'ಪೊಗರು' ವಿರುದ್ಧ ಬ್ರಾಹ್ಮಣರ ಪ್ರತಿಭಟನೆ: 'ಅವಹೇಳನಕಾರಿ' ದೃಶ್ಯಗಳಿಗೆ ಕತ್ತರಿ ಹಾಕಲು ಒಪ್ಪಿದ ಚಿತ್ರ ನಿರ್ದೇಶಕ

Update: 2021-02-23 14:53 GMT

ಬೆಂಗಳೂರು, ಫೆ.23: ಇತ್ತೀಚಿಗೆ ತೆರೆ ಕಂಡ ‘ಪೊಗರು’ ಕನ್ನಡ ಸಿನೆಮಾದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಬ್ರಾಹ್ಮಣ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ದಿಢೀರ್ ಪ್ರತಿಭಟನೆ ನಡೆಸಿದರು.

ಮಂಗಳವಾರ ನಗರದ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿ ಮುಂದೆ ಜಮಾಯಿಸಿದ ಬ್ರಾಹ್ಮಣ ಸಮುದಾಯದ ಮುಖಂಡರು, ಚಿತ್ರನಟ ಧ್ರುವ ಸರ್ಜಾ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟನೆಯ ‘ಪೊಗರು’ ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದ್ದು, ಈ ಕೂಡಲೇ ಈ ಸಿನಿಮಾನಕ್ಕೆ ನಿಷೇಧ ಹೇರಬೇಕೆಂದು ಪಟ್ಟುಹಿಡಿದರು.

ಸೋಮವಾರ ಸಿನೆಮಾ ನಿರ್ದೇಶಕ ನಂದಕಿಶೋರ್ ಸ್ಪಷ್ಟನೆ ನೀಡಿ ಕ್ಷಮೆ ಕೋರಿದ್ದರು. ಆದರೂ, ದಿಢೀರ್ ಪ್ರತಿಭಟನೆ ನಡೆಸಿದ ಬ್ರಾಹ್ಮಣ ಸಮುದಾಯದ ಮುಖಂಡರು ವಾಣಿಜ್ಯ ಮಂಡಳಿಗೆ ದೂರು ನೀಡಲು ತೆರಳಿದ್ದರು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ದೃಶ್ಯಗಳಿಗೆ ಕತ್ತರಿ: ಇದರ ನಡುವೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿನೆಮಾ ನಿರ್ದೇಶಕ ನಂದಕಿಶೋರ್, ಕೆಲ ದೃಶ್ಯಗಳಿಗೆ ಕತ್ತರಿ ಹಾಕಿ ಸಂಕಲನವನ್ನು ಶುರು ಮಾಡಿದ್ದೇವೆ. ಇದಕ್ಕೆ ಕನಿಷ್ಠ 48 ಗಂಟೆಗಳ ಸಮಯಾವಕಾಶ ಬೇಕು. ಈ ಪ್ರಕ್ರಿಯೆ ಮುಗಿದು ಸೆನ್ಸಾರ್ ಮಾಡಿ ಮತ್ತೆ ಅದನ್ನು ಪ್ರದರ್ಶನ ವೇದಿಕೆಗಳಿಗೆ (ಉಪಗ್ರಹ ಮೂಲಕ ಚಿತ್ರಮಂದಿರಗಳಿಗೆ ಪ್ರಸಾರವಾಗುವ ವ್ಯವಸ್ಥೆ) ಅಪ್‍ಲೋಡ್ ಮಾಡಬೇಕಾಗುತ್ತದೆ. ಸೆನ್ಸಾರ್ ಮಂಡಳಿಗೂ ಮರು ಸೆನ್ಸಾರ್ ನ್ನು ಕ್ಷಿಪ್ರವಾಗಿ ಮಾಡಿಕೊಡುವಂತೆ ಕೋರುತ್ತೇನೆ ಎಂದು ಅವರು ಹೇಳಿದರು.

ಯಾರನ್ನೂ ಅವಮಾನಿಸಿ ಅದರಿಂದ ಹಣ ಗಳಿಸುವ ಉದ್ದೇಶ ನಮ್ಮದಾಗಿರಲಿಲ್ಲ. ಆ ಕತೆಯ ಪ್ರಕಾರ, ಪೂಜೆ, ಹೋಮ ಹವನ ನಡೆಸುವವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನೂ ಹೇಳಬೇಕಿತ್ತು. ಕಥೆಗೆ ಪೂರಕವಾದ ಅಂಶವಾಗಿತ್ತೇ ವಿನಃ ನೋಯಿಸುವ ಉದ್ದೇಶ ಇರಲಿಲ್ಲ ಎಂದು ಅವರು ನುಡಿದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಮಾತನಾಡಿ, ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ಸುಮಾರು 14 ದೃಶ್ಯಗಳಿದ್ದು, ಅವುಗಳನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದರು.

ಸಿನೆಮಾದಲ್ಲಿ ಏನಿದೆ ?

ಸಿನೆಮಾ ಆರಂಭದಲ್ಲೇ ಯಜ್ಞ ಮಾಡುತ್ತಿದ್ದ ಪುರೋಹಿತರ ಹೆಗಲ ಮೇಲೆ ಖಳನಾಯಕನ ತಂಡದ ವ್ಯಕ್ತಿಯೊಬ್ಬ ಕಾಲಿಟ್ಟ ದೃಶ್ಯವಿದೆ. ನಾಯಕನೂ ಬ್ರಾಹ್ಮಣರನ್ನು ಅವಹೇಳನ ಮಾಡುವ ಪದಗಳನ್ನು ಬಳಸಿದ್ದಾರೆಂಬ ಆರೋಪಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News