ಎಲ್ಲದಕ್ಕೂ ಸರಕಾರವನ್ನೇ ಅವಲಂಬಿಸಬೇಡಿ: ಚನ್ನಪಟ್ಟಣ ಆಟಿಕೆ ತಯಾರಕರಿಗೆ ಪ್ರಧಾನಿ ಸಲಹೆ

Update: 2021-02-27 15:40 GMT

ಹೊಸದಿಲ್ಲಿ, ಫೆ.27: ದೇಶದಲ್ಲಿ ಆಯೋಜಿಸಲಾದ ಪ್ರಪ್ರಥಮ ಭಾರತ ಆಟಿಕೆ ಮೇಳದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕದ ಚನ್ನಪಟ್ಟಣ ಗೊಂಬೆ ತಯಾರಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಎಲ್ಲದಕ್ಕೂ ಸರಕಾರವನ್ನೇ ಅವಲಂಬಿಸಬಾರದು. ಆಟಿಕೆ ತಯಾರಕರೆಲ್ಲರೂ ಚರ್ಚೆ ನಡೆಸಿ, ನಿಮ್ಮ 200 ವರ್ಷ ಪುರಾತನ ವೃತ್ತಿಗೆ ನಾವೀನ್ಯತೆಯ ಸ್ಪರ್ಷ ನೀಡಿ ವಿಶ್ವದ ಗಮನ ಸೆಳೆಯಬೇಕು ಎಂದು ಸಲಹೆ ನೀಡಿದ್ದಾರೆ.

ಬೆಂಗಳೂರಿನಿಂದ 60 ಕಿಮೀ ದೂರವಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರ ಗೊಂಬೆಗಳ ನಗರವೆಂದೇ ಪ್ರಸಿದ್ಧ ಎಂದು ಪ್ರಧಾನಿಯೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಚನ್ನಪಟ್ಟಣ ಗೊಂಬೆ ತಯಾರಕರ ತಂಡವೊಂದು ಹೇಳಿ, ತಾವು ತಯಾರಿಸುವ ಕೆಲವು ಜನಪ್ರಿಯ ಗೊಂಬೆಗಳನ್ನು ಉಲ್ಲೇಖಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ‘ನೀವು ಉಲ್ಲೇಖಿಸಿದ ಗೊಂಬೆಗಳ ಹೆಸರು ನನ್ನನ್ನು ಬಾಲ್ಯಕಾಲಕ್ಕೆ ಕರೆದೊಯ್ಯಿತು’ ಎಂದರು. ಚನ್ನಪಟ್ಟಣದಲ್ಲಿ ಗೊಂಬೆ ತಯಾರಿಕೆಯನ್ನೇ ಕಸುಬಾಗಿರಿಸಿಕೊಂಡ ಸುಮಾರು 2,000 ಕುಶಲಕರ್ಮಿಗಳಿದ್ದು ಇದರಲ್ಲಿ 20% ಮಹಿಳೆಯರು. ಇಲ್ಲಿನ ಗೊಂಬೆಗಳಿಗೆ 2 ಶತಮಾನಗಳ ಇತಿಹಾಸವಿದೆ. ಗೊಂಬೆ, ಮಣಿಚೌಕಟ್ಟು(ಅಬಾಕಸ್), ಪಗಡೆಯ ದಾಳಗಳು, ಬುಗುರಿ, ಹಾಗೂ ಇತರ ಆಟಿಕೆಗಳನ್ನು ಸ್ಥಳೀಯವಾಗಿ ಲಭಿಸುವ ಹಾಲೆ ಮರದಿಂದ ತಯಾರಿಸಿ ವಾರ್ನಿಶ್ ನೀಡಲಾಗುತ್ತದೆ.

