'ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ': ಸಚಿವರ ವಿರುದ್ಧ ಮತ್ತೊಮ್ಮೆ ಹರಿಹಾಯ್ದ ಶಾಸಕ ರೇಣುಕಾಚಾರ್ಯ
ದಾವಣಗೆರೆ, ಫೆ.28: ಕೆಲ ಸಚಿವರು ದುರಹಂಕಾರಿಗಳಿದ್ದು, ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಮ್ಮದೇ ಸರ್ಕಾರದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಗಳಾದವರು ರಾಜ್ಯದ ಬೇರೆ ಕ್ಷೇತ್ರಗಳ ಬಗ್ಗೆಯೂ ಗಮನ ವಹಿಸಬೇಕು. ಅದನ್ನು ಬಿಟ್ಟು ದುರಹಂಕಾರದಿಂದ ವರ್ತಿಸುವುದು ಸರಿಯಲ್ಲ. ಇನ್ನಾದರೂ ಅಂತಹವರು ಇತರೆ ಕ್ಷೇತ್ರಗಳ ಬಗ್ಗೆಯೂ ನಿಗಾ ವಹಿಸಲಿ ಎಂದರು.
ತಮ್ಮ ಕ್ಷೇತ್ರದ ವಿಚಾರವಿದ್ದರೆ ವಿಧಾನಸೌಧದ 3ನೇ ಮಹಡಿಯಲ್ಲಿ ಚರ್ಚಿಸುತ್ತಾರೆ. ಬೇರೆ ಕ್ಷೇತ್ರಗಳ ಬಗ್ಗೆ ಯಾಕೆ ಇಷ್ಟು ಕಳಕಳಿ ಇಲ್ಲ? ಶಾಸಕರ ವಿಭಾಗವಾರು ಸಭೆಯಲ್ಲಿ ಕೆಲ ಸಚಿವರ ಬಗ್ಗೆ ಇರುವ ಅಸಮಾಧಾನವನ್ನು ಹೇಳಿದ್ದೇನೆ. ಕೇಂದ್ರದ ನಾಯಕರಿಗೂ ಕೆಲ ಸಚಿವರ ವರ್ತನೆಯ ಬಗ್ಗೆ ತಿಳಿಸಿದ್ದೇನೆ. ದುರಹಂಕಾರಿ ಸಚಿವರ ಬಳಿ ನಾನು ವಿನಂತಿ ಮಾಡುವುದಿಲ್ಲ ಎಂದು ಹೇಳಿದರು.
ಬಿಜೆಪಿ ಸರ್ಕಾರ ಬರುವಾಗ ರೆಸಾರ್ಟ್ ನಲ್ಲಿ ನಾನೂ ಹಮಾಲಿ ಕೆಲಸ ಮಾಡಿದ್ದೇನೆ. ಆದರೆ, ಕೆಲ ಸಚಿವರ ವರ್ತನೆ ಮಾತ್ರ ಸಹಿಸುವುದಕ್ಕೆ ಆಗುವುದಿಲ್ಲ. ಸಂಪುಟದಲ್ಲಿರುವ ಸಹೋದ್ಯೋಗಿಗಳು ಉತ್ತಮ ಕೆಲಸ ಮಾಡಿದಾಗ ಮಾತ್ರ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಸಿಎಂ ಯಡಿಯೂರಪ್ಪ ಸರ್ಕಾರ ಪಾರದರ್ಶಕ ಆಡಳಿತ ನೀಡುತ್ತಿದೆ. ಇನ್ನಾದರೂ ಸಚಿವರಾದವರು ತಮ್ಮ ವರ್ತನೆ ತಿದ್ದಿಕೊಳ್ಳಬೇಕು ಎಂದರು.