2028ರ ಒಲಿಂಪಿಕ್ ಪದಕ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿರಬೇಕು: ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು

Update: 2021-02-22 15:41 GMT

ಬೆಂಗಳೂರು, ಫೆ.22: 2028ರಲ್ಲಿ ಅಮೆರಿಕಾದ ಲಾಸ್ ಎಂಜಲೀಸ್‍ನಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆಯಲಿದೆ. ಅದಕ್ಕೆ ನಾವು ಸಂಪೂರ್ಣ ಸಿದ್ಧತೆಯನ್ನ ಈಗಿನಿಂದಲೆ ಆರಂಭಿಸಬೇಕು. ಪದಕ ಪಟ್ಟಿಯಲ್ಲಿ ಭಾರತ ಪ್ರಮುಖ 10 ರಾಷ್ಟ್ರಗಳ ಪಟ್ಟಿಯಲ್ಲಿ ಇರಬೇಕು ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಕರೆ ನೀಡಿದರು.

ಸೋಮವಾರ ನಗರದಲ್ಲಿ ಸಾಯಿ ಸ್ಪೋರ್ಟ್ ಸೆಂಟರ್ ನಲ್ಲಿ 330 ಹಾಸಿಗೆಯ ಕ್ರೀಡಾ ವಸತಿ ನಿಲಯ ಮತ್ತು ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಮುಂದಿನ ನಾಲ್ಕು ತಿಂಗಳಲ್ಲಿ ಇನ್ನೂ ಸಾಕಷ್ಟು ಕ್ರೀಡಾಪಟುಗಳು ಟೋಕಿಯೊ ಓಲಂಪಿಕ್‍ಗೆ ಅರ್ಹತೆ ಪಡೆಯಲು ಅವಕಾಶ ಇದೆ. ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳಿಗೆ ಎಲ್ಲ ವ್ಯವಸ್ಥೆ ನೋಡಿಕೊಳ್ಳಲು ತಾಂತ್ರಿಕ ತಂಡ ಇರತ್ತೆ. ಕ್ರೀಡಾ ಕ್ಷೇತ್ರದಲ್ಲಿ ಭಾರತ ಉತ್ತಮ ಸ್ಥಾನಕ್ಕೆ ತಲುಪಬೇಕು ಎಂದರು.

ಕಳೆದ ಎರಡು ಏಷ್ಯನ್ ಗೇಮ್ಸ್ ನಲ್ಲಿ ಕಬಡ್ಡಿಯಲ್ಲಿ ಭಾರತ ಬಂಗಾರ ಪದಕ ಗೆದ್ದಿಲ್ಲ. ಈ ಬಾರಿ ಬಂಗಾರದ ಪದಕ ಗೆಲ್ಲಲೇಬೇಕು. ಆ ನಿಟ್ಟಿನಲ್ಲಿ ಶ್ರಮಿಸಿ ಎಂದು ಹೇಳಿದ್ದೇನೆ. ಕ್ರೀಡಾಪಟುಗಳು ಸದಾ ಖುಷಿಯಿಂದ ಇರಬೇಕು. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಆದರೆ ಜೀವನದಲ್ಲಿ ಎಂದೂ ಕ್ರೀಡಾಪಟುಗಳು ಸೋಲಬಾರದು, ದುಃಖಿತರಾಗಬಾರದು ಎಂದು ಅವರು ಮನವಿ ಮಾಡಿದರು.

ದೇಶದ ಎಲ್ಲ ಕ್ರೀಡಾ ಕೇಂದ್ರಗಳಲ್ಲಿ ತ್ರಿತಾರಾ ಹೊಟೇಲ್‍ನಂತಹ ಮೂಲ ಸೌಕರ್ಯ ಇರಬೇಕು. ಆ ನಿಟ್ಟಿನಲ್ಲಿ ನಾವು ಸೌಲಭ್ಯ ಕಲ್ಪಿಸಲು ಪ್ರಯತ್ನ ಮಾಡುತ್ತಿದ್ದೇವೆ. ಸಾಯಿ ಸ್ಪೋರ್ಟ್ ಸೆಂಟರ್ ಗೆ ಬಂದಿದ್ದಕ್ಕೆ ಖುಷಿ ಆಗಿದೆ. ಸ್ವಚ್ಛತೆ ಹಾಗೂ ಸುಂದರತೆ ಮುಖ್ಯ. ಈ ಕೇಂದ್ರದಲ್ಲಿ ಏನೇನು ಕೆಲಸ ಆಗಬೇಕಿತ್ತು, ಅದನ್ನ ಪೂರೈಸಿದ್ದೇವೆ ಎಂದು ಕಿರಣ್ ರಿಜಿಜು ಹೇಳಿದರು.