* ಚನ್ನಪಟ್ಟಣದಲ್ಲಿ ಗೊಂಬೆ ತಯಾರಿಕೆ ವೃತ್ತಿಯಲ್ಲಿ ಎಷ್ಟು ಮಂದಿ ತೊಡಗಿಸಿಕೊಂಡಿದ್ದೀರಿ ಎಂಬ ಪ್ರಧಾನಿಯ ಪ್ರಶ್ನೆಗೆ ಉತ್ತರಿಸಿದ ಗೊಂಬೆ ತಯಾರಕರು- ಸುಮಾರು 2000 ಮಂದಿಯಿದ್ದೇವೆ. ಇಲ್ಲಿ ಎರಡು ಆಟಿಕೆ ತಯಾರಿಕೆ ತರಬೇತಿ ಕೇಂದ್ರವಿದ್ದು ಸರಕಾರದ ನೆರವಿನ ಅಗತ್ಯವಿದೆ ಮತ್ತು ಇನ್ನೂ ಕೆಲವು ತರಬೇತಿ ಕೇಂದ್ರ ಆರಂಭಿಸಬೇಕು ಎಂದು ಬೇಡಿಕೆ ಮುಂದಿರಿಸಿದರು.

* ಬೆಂಗಳೂರು ನವೋದ್ಯಮದ ರಾಜಧಾನಿ ಮತ್ತು ಭಾರತದ ಐಟಿ-ಬಿಟಿ ಕೇಂದ್ರ ಎಂಬುದು ತಿಳಿದಿದೆಯೇ ಎಂಬ ಪ್ರಶ್ನೆಗೆ ಗೊಂಬೆ ತಯಾರಕರಿಂದ ನಕಾರಾತ್ಮಕ ಉತ್ತರ ಬಂದಿತು.

* ಇಂತಹ ವೃತ್ತಿಪರರನ್ನು ಚನ್ನಪಟ್ಟಣದ ಗೊಂಬೆ ತರಬೇತಿ ಕೇಂದ್ರಕ್ಕೆ ಆಹ್ವಾನಿಸಿ ಅವರಿಂದ ಅತ್ಯಾಧುನಿಕ ನಾವೀನ್ಯತೆಯ ಬಗ್ಗೆ ತಿಳಿದುಕೊಂಡು ಚನ್ನಪಟ್ಟಣದ ಗೊಂಬೆಯ ಖ್ಯಾತಿ ವಿಶ್ವಕ್ಕೇ ಪಸರಿಸಬೇಕು ಎಂದು ಮೋದಿ ಸಲಹೆ ನೀಡಿದರು.

* ಇ-ಮಾರ್ಕೆಟ್ ಹೆಸರು ಕೇಳಿದ್ದೀರಾ? ಇದರಲ್ಲಿ ವ್ಯವಹಾರ ನಡೆಸಲು ಪ್ರಯತ್ನಿಸಿದ್ದೀರಾ? ನಿಮ್ಮ ಗೊಂಬೆಗಳು ವಿಶ್ವದಲ್ಲಿ ಪ್ರಸಿದ್ಧಿ ಪಡೆಯುವಂತೆ ಯಾವ ರೀತಿಯ ನಾವೀನ್ಯತೆ ಅಳವಡಿಸಿಕೊಂಡಿದ್ದೀರಿ? ಪ್ರತೀ ವರ್ಷ ಅತ್ಯುತ್ತಮ ಹೊಸ ಶೋಧಕ್ಕೆ ಪುರಸ್ಕಾರ ನೀಡುತ್ತಿರುವ ವ್ಯವಸ್ಥೆ ನಿಮ್ಮಲ್ಲಿದೆಯೇ? ಮಕ್ಕಳಿಗೆ ಇಷ್ಟವಾದ ಆಟಿಕೆ, ಗೊಂಬೆ ಯಾವುದೆಂದು ನಿಮಗೆ ತಿಳಿದಿದೆಯೇ ಎಂದು ಮೋದಿ ಪ್ರಶ್ನಿಸಿದರು. ಇ-ಮಾರ್ಕೆಟ್ ಬಗ್ಗೆ ತಿಳಿದಿದೆ, ಆದರೆ ಅದರ ಮೂಲಕ ವ್ಯವಹಾರಕ್ಕೆ ಪ್ರಯತ್ನಿಸಿಲ್ಲ. ಆದರೆ ಉತ್ತಮ ಹೊಸಶೋದಕ್ಕೆ ಪುರಸ್ಕಾರ ನೀಡುವ ವ್ಯವಸ್ಥೆಯಿದೆ ಎಂದರು.

