ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ದೇಶ ಕಂಡಿರಲಿಲ್ಲ: ಪ್ರೊ.ಭಗವಾನ್ ವಾಗ್ದಾಳಿ

Update: 2021-02-24 16:56 GMT

ಮೈಸೂರು,ಫೆ.24: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಸೈಕಲ್ ತುಳಿಯುವ ಮೂಲಕ ಪ್ರತಿಭಟನೆ ನಡೆಸಲಾಯಿತು.

ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಮುಂಭಾಗ ಬುಧವಾರ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿ, ಮೈಸೂರು ಜಿಲ್ಲಾ ಗ್ರಾಮಾಂತರ ಮತ್ತು ನಗರ ಕಾಂಗ್ರೆಸ್, ಆಟೋ ಚಾಲಕರ ಸಂಘ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳೊಡಗೂಡಿ ಸೈಕಲ್‍ನಲ್ಲಿ ಹೊರಟ ಪ್ರತಿಭಟನಾಕಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.

ಇದೇ ವೇಳೆ ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಇದುವರೆಗೂ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ದೇಶ ಕಂಡಿರಲಿಲ್ಲ. ನಮ್ಮ ಪ್ರಧಾನಿ ಸುಳ್ಳುಗಳ ಸರಮಾಲೆಯನ್ನೆ ಹರಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಬೆಲೆಗಳನ್ನು ಹೆಚ್ಚಿಸಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆಯಿಂದ ಜನರ ದಿನಬಳಕೆ ವಸ್ತುಗಳು ಹೆಚ್ಚಾಗಿವೆ. ಇದರಿಂದ ಜನರ ಬದುಕು ಮೂರಾಬಟ್ಟೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರದಿಂದ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಾಯಿತು ಎಂಬ ಹಸಿ ಸುಳ್ಳನ್ನು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರ ಇದ್ದಾಗ ಇಷ್ಟೊಂದು ಬೆಲೆ ಇರಲಿಲ್ಲ, ಕಚ್ಛಾ ತೈಲ ಬೆಲೆ ಹೆಚ್ಚಾಗಿದ್ದರೂ ಕಾಂಗ್ರೆಸ್ ಸರ್ಕಾರ 50-60 ರೂ. ಗೆ ಪೆಟ್ರೋಲ್ ನೀಡುತ್ತಿತ್ತು. ಆದರೆ ಈಗ ಕಚ್ಛಾ ತೈಲ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್, ಡೀಸೆಲ್ ಬೆಲೆ 100 ರೂ. ವರೆಗೆ ಬರುತ್ತಿದೆ. ಇದಕ್ಕೆ ಮೋದಿ ಬಿಟ್ಟರೆ ಬೇರೆ ಯಾರೂ ಕಾರಣರಲ್ಲ ಎಂದು ಕಿಡಿಕಾರಿದರು.

ಅಚ್ಚೇದಿನ್ ಎಂದು ಹೇಳಿದ ಇವರು ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ಇವರು ಅಧಿಕಾರಕ್ಕೆ ಬರುವ ಮುನ್ನ 15 ಲಕ್ಷ ರೂ. ಬ್ಯಾಂಕ್ ಖಾತೆಗೆ ಹಾಕುತ್ತೇನೆ ಎಂದವರು 15 ಪೈಸೆ ಸಹ ನೀಡಿಲ್ಲ, ಯುವಕರಿಗೆ ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದವರು ಇದುವರೆಗೂ ಉದ್ಯೋಗ ನೀಡಿಲ್ಲ. ಇಂತಹ ಸುಳ್ಳು ಹೇಳುವ ಪ್ರಧಾನಿಯನ್ನು ದೇಶ ಕಂಡಿರಲಿಲ್ಲ ಎಂದು ಹರಿಹಾಯ್ದರು.

ರೈತರು, ಬಡವರು, ಕೂಲಿಕಾರ್ಮಿಕರು ಬದುಕುವುದೇ ಕಷ್ಟವಾಗಿದೆ. ಪೆಟ್ರೋಲ್,ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಳದಿಂದ ಅಡಿಗೆ ಎಣ್ಣೆ, ಕಾಳು ಕಡ್ಡಿಗಳ ಬೆಲೆಯೂ ಹೆಚ್ಚಳವಾಗಿದೆ. ಹೀಗಿದ್ದಾಗ ಜನ ಹೇಗೆ ಬದುಕಬೇಕು? ನಿಮಗೆ ಬೇಕಾದಷ್ಟು ಜನ ಹಣ ನೀಡುತ್ತಾರೆ. ನೀವು ಅಧಿಕಾರಕ್ಕೆ ಬಂದಾಗ ಹತ್ತು ಲಕ್ಷ ರೂ. ಶರ್ಟ್ ಹಾಕಿಕೊಂಡಿರಿ. ಯಾರಾದರೂ ಹಾಕಲು ಸಾಧ್ಯವೇ. ಇಂತಹ ಸುಖದಲ್ಲಿ ಬದುಕುವ ನೀವು ಯಾವ ರೀತಿ ಪ್ರಜೆಗಳ ಪರವಾಗಿ ಇದ್ದೀರಿ ಎಂದು ಪ್ರಶ್ನಿಸಿದರು.