ಕ್ರೀಡೆಗೆ ಹೆಚ್ಚು ಒತ್ತು ನೀಡುವುದು ನಮ್ಮ ಕರ್ತವ್ಯ. ಕ್ರೀಡಾಪಟುಗಳು ನಮ್ಮ ದೇಶದ ಆಸ್ತಿ, ನಮ್ಮ ಹೆಮ್ಮೆ. ದೇಶದಲ್ಲಿ ಸಾಕಷ್ಟು ಕ್ರೀಡಾ ಕೇಂದ್ರ ಇದೆ. ಕೆಲವೆಡೆ ಗುಣಮಟ್ಟ ಕಡಿಮೆ ಇದೆ. ಎಲ್ಲ ಕೇಂದ್ರಗಳು ವಿಶ್ವದ ಯಾವುದೇ ಕೇಂದ್ರಕ್ಕಿಂತ ಕಡಿಮೆ ಇರಬಾರದು. ಎಲ್ಲ ಮೂಲಸೌಕರ್ಯ ಗುಣಮಟ್ಟದ್ದಾಗಿರಬೇಕು. ತ್ರಿತಾರಾ(ಥ್ರಿ ಸ್ಟಾರ್) ಹೋಟೆಲ್‍ನ ಗುಣಮಟ್ಟದ ಕ್ರೀಡಾ ವಸತಿ ನಿಲಯ ಮೂಲಸೌಕರ್ಯ ಇರಬೇಕು ಎಂದು ಅವರು ಹೇಳಿದರು.

ವೃತ್ತಿಪರವಾದ ನಿರ್ವಹಣೆ ಇಲ್ಲಿರಬೇಕು. ಆಗ ಮಾತ್ರ ತ್ರಿತಾರಾ ಹೊಟೇಲ್‍ನಂತೆ ಗುಣಮಟ್ಟದ ಸೇವೆ ಸಾಧ್ಯ. ಅದಕ್ಕಾಗಿ ಟೆಂಡರ್ ಕರೆದು ಮ್ಯಾನೇಜ್‍ಮೆಂಟ್ ವ್ಯವಸ್ಥೆ ಮಾಡುತ್ತೇವೆ. ಕ್ರೀಡಾಪಟುಗಳಿಗೆ ಯಾವ ರೀತಿಯ ಆಹಾರದ ಅಗತ್ಯತೆ ಇದೆ, ಅದನ್ನು ನೀಡುವ ವ್ಯವಸ್ಥೆ ಆಗಬೇಕು. ನಾವು ಅಂದುಕೊಂಡಷ್ಟು ವೇಗವಾಗಿ ಎಲ್ಲ ಸಾಧ್ಯವಿಲ್ಲ. ಆದರೂ ವ್ಯವಸ್ಥೆ ಮಾಡ್ತೇವೆ ಎಂದು ಕಿರಣ್ ರಿಜಿಜು ತಿಳಿಸಿದರು.

ಒಲಿಂಪಿಕ್‍ಗೆ ತೆರಳುತ್ತಿರುವ ಕ್ರೀಡಾಪಟುಗಳಿಗೆ, ವಿಶ್ವದ ಶ್ರೇಷ್ಠ ತರಬೇತುದಾರರನ್ನು ನೀಡಲು ನಾವು ಸಿದ್ಧ. ಭಾರತೀಯ ತರಬೇತುದಾರರೆ ವಿಶ್ವಮಟ್ಟದ ತರಬೇತುದಾರರಾಗಿ ರೂಪುಗೊಳ್ಳಬೇಕು. ವಿದೇಶಿ ಕೋಚ್‍ಗಳಂತೆ ಭಾರತೀಯ ಕೋಚ್‍ಗಳಿಗೂ ಉತ್ತಮ ಸಂಭಾವನೆ ನೀಡುತ್ತೇವೆ. ಇಂದಿನ ಶ್ರೇಷ್ಠ ಕ್ರೀಡಾಪಟುಗಳು ಮುಂದೆ ಕೋಚ್ ಆಗಬೇಕು. ಮೊದಲಿನಂತೆ ಸಹಾಯಕ ಕೋಚ್‍ಗೆ ಭಡ್ತಿ ಸಿಗಲು ತಡವಾಗೋದಿಲ್ಲ ಎಂದು ಅವರು ಭರವಸೆ ನೀಡಿದರು.