* ಕಳೆದ ವರ್ಷ ಯಾವ ಹೊಸಕಲ್ಪನೆಯ ಆಟಿಕೆಗೆ ಪುರಸ್ಕಾರ ಸಂದಿದೆ- ಮೋದಿ ಪ್ರಶ್ನೆಗೆ ಹನುಮಾನ್ ಎಂಬ ಉತ್ತರ ಬಂದಿತು. ಹನುಮಾನ್ ಆಟಿಕೆಯಲ್ಲಿ ಯಾವ ವೈವಿಧ್ಯತೆ, ಹೊಸ ಕಲ್ಪನೆ ರೂಢಿಸಿದ್ದೀರಿ ಎಂದು ಮೋದಿ ಮರು ಪ್ರಶ್ನಿಸಿದರು. ನಿಮ್ಮ ಆಟಿಕೆ, ಗೊಂಬೆಗಳ ಬಗ್ಗೆ ವಿಶ್ವದ ಗಮನ ಸೆಳೆಯಬೇಕಿದ್ದರೆ ನಿಮ್ಮ ಉತ್ಪನ್ನಗಳಿಗೆ ನಾವೀನ್ಯತೆಯ ಸ್ಪರ್ಷದ ಅಗತ್ಯವಿದೆ. ಎಲ್ಲದಕ್ಕೂ ಸರಕಾರವನ್ನೇ ಅವಲಂಬಿಸಬೇಡಿ. ಗೊಂಬೆ ತಯಾರಿಕರೆಲ್ಲರೂ ಚರ್ಚಿಸಿ, ನಿಮ್ಮ 2 ಶತಮಾನ ಪುರಾತನ ವೃತ್ತಿಗೆ ಹೊಸತನದ ಮೆರುಗು ತರಲು ಪ್ರಯತ್ನಿಸಿ. ಸರಕಾರದ ಇಲಾಖೆಗಳು ನಿಮಗೆ ನೆರವು ನೀಡುತ್ತವೆ. ವಿಶ್ವದೆಲ್ಲೆಡೆಯ ಮಕ್ಕಳ ಮುಖದಲ್ಲಿ ನಗು ಅರಳಿಸುವ ರೀತಿಯಲ್ಲಿ ನಿಮ್ಮ ಗೊಂಬೆ, ಆಟಿಕೆಗಳಲ್ಲಿ ನಾವೀನ್ಯತೆ ತನ್ನಿ ಎಂದು ಮೋದಿ ಹೇಳಿದರು. ಗೊಂಬೆಗಳ ಪಟ್ಟಣ ಚನ್ನಪಟ್ಟಣಕ್ಕೆ ಬೆಂಗಳೂರಿನ ನವೋದ್ಯಮಿಗಳು ಹಾಗೂ ಐಟಿ ಸಂಸ್ಥೆಗಳು ಭೇಟಿ ನೀಡಿ, ಅಲ್ಲಿನ ಕುಶಲಕರ್ಮಿಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ರೂಪಿಸುವಂತೆ ಕರ್ನಾಟಕ ಸರಕಾರದೊಂದಿಗೆ ಮಾತನಾಡುತ್ತೇನೆ. ಸ್ಪರ್ಧಾತ್ಮಕವಾದ ಈಗಿನ ಕಾಲದಲ್ಲಿ ಹೊಸಕಲ್ಪನೆ, ನಾವೀನ್ಯತೆ ಅತ್ಯಗತ್ಯವಾಗಿದೆ ಎಂದು ಮೋದಿ ಹೇಳಿದರು.

