×
Ad

ಶಿವಮೊಗ್ಗ: ಬೆಲೆ ಏರಿಕೆ ಖಂಡಿಸಿ ವಾಹನಗಳನ್ನು ತಳ್ಳಿ ವಿನೂತನ ಪ್ರತಿಭಟನೆ

Update: 2021-02-23 23:25 IST

ಶಿವಮೊಗ್ಗ, ಫೆ.23: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಿನ ಬಳಕೆ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಹಾಗೂ ಅನಿಲ ಬೆಲೆ ಏರಿಕೆ ಮಾಡಿರುವುದನ್ನು ಇಳಿಸಬೇಕೆಂದು ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಶಾಖೆ ವತಿಯಿಂದ ಮಹಾವೀರ ವೃತ್ತದಿಂದ ಕಾರು, ಆಟೋ, ಬೈಕ್, ಸೈಕಲ್ ತಳ್ಳಿಕೊಂಡು ಜಿಲ್ಲಾಧಿಕಾರಿಗಳ ಕಚೇರಿವರೆಗೆ ವಿನೂತನ ಪ್ರತಿಭಟನೆ ನಡೆಸಲಾಯಿತು.

ಕಳೆದ 15 ವರ್ಷಗಳಿಂದ ದೇಶದಲ್ಲಿ ಆಗಾಗ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಲೆ ಇದೆ. ಇದರ ಹಿಂದೆ ಕಾರ್ಪೋರೇಟ್ ತೈಲ ಕಂಪನಿಗಳ ದೊಡ್ಡಮಟ್ಟದ ಹುನ್ನಾರವಿದೆ. ಶ್ರೀಮಂತ ಬಂಡವಾಳ ಶಾಯಿಗಳ ನಿಯಂತ್ರಣದಲ್ಲಿ ರಾಷ್ಟ್ರವನ್ನು ಕೊಂಡೊಯ್ಯುವ ಪ್ರಯತ್ನವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ದೇಶದ ಬಹುಪಾಲು ತೈಲ ಉತ್ಪನ್ನ ಮುಸ್ಲೀಂ ರಾಷ್ಟ್ರಗಳಿಂದ ಅಮದಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಣನೀಯವಾಗಿ ಇಳಕೆಯಾಗಿರುವುದು ಸಮಾಧಾನಕರ. ಆದರೆ ಕೇಂದ್ರ ಸರ್ಕಾರ ಇದರ ನೇರ ಲಾಭ ತೈಲ ಬಳೆಕದಾರರಿಗೆ ವರ್ಗಾಯಿಸುವ ಬದಲು ಶ್ರೀಮಂತರ ಬೊಕ್ಕಸ ತುಂಬಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಗಣನೀಯ ಪ್ರಮಾಣದಲ್ಲಿ ತೈಲ ಉತ್ಪನ್ನಗಳಿಗೆ ತೆರಿಗೆಯನ್ನು ಶೇ.60ರಷ್ಟು ಹಾಕಿ ಜನ ಸಾಮಾನ್ಯರಿಂದ ತೆರಿಗೆ ಮೂಲಕ ಲೂಟಿ ಮಾಡುತ್ತಿವೆ. ತೈಲ ಬೆಲೆ ಏರಿಕೆಯಿಂದ ದಿನನಿತ್ಯದ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ರಾಜ್ಯ ಸರ್ಕಾರ ತೈಲೋತ್ಪನ್ನಗಳ ಮೇಲಿನ ತೆರಿಗೆ ಕಡಿಮೆ ಮಾಡಿದರೆ ಬೆಲೆ ಏರಿಕೆಯ ಬಾರ ಕಡಿಮೆಯಾಗುತ್ತದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ದಿನ ಬಳಕೆ ವಸ್ತುಗಳ ಬೆಲೆ ಕಡಿಮೆ ಮಾಡಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಸಲೀಂ ಖಾನ್, ಅಲ್ಲಾ ಭಕ್ಷಿ, ಕಲೀಂವುಲ್ಲಾ, ಮುಜೀಬ್, ಇಮ್ರಾನ್, ಅಸೀಫ್, ಸಾದೀಕ್, ಫೈರೋಜ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News