×
Ad

ಕೊನೆ ಉಸಿರಿನವರೆಗೂ ರಾಜ್ಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ: ಸಿಎಂ ಯಡಿಯೂರಪ್ಪ

Update: 2021-02-28 23:15 IST

ಶಿವಮೊಗ್ಗ, ಫೆ.28: ಬದುಕಿನ ಕೊನೆಯ ಉಸಿರು ಇರುವವರೆಗೂ ರಾಜ್ಯದ ಹಾಗೂ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ. ಇಲ್ಲಿಯ ಜನರ ಪ್ರೀತಿ, ವಿಶ್ವಾಸಕ್ಕೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದ ಹಳೇ ಜೈಲು ಆವರಣದಲ್ಲಿ ಬಿ.ಎಸ್.ಯಡಿಯೂರಪ್ಪ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಬಿಎಸ್‌ವೈ ಅವರಿಗೆ ನಮ್ಮೊಲುಮೆ ಅಭಿಮಾನದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ತಪ್ಪು ಹೆಜ್ಜೆಗಳನ್ನು ಇಡದೇ ಇನ್ನುಳಿದ ಅಧಿಕಾರ ಅವಧಿಯಲ್ಲಿ ಸಮೃದ್ಧ ಆಡಳಿತ ನೀಡಲು ಶಕ್ತಿ ಮೀರಿ ಪ್ರಯತ್ನಿಸುವೆ. ಬರುವ ದಿನಗಳಲ್ಲಿ ಶಿವಮೊಗ್ಗಕ್ಕೆ ಬರುವವರಿಗೆ ಕೆಲಸ ಮಾಡಲು ಏನು ಇರಬಾರದು. ಅದೇ ರೀತಿಯ ಅಭಿವೃದ್ಧಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಶಿವಮೊಗ್ಗಕ್ಕೆ ದೊಡ್ಡ ಕೈಗಾರಿಕೆಗಳು ಬರಬೇಕು. ಉದ್ಯೋಗ ಸೃಷ್ಟಿಯಾಗಬೇಕು. ಜನರ ಅಪೇಕ್ಷೆಯಂತೆ ಕೆಲಸ ಮಾಡುವ ಮೂಲಕ ಶಿವಮೊಗ್ಗ ಜಿಲ್ಲೆಯನ್ನು ಅಭಿವೃದ್ಧಿ ಮಾಡಲಾಗುವುದು. ಯಾರು ಏನೇ ಟೀಕೆ ಮಾಡಲಿ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ, ತಲೆ ಬಾಗದೇ ಮುಂದೆ ನಡೆಯುವೆ. ನಿರಂತರ ಕೆಲಸ ಮಾಡುವೆ. ರಾಜ್ಯದ ಪ್ರಗತಿಗಾಗಿ ಅಗತ್ಯ ಯೋಜನೆಗಳನ್ನು ರೂಪಿಸಲಾಗುವುದು. ಬರುವ ಮಾರ್ಚ್ 8ರಂದು ರಾಜ್ಯ ಬಜೆಟ್ ಮಂಡಿಸುವುದಾಗಿ ಹೇಳಿದರು.

ನಿಂಬೆ ಹಣ್ಣು ಮಾರಿದ್ದು ನೆನೆಸಿಕೊಳ್ಳುತ್ತಾರೆ: ಮಂಡ್ಯ ಜಿಲ್ಲೆಯಲ್ಲಿ ಮಾವ, ತಾತನ ಜೊತೆ ಮಾರ್ಕೆಟ್ ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದೆ. ಈಗಲೂ ನಾನು ಅಲ್ಲಿಗೆ ಹೋದರೆ ಜನರು ನಾನು ನಿಂಬೆ ಹಣ್ಣು ಮಾರಿದ್ದು ನೆನಪಿಸಿಕೊಳ್ಳುತ್ತಾರೆ. ಅಂತಹ ಬಡ ಕುಟುಂಬದಿಂದ ಬಂದಿದ್ದೇನೆ. ವಿಶೇಷ ಕಾರಣಕ್ಕಾಗಿ ಶಿಕಾರಿಪುರಕ್ಕೆ ಬಂದಿದ್ದೇನೆ. ಸಂಘಪರಿವಾರ ಹಾಗೂ ಜನರ ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ಹೇಳಿದರು.

