ಕಾಂಪ (CAMPA) ಹಣ ಬಳಕೆ ಅನುಮತಿಗೆ ಶೀಘ್ರದಲ್ಲೇ ಕೇಂದ್ರಕ್ಕೆ ನಿಯೋಗ: ಅರವಿಂದ ಲಿಂಬಾವಳಿ
ಬೆಂಗಳೂರು, ಫೆ.25: ಕಾಂಪ (CAMPA) ಯೋಜನೆಯಡಿ ಕರ್ನಾಟಕದಲ್ಲಿ ಪ್ರಾಣಿ ಅತಿಕ್ರಮಣ ಮಾಡುವ ಮಾರ್ಗದ ಉದ್ದಕ್ಕೂ ಬ್ಯಾರಿಕೇಡ್ ನಿರ್ಮಾಣ ಮಾಡುವ ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ಅಗತ್ಯವಿದ್ದು, ಶೀಘ್ರದಲ್ಲೇ ಅರಣ್ಯ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಶಾಸಕರ ನಿಯೋಗವನ್ನು ಕೇಂದ್ರಕ್ಕೆ ಕೊಂಡೊಯ್ಯಲಾಗುವುದು ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಗುರುವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅರಣ್ಯ ಪ್ರದೇಶವಿರುವ ವಿಧಾನಸಭಾ ಕ್ಷೇತ್ರದ ಶಾಸಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕದ 624 ಕಿ.ಲೋ.ಮೀ. ಮಾರ್ಗಕ್ಕೆ ಬ್ಯಾರಿಕೇಡ್ ನಿರ್ಮಾಣ ಮಾಡುವ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಇದುವರೆಗೆ 165 ಕಿ.ಲೋ.ಮೀ. ಬೇಲಿ ಹಾಕುವ ಕೆಲಸ ಮುಗಿದಿದೆ ಎಂದರು.
ಇನ್ನೂ 450 ಕಿ.ಲೋ.ಮೀ. ಮಾರ್ಗಕ್ಕೆ ಬ್ಯಾರಿಕೇಡ್ ನಿರ್ಮಿಸುವ ಕೆಲಸ ಬಾಕಿ ಇದ್ದು, ಇದಕ್ಕೆ 550 ಕೋಟಿ ರೂಪಾಯಿ ಅಗತ್ಯವಿದೆ. ಈ ಯೋಜನೆಗೆ ಕೇಂದ್ರದ ಅನುಮತಿ ಅಗತ್ಯವಿದ್ದು, ಶೀಘ್ರದಲ್ಲೇ ಅರಣ್ಯ ಪ್ರದೇಶಗಳಿರುವ ವಿಧಾನಸಭಾ ಕ್ಷೇತ್ರದ ಶಾಸಕರ ನಿಯೋಗದೊಂದಿಗೆ ದಿಲ್ಲಿಗೆ ಹೋಗಿ ಸಂಬಂಧಿಸಿದ ಇಲಾಖಾ ಸಚಿವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದು ಅರವಿಂದ ಲಿಂಬಾವಳಿ ಹೇಳಿದರು.
ಜನಪರ ಇಲಾಖೆ ಮಾಡಲು ಕ್ರಮ: ಅರಣ್ಯ ಇಲಾಖೆ ಅಧಿಕಾರಿಗಳಿಂದ ನಾನಾ ಕಾರಣಗಳಿಗಾಗಿ ಜನರಿಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮುಖ್ಯವಾಗಿ ಅರಣ್ಯವಾಸಿಗಳಿಗೆ ಮೂಲಸೌಕರ್ಯ ಕಲ್ಪಿಸುವ ಮತ್ತು ಅವರಿಗೆ ಹಕ್ಕುಪತ್ರ ಕೊಡುವ ಕೆಲಸಗಳು ನನೆಗುದಿಗೆ ಬಿದ್ದಿವೆ. ಇಂತಹ ಸಂಗತಿಗಳ ಬಗ್ಗೆ ಇಲಾಖೆ ಶೀಘ್ರ ಕ್ರಮಕೈಗೊಂಡು ಅವರಿಗೆ ನೆರವಾಗುವಂತೆ ನಾನು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಅವರು ತಿಳಿಸಿದರು.
ಅರಣ್ಯ ಇಲಾಖೆ ಜನಪರ ಇಲಾಖೆಯಾಗಿ, ಜನಸ್ನೇಹಿಯಾಗಿ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕರು, ಪ್ರಾಣಿಗಳ ಹಾವಳಿಯಿಂದ ಸಾವಿಗೀಡಾದವರಿಗೆ ನೀಡಬೇಕಾದ ಪರಿಹಾರ ಶೀಘ್ರ ದೊರೆಯುವಂತಾಗಬೇಕು. ಬೆಳೆಹಾನಿ ಪರಿಹಾರ ಮೊತ್ತ ಹೆಚ್ಚಿಸಬೇಕು, ಪಶು ಮರಣಕ್ಕೆ ಮತ್ತು ಇತರ ಸಣ್ಣ ಪ್ರಾಣಿಗಳ ಮರಣಕ್ಕೆ ಕೊಡಲಾಗುತ್ತಿರುವ ಪರಿಹಾರ ತುಂಬ ಕಡಿಮೆ ಇದೆ. ಅದು ಈಗಿನ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ನಿಗದಿಯಾಗಬೇಕು ಎಂದು ಮನವಿ ಮಾಡಿದರು.
ಹಾಡಿ ಮತ್ತು ಅರಣ್ಯದೊಳಗಿನ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು ಎಂಬ ಬೇಡಿಕೆಗಳ ಬಗ್ಗೆ ಗಮನ ಸೆಳೆದರು. ಈ ಎಲ್ಲದರ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಅರವಿಂದ ಲಿಂಬಾಳಿ, ಈ ಎಲ್ಲದರ ಬಗ್ಗೆ ನಾನು ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ. ಇಲಾಖೆಯ ಕೆಳಹಂತದ ಅಧಿಕಾರಿಗಳಿಂದ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಜಿಲ್ಲಾವಾರು ಅರಣ್ಯ ಅಧಿಕಾರಿಗಳಿಗೆ ಅಹವಾಲು ವಿಲೇವಾರಿ ಮಾಡುವ ಬಗ್ಗೆ ಕಾರ್ಯಾಗಾರ ನಡೆಸಿ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಚ್.ಕೆ.ಕುಮಾರಸ್ವಾಮಿ, ಅರಗ ಜ್ಞಾನೇಂದ್ರ, ವಿ.ಸುನಿಲ್ ಕುಮಾರ್, ಟಿ.ಡಿ.ರಾಜೇಗೌಡ, ಆರ್.ವಿ.ದೇಶಪಾಂಡೆ. ಎನ್.ಮಹೇಶ್, ಸುನಿಲ್ ಬಿ ನಾಯ್ಕ್ ಹಾಗೂ ರೂಪಾಲಿ ಸಂತೋಷ್ ನಾಯ್ಕ್, ಹರ್ಷ, ಎಂ.ರೂಪ ಕಲಾ ಮುಂತಾದವರು ಭಾಗವಹಿಸಿದ್ದರು.