ನೀವು ಬಹಳ ಒಳ್ಳೆ ಕೆಲಸ ಮಾಡುತ್ತಿದ್ದೇನೆ ಎಂದು ಭಾವಿಸಿದ್ದೀರಿ. ಆದರೆ ನೀವು ಯಾರದೊ ಕೈವಶದಲ್ಲಿ ಇದ್ದೀರಿ. ಅವರು ಹೇಳಿದ ಹಾಗೆ ರಾಜ್ಯಭಾರ ಮಾಡುತ್ತಿದ್ದೀರಿ. ಆದರೆ ಈ ರಾಜ್ಯಬಾರದಿಂದ ಇಡೀ ದೇಶದ ಜನಕ್ಕೆ ನೋವಾಗುತ್ತಿದೆ. ಈ ಹಿಂದೆ ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದರು. ಅವರು ಮಾಡಿದ ತಪ್ಪಿಗೆ ಅವರು ಬಹಳ ದೊಡ್ಡ ಬೆಲಯನ್ನು ತೆತ್ತರು. ಅಧಿಕಾರ ಕಳೆದುಕೊಂಡರು. ನೀವು ನಿಮ್ಮ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ನೀವು ಅಧಿಕಾರದಿಂದ ಕೆಳಗ ಇಳಿಯುತ್ತೀರಿ ಎಂದು ಹೇಳಿದರು.

ಕಳೆದ ಮೂರು ತಿಂಗಳಿಂದ ದೆಹಲಿಯಲ್ಲಿ ನಮ್ಮ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಡೀ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಪ್ರಪಂಚವೇ ತಲೆದೂಗಿದೆ. ಅಂತಹವರ ಮೇಲೆ ಏನು ಕನಿಕರ ತೋರಿಸಿದ್ದೀರಿ ? ರೈತರು ಇದುವರೆಗೂ ಒಂದು ತೊಂದರೆಯನ್ನು ಕೊಟ್ಟಿಲ್ಲ. ಅಶಾಂತಿಯಿಂದ ವರ್ತಿಸಿಲ್ಲ. ಇಂತಹ ಪ್ರಜೆಗಳು ಪ್ರಪಂಚದಲ್ಲಿ ಎಲ್ಲಿ ಸಿಗುತ್ತಾರೆ. ಅಂತಹ ರೈತರ ಬಗ್ಗೆ ಏನು ಕಾಳಜಿ ತೋರಿಸಿದ್ದೀರಿ. ಹಾಗಾಗಿ ರೈತರು, ಬಡವರು, ಕೂಲಿಕಾರರಿಗೆ ಅನುಕೂಲವಾಗುವಂತೆ ಮಾಡಿ ಬೆಲೆಗಳನ್ನ ಇಳಿಸಿ, ಇಲ್ಲದಿದ್ದರೆ ಬಹಳ ತೊಂದರೆ ಅನುಭವಿಸಿ. ಜನ ದಂಗೆ ಏಳುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ಜಿಲ್ಲಾಧಿಕಾರಿಗಳ ಕಚೇರಿವರೆಗೆ ತೆರಳಿದ ಪ್ರತಿಭಟನಾಕಾರರು, ರಸ್ತೆಯುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಪುರುಷತೋತ್ತಮ್, ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ಡೈರಿ ವೆಂಕಟೇಶ್, ಎ.ಎಚ್.ಕೃಷ್ಣೇಗೌಡ, ಪರಿಸರ ಕಾರ್ಯಕರ್ತೆ ಭಾನು ಮೋಹನ್, ನೆಲೆ ಹಿನ್ನಲೆ ಗೋಪಾಲಕೃಷ್ಣ, ಅಶೋಕಪುರಂ ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

56 ಇಂಚಿನ ಎದೆಯ ಮೋದಿ ತಮ್ಮ ಮನೆಯಲ್ಲಿ ಸಾಕಿದ ನವಿಲಿಗೆ ಕಾಳು ತಿನ್ನಿಸಲು ಸಮಯ ಇದೆ. ಆದರೆ ಹೋರಾಟ ಮಾಡುತ್ತಿರುವ ರೈತರನ್ನು ಭೇಟಿ ಮಾಡಲು ಸಮಯ ಇಲ್ಲ, ಮೋದಿ ವಿರುದ್ಧ ಯಾರು ಮಾತನಾಡುತ್ತಾರೆ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ದಿಶಾ ರವಿಗೆ ಜಾಮೀನು ನೀಡಿದ ನ್ಯಾಯಾದೀಶರನ್ನು ಮೋದಿ ಸುಮ್ಮನೆ ಬಿಡುವುದಿಲ್ಲ, ಅವರನ್ನು ವರ್ಗಾವಣೆ ಮಾಡಲಿದ್ದಾರೆ.

-ಪ್ರೊ.ನಂಜರಾಜೇ ಅರಸ್, ಇತಿಹಾಸ ತಜ್ಞ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News