲ ಇದ್ದೇವೆ. ನಾವೆಲ್ಲ ಜನತೆಗೆ ಲೆಕ್ಕ ನೀಡಬೇಕು ಎಂಬುದನ್ನು ಮರೆಯಬಾರದು ಎಂದರು.

ಇನ್ನು ರಾಮ ಮಂದಿರ ನಿಧಿ ಸಂಗ್ರಹವನ್ನು ಪುಂಡ ಪೋಕರಿಗಳು ಮಾಡುತ್ತಿಲ್ಲ. ಸಂಗ್ರಹವಾಗುತ್ತಿರುವ ಪ್ರತಿ ಪೈಸೆಗೂ ಲೆಕ್ಕವಿದೆ. ಪಾರದರ್ಶಕತೆ ಇದೆ. ಅನಗತ್ಯವಾಗಿ ಜನರನ್ನು ದಿಕ್ಕು ತಪ್ಪಿಸಿ ಗೊಂದಲ ಉಂಟು ಮಾಡುವುದು ಬೇಡ ಎಂದು ಅವರು ಹೇಳಿದರು.

ನೂತನ ಪಾರ್ಕಿಂಗ್ ನೀತಿ ಬಗ್ಗೆ ನಿರ್ಧಾರವಿಲ್ಲ: ದುಬಾರಿ ಪಾರ್ಕಿಂಗ್ ಶುಲ್ಕ ವಿಧಿಸಿ ನಗರದಲ್ಲಿ ವಾಹನ ಸಂಚಾರ ಪ್ರಮಾಣವನ್ನು ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವ ಪ್ರಸ್ತಾವನೆಯ ಬಗ್ಗೆ ಸರಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ತಜ್ಞರ ಸಮಿತಿಯಿಂದ ಈ ಬಗ್ಗೆ ಸಲಹೆಯಷ್ಟೇ ಬಂದಿದೆ. ಈ ಬಗ್ಗೆ ಇನ್ನೂ ಯಾವ ರೀತಿಯ ಚರ್ಚೆ ಅಥವಾ ಪರಿಶೀಲನೆ ನಡೆದಿಲ್ಲ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News