► “ಭಾರತವು ಜಾಗತಿಕ ಆಟಿಕೆ ಉತ್ಪಾದನಾ ಕೇಂದ್ರವಾಗಬೇಕು”  

ನಾವೀನ್ಯತೆಗೆ ಗಮನ ನೀಡಿ, ಕಡಿಮೆ ಪ್ಲಾಸ್ಟಿಕ್ ಬಳಕೆ ಮತ್ತು ಪರಿಸರ ಸ್ನೇಹಿ ವಸ್ತುಗಳನ್ನು ಅಧಿಕ ಬಳಸುವ ಮೂಲಕ ಆಕರ್ಷಕ ಆಟಿಕೆಗಳನ್ನು ತಯಾರಿಸಬೇಕು ಎಂದು ಆಟಿಕೆ ಉತ್ಪಾದಕರಿಗೆ ಕರೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಜಾಗತಿಕ ಆಟಿಕೆ ಉತ್ಪಾದನಾ ಕೇಂದ್ರವಾಗುವ ಎಲ್ಲಾ ಅವಕಾಶ ಮತ್ತು ಸಾಮರ್ಥ್ಯ ಭಾರತಕ್ಕಿದೆ ಎಂದು ಹೇಳಿದ್ದಾರೆ.

ಪ್ರಪ್ರಥಮ ಭಾರತ ಆಟಿಕೆ ಮೇಳ 2021ಕ್ಕೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ಆಟಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗುವ ಜೊತೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಆಟಿಕೆಗಳಿಗೆ ಇರುವ ಬೇಡಿಕೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಜಾಗತಿಕ ಮಾರುಕಟ್ಟೆಯಲ್ಲಿ ಆಟಿಕೆಗಳ ವ್ಯವಹಾರ 100 ಬಿಲಿಯನ್ ಡಾಲರ್ ಮೊತ್ತದ್ದಾಗಿದ್ದು ಇದರಲ್ಲಿ ಭಾರತದ ಪಾಲು ಅತ್ಯಂತ ಕನಿಷ್ಟವಾಗಿದೆ. ದೇಶದಲ್ಲಿ ಮಾರಾಟವಾಗುತ್ತಿರುವ ಆಟಿಕೆಗಳಲ್ಲೂ 85%ದಷ್ಟು ಆಮದು ಆಟಿಕೆಗಳಾಗಿವೆ.

ದೇಶೀಯ ಆಟಿಕೆ ಉತ್ಪಾದನಾ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ 15 ಸಚಿವಾಲಯಗಳು ಒಳಗೊಂಡಿರುವ ರಾಷ್ಟ್ರೀಯ ಆಟಿಕೆ ಕ್ರಿಯಾ ಯೋಜನೆಯನ್ನು ಸರಕಾರ ರೂಪಿಸಿದೆ. ಭಾರತವನ್ನು ಆಟಿಕೆ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದೇ ಸಂದರ್ಭ ಅವರು ಕರ್ನಾಟಕದ ಚೆನ್ನಪಟ್ಟಣ, ಉತ್ತರಪ್ರದೇಶದ ವಾರಾಣಸಿ ಮತ್ತು ರಾಜಸ್ತಾನದ ಜೈಪುರದ ಪಾರಂಪರಿಕ ಆಟಿಕೆ ತಯಾರಕರ ಜೊತೆ ಸಂವಾದ ನಡೆಸಿದರು. ಮರು ಬಳಸಬಹುದಾದ, ಪರಿಸರ ಸ್ನೇಹೀ ಮತ್ತು ಮಕ್ಕಳ ಮನಸ್ಸನ್ನು ವಿಕಸಿಸುವ ರೀತಿಯ ಆಟಿಕೆಗಳನ್ನು ಉತ್ಪಾದಿಸಬೇಕು. ಭಾರತೀಯ ಆಟಿಕೆ ಉದ್ಯಮ ಪರಂಪರೆ, ತಂತ್ರಜ್ಞಾನ, ಪರಿಕಲ್ಪನೆ ಮತ್ತು ಸಾಮರ್ಥ್ಯವನ್ನು ಹೊಂದಿದ್ದು, ವಿಶ್ವಕ್ಕೇ ಪರಿಸರ ಸ್ನೇಹೀ ಆಟಿಕೆಗಳನ್ನು ಪೂರೈಸಲು ನಮಗೆ ಸಾಧ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News