ಸಕಾಲ ಯೋಜನೆ ಬೈಪಾಸ್; ಅಧಿಕಾರಿಗಳ ಕಾರ್ಯವೈಖರಿಗೆ ಸಚಿವ ಸುರೇಶ್ ಕುಮಾರ್ ಅಸಮಾಧಾನ

Update: 2021-02-25 12:59 GMT

ಬೆಂಗಳೂರು, ಫೆ.25: ರಾಜ್ಯದಲ್ಲಿ ದೊರೆಯುವ 758 ಸೇವೆಗಳಲ್ಲಿ ಬಹುತೇಕ ಸೇವೆಗಳಿಗೆ ಸಾರ್ವಜನಿಕರಿಂದ ಸಕಾಲ ಯೋಜನೆಯಲ್ಲಿ ಕೋರಿಕೆಗಳೆ ಲಭ್ಯವಾಗಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶ್ ಕುಮಾರ್, ಈ ಕುರಿತು ಅಧಿಕಾರಿಗಳು ಸಾರ್ವಜನಿಕ ಸೇವೆಗಳನ್ನು ಬೈಪಾಸ್ ಮಾಡುತ್ತಿದ್ದಾರೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಗುರುವಾರ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಕಾಲ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನೆ ಮತ್ತು ಸಕಾಲ ಸೇವೆಗಳಲ್ಲಿ ಸಾಧನೆ ಮಾಡಿರುವ ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರರಿಗೆ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ವಿತರಿಸಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಅವರು ಮಾತನಾಡಿದರು.

ಕ್ಲುಪ್ತ ಸಮಯದಲ್ಲಿ ಸಾರ್ವಜನಿಕರಿಗೆ ನಾಗರಿಕ ಸೇವೆಗಳು ದೊರೆಯುವಂತಾಗಲು ಸಕಾಲ ಯೋಜನೆಗಳ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿನ ಅನುಷ್ಠಾನ ಸಮಿತಿಗಳ ಮೂಲಕ ಈ ಕುರಿತು ತೀವ್ರ ನಿಗಾ ಇಡಲಾಗುವುದು ಎಂದು ಅವರು ಹೇಳಿದರು.

ಸಕಾಲ ಯೋಜನೆ ಮೂಲಕ ಸೇವೆಗಳನ್ನು ಒಗಿಸಲು ಅಧಿಕಾರಿಗಳು ಮತ್ತು ಸಮಿತಿಗಳು  ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ಈ ಕುರಿತು ರಾಜ್ಯಮಟ್ಟದಿಂದ ತೀವ್ರ ನಿಗಾ ಇಡಲಾಗುವುದು. ಸಕಾಲ ಯೋಜನೆಯಡಿ ಜಿಲ್ಲಾವಾರು ಪ್ರಗತಿ ಪರಿಶೀಲಿಸಲು ಮತ್ತು ಎಷ್ಟು ಸಂಖ್ಯೆಯ ಸೇವೆಗಳಿಗೆ ಕೋರಿಕೆ ಲಭ್ಯವಾಗಿದೆ ಎಂಬ ಕುರಿತು ತಾವೇ ಪ್ರತಿ 15 ದಿನಗಳಿಗೊಮ್ಮೆ ಸ್ವತಃ ಪರಿಶೀಲನೆ ಮಾಡುವುದಾಗಿ ಅವರು ತಿಳಿಸಿದರು.

ಈ ಕುರಿತು ಜಿಲ್ಲಾ ಮಟ್ಟದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಎಲ್ಲ ಸೇವೆಗಳನ್ನು ಸಕಾಲ ಯೋಜನೆಯಡಿಯಿಂದಲೆ ನೀಡುವ ಕುರಿತು ಕ್ರಮ ವಹಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಅವರು ಸಲಹೆ ನೀಡಿದರು.