'ಸಾಧನೆ ಮಾತನಾಡಬೇಕು. ಮಾತನಾಡುವುದೇ ಸಾಧನೆ ಆಗಬಾರದು’ ಎಂಬುವುದನ್ನೇ ನಂಬಿಕೊಂಡು ಬಂದಿದ್ದೇನೆ. ಅದರಂತೆ, ಕೆಲಸ ಮಾಡುತ್ತಿದ್ದೇನೆ. ಹೋರಾಟದ ಹಿನ್ನೆಲೆಯಿಂದಾಗಿ ಜನರು ಆಶೀರ್ವದಿಸಿದ್ದಾರೆ. ದೃಢ ನಂಬಿಕೆಯಿಂದ ಮುನ್ನಡೆದು ಈಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದೇವೆ. ಈ ಹಿಂದೆ ಬಳ್ಳಾರಿ ಜೈಲಿನಲ್ಲಿದ್ದಾಗ ಕೈದಿಗಳಿಗೆ ಸರಿಯಾಗಿ ಊಟ ಕೊಡುತ್ತಿಲ್ಲ ಎಂಬ ಕಾರಣಕ್ಕೆ ಹೋರಾಟ ಮಾಡಿದ್ದೆ ಎಂದು ತಮ್ಮ ಹಳೆಯ ನೆನಪುಗಳನ್ನು ಯಡಿಯೂರಪ್ಪ ಮೆಲುಕು ಹಾಕಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಮಾತನಾಡಿ, ಯಡಿಯೂರಪ್ಪ ಐವತ್ತು ವರ್ಷಗಳ ಸಾರ್ಥಕ ಬದುಕು ಸಾಗಿಸಿದ್ದಾರೆ. ಬದುಕಿನುದ್ದಕ್ಕೂ ಸಾಕಷ್ಟು ಕಷ್ಟಗಳನ್ನು ಅವರು ಕಂಡಿದ್ದಾರೆ. ಅವರ ಸರಳತೆ ಹಾಗೂ ಇನ್ನೊಬ್ಬರನ್ನು ದೂಷಣೆ ಮಾಡದೇ ಇರುವ ಗುಣದಿಂದಾಗಿಯೇ ಅವರು ಈ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಹೇಳಿದರು. 

ಯಡಿಯೂರಪ್ಪ ರೈತ ಪರ ನಾಯಕ
ರಾಷ್ಟ್ರೀಯ ವಿಚಾರಗಳ ಮಧ್ಯೆ ರೈತರ ವಿಚಾರಗಳಿಗೆ ಅಷ್ಟೊಂದು ಒತ್ತು ನೀಡದ ಕಾಲವದು. ಅಂತಹ ಘಟ್ಟದಲ್ಲಿ ಯಡಿಯೂರಪ್ಪ ಅವರು ಕೃಷಿಕರು, ಕಾರ್ಮಿಕರ ಬಗ್ಗೆ ಅಧಿಕ ಒತ್ತು ನೀಡಿದ್ದಲ್ಲದೇ ಅವರ ಪರ ವಿಧಾನಸಭೆಯಲ್ಲಿ ಧ್ವನಿ ಎತ್ತಿದರು. ಅವರಿಗೋಸ್ಕರ ಹೋರಾಟ, ಚಳವಳಿಗಳನ್ನು ಮಾಡಿದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ರೈತರಿಂದ ಸೂಕ್ತ ಸ್ಪಂದನೆ ಸಿಗದಿದ್ದ ಸಂದರ್ಭದಲ್ಲೂ ಹೋರಾಟಗಳನ್ನು ಮಾಡಿದ ಯಡಿಯೂರಪ್ಪ ಅವರು 1.05 ಲಕ್ಷ ರೂ. ದೇಣಿಗೆ ಸಂಗ್ರಹಿಸಿ 25,000 ಜನರನ್ನು ಸೇರಿಸಿದ್ದರು. ರಾಷ್ಟ್ರೀಯ ಪಕ್ಷಗಳೂ ರೈತರ ಬಗ್ಗೆ ಯೋಚಿಸುವಂತೆ ಮಾಡಿದ್ದು ಇದೇ ಯಡಿಯೂರಪ್ಪ ಅವರು. ಇತ್ತೀಚೆಗೆ, ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ತಂದಿದ್ದಾರೆ. ರೈತರು, ಗೋಹತ್ಯೆ ಮತ್ತು ರಾಷ್ಟ್ರೀಯ ವಿಚಾರಗಳ ಪರ ಹೋರಾಡಿ ಜನಮಾನಸದಲ್ಲಿ ವಿರಾಜಮಾನರಾಗಿದ್ದಾರೆ ಎಂದು ಅವರು ಹೇಳಿದರು.

