ದಾವಣಗೆರೆ ಮೇಯರ್-ಉಪಮೇಯರ್ ಚುನಾವಣೆ: ಆರ್.ಶಂಕರ್ ಮತದಾನ ನಿರ್ಬಂಧಿಸಲು ಹೈಕೋರ್ಟ್ ನಕಾರ

Update: 2021-02-19 16:32 GMT

ಬೆಂಗಳೂರು, ಫೆ.19: ದಾವಣಗೆರೆ ಮೇಯರ್, ಉಪಮೇಯರ್ ಹಾಗೂ 4 ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳ ಆಯ್ಕೆ ಚುನಾವಣೆಯಲ್ಲಿ ಮತದಾನ ಮಾಡದಂತೆ ಸಚಿವ ಆರ್.ಶಂಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದ ಅವರನ್ನು ನಿರ್ಬಂಧಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿದೆ.

ಆರ್. ಶಂಕರ್ ಹಾಗೂ ಎಂ.ಚಿದಾನಂದ ಅವರನ್ನು ಅಕ್ರಮವಾಗಿ ದಾವಣೆಗೆರೆ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದು, ಅವರನ್ನು ಪಟ್ಟಿಯಿಂದ ಕೈಬಿಡುವಂತೆ ನಿರ್ದೇಶಿಸಬೇಕು ಹಾಗೂ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಕೋರಿ ಪಾಲಿಕೆಯ ಕಾಂಗ್ರೆಸ್ ಸದಸ್ಯ ದೇವರಮನಿ ಶಿವಕುಮಾರ್ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯನ್ನು ಶುಕ್ರವಾರ ನ್ಯಾ. ಎಸ್.ಜಿ ಪಂಡಿತ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಈಗಾಗಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ ಹಾಗೂ ಮತದಾರರ ಪಟ್ಟಿಯಲ್ಲಿ ಶಂಕರ್ ಹಾಗೂ ಚಿದಾನಂದ ಅವರ ಹೆಸರಿದೆ. ಈ ಹಂತದಲ್ಲಿ ಅವರಿಬ್ಬರನ್ನು ಮತದಾನ ಮಾಡದಂತೆ ಕೋರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ತಿಳಿಸಿ ಅರ್ಜಿ ವಜಾಗೊಳಿಸಿತು.

ಎಂಎಲ್‍ಸಿ ಹಾಗೂ ಸಚಿವ ಆರ್.ಶಂಕರ್ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರಾದರೆ, ಶಿಕ್ಷಕರ ಕ್ಷೇತ್ರದಿಂದ ಚುನಾಯಿತರಾಗಿರುವ ಎಂಎಲ್‍ಸಿ ಎಂ.ಚಿದಾನಂದ ತುಮಕೂರಿನವರು. ಇವರಿಬ್ಬರೂ ದಾವಣಗೆರೆಯವರಲ್ಲ. ಹೀಗಾಗಿ, ಇಬ್ಬರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಚುನಾವಣಾಧಿಕಾರಿಗಳಿಗೆ ನಿರ್ದೇಶಿಸಬೇಕು. ಹಾಗೂ ಮತದಾನ ಮಾಡದಂತೆ ಇಬ್ಬರಿಗೂ ನಿರ್ಬಂಧಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News