ಕೆಲ ಕಚೇರಿಗಳಲ್ಲಿ ಸಕಾಲ ಯೋಜನೆಯಡಿ ಸೇವೆಗಳಿಗೆ ಶೂನ್ಯ ಅರ್ಜಿ ಸಲ್ಲಿಕೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುರೇಶ್ ಕುಮಾರ್, ಸಾರ್ವಜನಿಕರು ಈ ಕಚೇರಿಗಳಿಗೆ ಯಾವುದೇ ಸೇವೆಗೆ ಬಂದಿಲ್ಲವೆಂದು ಪರಿಗಣಿಸಬೇಕೇ ಅಥವಾ ನಿಗದಿತ ಸಮಯದಲ್ಲಿ ಸೇವೆ ಒದಗಿಸಲು ಬಯಸದ ಅಧಿಕಾರಿಗಳು ಸಕಾಲ ಯೋಜನೆಯಡಿ ಅರ್ಜಿ ಪಡೆಯದೇ ಭೌತಿಕವಾಗಿ ಅರ್ಜಿ ಸ್ವೀಕರಿಸಿ ಸಕಾಲ ಯೋಜನೆಯ ಸೇವೆಗಳನ್ನು ಬೈಪಾಸ್ ಮಾಡಲಾಗುತ್ತಿದೆಯೇ ಎಂಬ ಕುರಿತು ಅನುಮಾನ ವ್ಯಕ್ತವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.  

ಸಕಾಲ ಯೋಜನೆ ಮೂಲಕ ಸರಕಾರದ ಎಲ್ಲ ಸೇವೆಗಳನ್ನು ನೀಡುವುದನ್ನು ಮತ್ತು ದೊರೆಯುವುದನ್ನು ಖಾತರಿಪಡಿಸಲು ಹಾಗೆಯೇ ಜಿಲ್ಲೆಗಳು ಮತ್ತು ತಾಲೂಕುವಾರು ಪರಿಶೀಲನೆಯಲ್ಲಿ ವಿಳಂಬ ಸೇವೆ ಮತ್ತು ತಿರಸ್ಕೃತ ಅರ್ಜಿಗಳ ಶೇಕಡವಾರು ಹೆಚ್ಚಿನ ಪ್ರಕರಣಗಳು ಕಂಡುಬರುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸೂಕ್ತ ಸಮಯದಲ್ಲಿ ಸೇವೆ ದೊರೆಯುತ್ತಿಲ್ಲ ಎಂಬ ಅಂಶ ವ್ಯಕ್ತವಾಗುತ್ತಿದೆ. ಇದನ್ನು ಜಿಲ್ಲಾಮಟ್ಟದಲ್ಲಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಎರಡು ಸಮಿತಿಗಳನ್ನು ರಚಿಸಲಾಗುವುದು ಎಂದು ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮನ್ವಯ ಸಮಿತಿ ರಚಿಸಿ ಪ್ರತಿ ಸೋಮವಾರ ನಿಗದಿತ ನಮೂನೆಯಲ್ಲಿ ಸಕಾಲ ಮಿಷನ್‍ಗೆ ವರದಿ ಸಲ್ಲಿಸುವುದು. ಹಾಗೆಯೇ ವಿವಿಧ ಸರಕಾರಿ ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲು ಪರಿಶೀಲನಾ ತಂಡಗಳನ್ನು ರಚಿಸಿ ಪ್ರತಿ ಶನಿವಾರ ವಿಳಂಬ ವಿಲೇವಾರಿ ಮತ್ತು ತಿರಸ್ಕೃತ ಕಾರಣಗಳನ್ನು ಪರಿಶೀಲಿಸಲು ಕ್ರಮ ವಹಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದರು.