ವಿಮಾನ ವಾಪಸ್ ಬರುವ ಭರವಸೆಯೂ ಇರಲಿಲ್ಲ
ಜಮ್ಮು ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವುದಕ್ಕಾಗಿ ದಕ್ಷಿಣ ಭಾರತದಿಂದ ಒಂದು ವಿಮಾನ ತೆರಳಿತ್ತು. ರಾಷ್ಟ್ರೀಯ ಮುಖಂಡರು ಕರ್ನಾಟಕದಿಂದ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಆಯ್ಕೆ ಮಾಡಿದ್ದರು. ಆಗ ವಿಮಾನ ವಾಪಸ್ ಬರುವ ಭರವಸೆಯೂ ಇರಲಿಲ್ಲ. ಅದರ ಮಧ್ಯೆಯೂ ಅವರು ಜೀವದ ಹಂಗು ತೊರೆದು ಅಲ್ಲಿಗೆ ಹೋಗಿದ್ದರು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

ಜಮ್ಮುಗೆ ಹೋಗುವಾಗ ಯಡಿಯೂರಪ್ಪ ಅವರು ಅತ್ಯಂತ ಗದ್ಗದಿತರಾಗಿದ್ದರು. ಅವರು ಈಶ್ವರಪ್ಪ ಅವರನ್ನು ಕರೆದು ‘ಚಿಕ್ಕ ಮಕ್ಕಳಿದ್ದಾರೆ. ನಾನು ವಾಪಸ್ ಬರುವ ಭರವಸೆ ಕಡಿಮೆ. ಏನಾದರೂ ಆದರೆ ಅವರನ್ನು ಸರಿಯಾಗಿ ನೋಡಿಕೊಳ್ಳುವ ಜವಾಬ್ದಾರಿ ನಿನ್ನದು’ ಎಂದು ಹೇಳಿದ್ದರು. ಬಿಎಸ್‌ವೈ ಅವರಿಗೆ ದೇವರು ಆರೋಗ್ಯ ನೀಡಲಿ ಎಂದರು.

ಯಡಿಯೂರಪ್ಪ ಅವರ ಸಾಧನೆಗಳನ್ನು ಕೇಳಿದರೆ ಮೈ ಪುಳಕಿತವಾಗುತ್ತದೆ. ಶಿಕಾರಿಪುರ ಪುರಸಭೆಯಿಂದ ಮುಖ್ಯಮಂತ್ರಿ ಸ್ಥಾನದವರೆಗೆ ಅವರು ನಡೆದುಕೊಂಡು ಬಂದ ದಾರಿ ದುರ್ಗಮದಿಂದ ಕೂಡಿದೆ. ಬಂದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದರ ಫಲವಾಗಿಯೇ ಇಂದು ಈ ಮಟ್ಟಕ್ಕೆ ಬೆಳೆದು, ಜನನಾಯಕರಾಗಿದ್ದಾರೆ ಎಂದರು.

ರೈತರು, ಕಾರ್ಮಿಕರು, ನೀರಾವರಿ ಸೇರಿದಂತೆ ಜನ ಸಾಮಾನ್ಯರ ಕಡೆಗೆ ಅವರು ಒತ್ತು ನೀಡಿದ್ದಾರೆ. ಬಿಎಸ್‌ವೈಗೆ ಸವಾಲುಗಳೆಂದರೆ ಇಷ್ಟ. ಎದೆಗುಂದದೇ ಅವುಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನೂ ದೇವರು ಅವರಿಗೆ ನೀಡಿದ್ದಾರೆ ಎಂದು ಹೇಳಿದರು.

ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಅಶೋಕ್ ನಾಯ್ಕ್, ಆಯನೂರು ಮಂಜುನಾಥ್, ಸುಕುಮಾರ ಶೆಟ್ರು, ಮುಖಂಡರಾದ ಜ್ಯೋತಿ ಪ್ರಕಾಶ್, ಬಿ.ವೈ.ವಿಜಯೇಂದ್ರ, ನಟರಾದ ಜಗ್ಗೇಶ್, ಕೋಮಲ್, ಶ್ರುತಿ, ತಾರಾ, ಕೆ.ಕಲ್ಯಾಣ್, ಡಿ.ಎಸ್.ಅರುಣ್, ಮೇಯರ್ ಸುವರ್ಣ ಶಂಕರ್ ಇತರರಿದ್ದರು.

ಕಾರ್ಯಕ್ರಮದಲ್ಲಿ ಸುನೀಲ್ ಪುರಾಣಿಕ್ ನಿರ್ದೇಶನದ ಬಿಎಸ್‌ವೈ ಸಾಧನೆಗಳ ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು. ನಂತರ ಗಾಯಕ ವಿಜಯ್ ಪ್ರಕಾಶ್ ಸಂಗೀತ ಸಂಯೋಜಿಸಿ, ಸಾಹಿತ್ಯ ರಚನೆ ಮಾಡಿದ ಹಾಡನ್ನು ಸಿಎಂ ಎದುರು ಪಸ್ತುತ ಪಡಿಸಲಾಯಿತು. ಕೆ.ಪ್ರಸನ್ನಕುಮಾರ್ ಬರೆದಿರುವ ‘ರಾಜಕಾರಣದ ತ್ರಿವಿಕ್ರಮ’ ಪುಸ್ತಕವನ್ನು ಡಿ.ಎಚ್.ಶಂಕರಮೂರ್ತಿ ಬಿಡುಗಡೆ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ದೇವರು ಆರೋಗ್ಯವನ್ನು ಅನುಗ್ರಹಿಸಲಿ. ನುಡಿದಂತೆ ನಡೆಯುವ ಇವರ ಸ್ವಭಾವದಿಂದಾಗಿಯೇ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಸಚಿವ ಸ್ಥಾನ ನೀಡಿದ್ದು, ನಿಷ್ಠೆಯಿಂದ ರಾಜ್ಯದ ಜನರ ಸೇವೆ ಮಾಡುವೆ.
-ಭೈರತಿ ಬಸವರಾಜ್, ನಗರಾಭಿವೃದ್ಧಿ ಸಚಿವ

ರಾಜ್ಯಕ್ಕೆ ದಕ್ಷ ಆಡಳಿತ
ಯಡಿಯೂರಪ್ಪ ಅವರು ರಾಜ್ಯದಲ್ಲಿ ತಾಯಿಯ ಪ್ರೀತಿ ಹಾಗೂ ತಂದೆಯ ಭದ್ರತೆಯನ್ನು ನೀಡಿದ್ದಾರೆ. ಹಿರಿಯ ಮಗನಾಗಿ ಅವರ ಕಷ್ಟಗಳನ್ನು ಹತ್ತಿರದಿಂದ ಕಂಡಿದ್ದೇನೆ. ಶಿವಮೊಗ್ಗ ಜಿಲ್ಲೆಯನ್ನು ಶೈಕ್ಷಣಿಕ, ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಶಕೆಯನ್ನೇ ಆರಂಭಿಸಿದ್ದಾರೆ. ಗಾರ್ಮೆಂಟ್ಸ್ ಕೈಗಾರಿಕೆ ಆರಂಭಿಸಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಅವರ ಸಂಕಲ್ಪದ ಫಲವಾಗಿ ಇಂದು ಶಿವಮೊಗ್ಗ ಮಾದರಿ ಜಿಲ್ಲೆಯಾಗಿ ರೂಪುಗೊಳ್ಳುತ್ತಿದೆ. ಬರುವ ದಿನಗಳಲ್ಲಿ ಅಭಿವೃದ್ಧಿಯಲ್ಲಿ ದೇಶದಲ್ಲೇ 2-3ನೇ ಸ್ಥಾನದಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. 

-ಬಿ.ವೈ.ರಾಘವೇಂದ್ರ, ಸಂಸದ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News