ಮೋದಿ ವ್ಯಾಮೋಹಕ್ಕೆ ಒಳಗಾಗಿದ್ದ ಅನೇಕರು ರೈತ ಸಂಘಟನೆಗೆ ಮರಳುತ್ತಿದ್ದಾರೆ: ಬಡಗಲಪುರ ನಾಗೇಂದ್ರ

Update: 2021-02-18 18:25 GMT

ಮೈಸೂರು, ಫೆ.18: ಪ್ರಧಾನಿ ನರೇಂದ್ರ ಮೋದಿ ವ್ಯಾಮೋಹಕ್ಕೆ ಒಳಗಾಗಿದ್ದ ಅನೇಕ ಮಂದಿ ಇಂದು ಅವರ ನಡೆ ಕಂಡು ಬೇಸರಗೊಂಡು ರೈತ ಹೋರಾಟಕ್ಕೆ ಮರಳಿ ಬಂದಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಗುರುವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೃದಯವಂತ ವ್ಯಕ್ತಿತ್ವದ ರೈತ ಚೇತನ ಕೆ.ಎಸ್.ಪುಟ್ಟಣ್ಣಯ್ಯನವರ ನೆನಪು ಹಾಗೂ ರಾಜ್ಯ ಮಟ್ಟದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ವ್ಯಾಮೋಹಕ್ಕೆ ಒಳಗಾಗಿ ಸಮೂಹ ಸನ್ನಿಯಂತೆ ಅನೇಕ ಮಂದಿ ಅವರ ಗೆಲುವಿಗೆ ಶ್ರಮಿಸಿದರು. ನಂತರ ಗೊತ್ತಾಯಿತು ಅವರದು ಬರೀ ಸುಳ್ಳು ಮೋಸ ಎಂದು. ಹಾಗಾಗಿ ಮತ್ತೆ ಮರಳಿ ಹಿಂದಿನ ಹೋರಾಟಕ್ಕೆ ಬಂದಿದ್ದಾರೆ ಎಂದು ಹೇಳಿದರು.

ನಮ್ಮವರೇ ಆದ ಪ್ರಸನ್ನ ಎನ್.ಗೌಡ, ಎಸ್.ಸಿ.ಮಧುಚಂದನ್ ಅವರು ಅವರ ಸಮೂಹ ಸನ್ನಿಗೆ ಒಳಗಾಗಿದ್ದರು. ಅವರಿಗೆ ಅವರ ಮೋಸದ ಅರಿವಾಗಿ ವಾಪಸ್ ರೈತ ಚಳುವಳಿಗೆ ಬಂದಿದ್ದಾರೆ ಎಂದು ಹೇಳಿದರು.

ರೈತ ಚಳುವಳಿಗೆ ತನ್ನದೇ ಆದೆ ಇತಿಹಾಸ ಇದೆ. ಪುಟ್ಟಣ್ಣಯ್ಯ ಅವರ ಕುಟುಂಬ ಅವರ ಬೆನ್ನಿಗೆ ನಿಂತಿದ್ದರಿಂದ ಪುಟ್ಟಣ್ಣಯ್ಯ ರಾಜ್ಯಾದ್ಯಂತ ರೈತ ಸಂಘವನ್ನು ಕಟ್ಟಿದರು. ರೈತರ ಬದುಕು ಇಂದೂ ಸಹ ಅತಂತ್ರ ಸ್ಥಿತಿಯಲ್ಲಿದೆ. ಆದರೂ ರೈತರು ತಮ್ಮ ಹೋರಾಟವನ್ನು ಬಿಡುವುದಿಲ್ಲ, ಅನ್ಯಾಯಾವಾದರೆ ಎಂತಹ ಸಂದರ್ಭದಲ್ಲೂ ಎದ್ದು ನಿಲ್ಲುತ್ತಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News