ನಮ್ಮ ದೇಶದಲ್ಲಿ ಸ್ಪೋರ್ಟ್ಸ್ ಸೈನ್ಸ್ ಮೊದಲಿನಿಂದಲೂ ಇದೆ. ಆದರೆ ಏನು ಪ್ರಯೋಜನವಾಗಿಲ್ಲ. ಈಗ ಅದಕ್ಕೆ ಹೆಚ್ಚಿನ ಶಕ್ತಿ ನೀಡುತ್ತಿದ್ದೇವೆ. ಪ್ರತಿ ರಾಜ್ಯ ಒಂದು ಕ್ರೀಡೆಗೆ ಆದ್ಯತೆ ನೀಡಬೇಕು. ಇದಕ್ಕೆ ಕೇಂದ್ರ ಸರಕಾರ ಸಹಾಯ ಮಾಡುತ್ತದೆ. ಒಂದು ರಾಜ್ಯ ಒಂದು ದೇಶವಾಗಿ ಕೆಲಸ ಮಾಡಿದರೆ ನಾವು ಒಲಿಂಪಿಕ್‍ನಲ್ಲಿ ಪದಕ ಗೆಲ್ಲಬಹುದು. ಕೇವಲ ಭಾಷಣ ಮಾಡೋದ್ರಿಂದ ಪದಕ ಗೆಲ್ಲಲು ಸಾಧ್ಯವಿಲ್ಲ. ಅದಕ್ಕೆ ಪರಿಶ್ರಮ ಮುಖ್ಯ ಎಂದು ಕಿರಣ್ ರಿಜಿಜು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣಗೌಡ, ಕೇಂದ್ರ ಕ್ರೀಡಾ ಸಚಿವರ ಆಗಮನದಿಂದ ನಮಗೆ ಇನ್ನಷ್ಟು ಹುರುಪು ಬಂದಿದೆ. ನಿನ್ನೆಯಷ್ಟೇ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಒಳಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕೇಂದ್ರ ಸಚಿವರ ಜೊತೆಗೂಡಿ ರಾಜ್ಯದಲ್ಲಿ ಕ್ರೀಡೆಗೆ ಹೆಚ್ಚಿನ ನೆರವು ನೀಡುತ್ತೇವೆ ಎಂದರು.

2022ರಲ್ಲಿ ಖೇಲೊ ಇಂಡಿಯಾ ಅಂತರ್‍ರಾಜ್ಯ ವಿವಿಗಳ ಕ್ರೀಡಾಕೂಟ ಇದೆ. ಬೆಂಗಳೂರಿನಲ್ಲಿ ಈ ಕ್ರೀಡಾಕೂಟ ನಡೆಯುತ್ತಿದೆ. ರಾಜ್ಯ ಸರಕಾರ ಅದಕ್ಕೆ ಬೇಕಾದ ಎಲ್ಲ ಸಹಕಾರ ನೀಡಲಿದೆ. ಒಲಿಂಪಿಕ್‍ನಲ್ಲಿ ನಮ್ಮ ರಾಜ್ಯದಿಂದ ಸಾಕಷ್ಟು ಕ್ರೀಡಾಪಟುಗಳು ಭಾಗವಹಿಸಿ, ಸಾಧನೆ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಒಲಿಂಪಿಕ್‍ಗೆ ಅರ್ಹತೆ ಪಡೆಯಲು ಇನ್ನೂ ನಾಲ್ಕು ತಿಂಗಳು ಸಮಯವಿದ್ದು, ಸಾಕಷ್ಟು ಕ್ರೀಡಾಪಟುಗಳು ಅರ್ಹತೆ ಪಡೆದು, ನಮ್ಮ ರಾಜ್ಯಕ್ಕೆ ದೇಶಕ್ಕೆ ಕೀರ್ತಿ ತರುತ್ತಾರೆ ಎಂಬ ಭರವಸೆ ಇದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಬಿಲಿಯಡ್ಸ್ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾನಿ, ಸಾಯಿ ಸ್ಪೋರ್ಟ್ಸ್ ನ ಮುಖ್ಯಸ್ಥರು, ಇಲಾಖೆಯ ಅಧಿಕಾರಿಗಳು, ಭಾರತೀಯ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News