ನಾಗರಿಕರಿಗೆ ಸಕಾಲದ ಮೂಲಕ ನಿಗದಿತ ಸಮಯದಲ್ಲಿ ತೃಪ್ತಿ ಮತ್ತು ಸಮಾಧಾನ ಅಂಶಗಳು ಸಕಾಲ ಸೇವೆಗಳ ಮಾನದಂಡವಾಗಬೇಕಿದೆ. ಸಕಾಲದ ಮಹತ್ವವನ್ನು ಅಧಿಕಾರಿಗಳು ಮತ್ತು ನೌಕರರು ಅರ್ಥ ಮಾಡಿಕೊಳ್ಳುವುದರೊಂದಿಗೆ ಮಹೋನ್ನತ ಉದ್ದೇಶ ಹೊಂದಿರುವ ಈ ಯೋಜನೆಯ ಸೌಲಭ್ಯದ ಸಮಾಧಾನ ಜನತೆಗೆ ದೊರೆಯಬೇಕು. ಈ ನಿಟ್ಟಿನಲ್ಲಿ ನಮ್ಮ ಆಡಳಿತ ವ್ಯವಸ್ಥೆ ಕೆಲಸ ಮಾಡಬೇಕು ಎಂದು ಸುರೇಶ್ ಕುಮಾರ್ ಸಲಹೆ ನೀಡಿದರು. 

2020ರ ನವೆಂಬರ್‍ನಲ್ಲಿ ಮಂಡ್ಯ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಜಿಲ್ಲೆಗಳು, ಡಿಸೆಂಬರ್‍ನಲ್ಲಿ ಚಿಕ್ಕಬಳ್ಳಾಪುರ, ಮಂಡ್ಯ, ಚಿಕ್ಕಮಗಳೂರು ಜಿಲ್ಲೆಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿವೆ. 2021ನೆ ಜನವರಿಯ ಶ್ರೇಯಾಂಕ ಪಟ್ಟಿಯಲ್ಲಿ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗ ಜಿಲ್ಲೆಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿವೆ ಎಂದು ಅವರು ತಿಳಿಸಿದರು. 

ಕಳೆದ ಮೂರು ತಿಂಗಳಿನಲ್ಲಿ ಬೆಂಗಳೂರು ದಕ್ಷಿಣ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಮೂರು ಬಾರಿಯೂ ಬೆಂಗಳೂರು ನಗರ ಜಿಲ್ಲೆ ಕೊನೆಯ ಸ್ಥಾನವಾದ 30ನೆ ಸ್ಥಾನದಲ್ಲಿದೆ. ಇಲ್ಲಿ  11,876 ಅರ್ಜಿಗಳನ್ನು ಅವಧಿ ಮೀರಿ ಉಳಿಸಿಕೊಳ್ಳಲಾಗಿದೆ. ಇದು ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ದೊಡ್ಡ ಪ್ರಮಾಣದ್ದಾಗಿದೆ. ಬೆಳಗಾವಿ ಜಿಲ್ಲೆ 29ನೇ ಸ್ಥಾನ ಮತ್ತು ಮೈಸೂರು ಜಿಲ್ಲೆ 28ನೇ ಸ್ಥಾನದಲ್ಲಿದೆ ಎಂದು ಅವರು ವಿವರಿಸಿದರು.

ಇದೇ ಆವಧಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕು, ಹಾಸನ ತಾಲೂಕು ಚಿಕ್ಕಬಳ್ಳಾಪುರ ತಾಲೂಕುಗಳು ಹೆಚ್ಚಿನ ಸಂಖ್ಯೆಯ ಅರ್ಜಿ ಸ್ವೀಕರಿಸಿ ನಿಗದಿತ ಅವಧಿಯಲ್ಲಿ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಿ ತಾಲೂಕುವಾರು ಮೊದಲ ಮೂರು ಸ್ಥಾನಗಳನ್ನು ಪಡೆದಿವೆ ಎಂದು ಅವರು ವಿವರಿಸಿದರು. 

ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಡಿಪಿಎಆರ್ ಇ-ಆಡಳಿತ ಅಪರ ಮುಖ್ಯಕಾರ್ಯದರ್ಶಿ ರಾಜೀವ್ ಚಾವ್ಲಾ, ಸಕಾಲ ಯೋಜನೆ ಮಿಷನ್ ಡೈರೆಕ್ಟರ್ ಡಾ.ಬಿ.ಆರ್.ಮಮತಾ ಮತ್ತಿತರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News