ಜಗ್ಗೇಶ್‍ಗೆ ಮುತ್ತಿಗೆ ಪ್ರಕರಣ: ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದ ನಟ ದರ್ಶನ್

Update: 2021-02-24 14:24 GMT
ಜಗ್ಗೇಶ್- ದರ್ಶನ್ (Photo: Instagram/darshanthoogudeepashrinivas/)

ಬೆಂಗಳೂರು, ಫೆ.24: ಆಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್‍ಗೆ ಮುತ್ತಿಗೆ ಹಾಕಿದ ಘಟನೆಗೆ ನಟ ದರ್ಶನ್ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ನಟ ಜಗ್ಗೇಶ್ ನಿರ್ಮಾಪಕರೊಬ್ಬರ ಬಳಿ ಮಾತನಾಡಿರುವ ಸಂಭಾಷಣೆಯೊಂದು ವೈರಲ್ ಆಗಿ, ನಟ ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ಮೈಸೂರಿನಲ್ಲಿ ತೋತಾಪುರಿ ಚಿತ್ರದ ಶೂಟಿಂಗ್‍ಗೆ ತೆರಳಿದ್ದ ವೇಳೆ ದರ್ಶನ್ ಅಭಿಮಾನಿಗಳು ಮುತ್ತಿಗೆ ಹಾಕಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ.

ಈ ಘಟನೆಯ ನಂತರ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾಗ್ವಾದಗಳು ಹೆಚ್ಚಾಗತೊಡಗಿತ್ತು. ಇನ್ನು ಮುಂದೆ ನಾನು ಕಲಾವಿದರ ಯಾರ ಹುಟ್ಟುಹಬ್ಬಕ್ಕೂ, ಸ್ನೇಹ ಕಾರ್ಯಕ್ರಮಗಳಿಗೂ ಭಾಗವಹಿಸುವುದಿಲ್ಲ. ಶೂಟಿಂಗ್ ಹಾಗೂ ಟಿವಿ ಶೋಗೆ ಮಾತ್ರ ಮೀಸಲು ಎಂದು ನಟ ಜಗ್ಗೇಶ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದರು.

ವಿವಾದಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್-ದರ್ಶನ್ ಪರಸ್ಪರ ಬಗೆಹರಿಸಿಕೊಳ್ಳಬೇಕೆಂದು ಹಲವು ಸಿನೆಮಾ ನಿರ್ಮಾಪಕರು, ನಟರು ಹಾಗೂ ಸಾರ್ವಜನಿಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಟ ದರ್ಶನ್ ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡುತ್ತಾ, ನಟ ಜಗ್ಗೇಶ್‍ಗೆ ಮುತ್ತಿಗೆ ಹಾಕಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿ ಕ್ಷಮೆ ಯಾಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, ದರ್ಶನ್‍ಗೆ ಧನ್ಯವಾದ ಅರ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News