ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದೆ: ಸಚಿವ ಕೆಎಸ್.ಈಶ್ವರಪ್ಪ

Update: 2021-03-02 11:44 GMT

ಶಿವಮೊಗ್ಗ : ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗಳಿಸಲಿದ್ದು, ಗೆಲುವಿನ ನಾಗಲೋಟವನ್ನು ಕಾಯ್ದುಕೊಳ್ಳಲಿದೆ ಎಂದು ಸಚಿವ ಕೆಎಸ್.ಈಶ್ವರಪ್ಪ ಹೇಳಿದರು.

ನಗರದ ಶುಭ ಮಂಗಳ ಸಮುದಾಯ ಭವನದಲ್ಲಿ ಬಿಜೆಪಿ ವತಿಯಿಂದ ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಸ್ಪರ್ಧಿಸಿ ದವರಿಗೆ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಕ್ಷದ ಕಾರ್ಯಕರ್ತರ ಶ್ರಮದಿಂದ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 50ರಲ್ಲಿ 39 ಗ್ರಾಮ ಪಂಚಾಯತ್‌ಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅಧಿಕಾರ ಗದ್ದುಗೆಯೇರಿದ್ದಾರೆ ಎಂದರು.

ಮೈಸೂರು ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಕಾಂಗ್ರೆಸ್‌ನ ನಾಯಕರ ನಡುವೆ ಗುದ್ದಾಟ ಶುರುವಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ವೀಕ್ಷಕರನ್ನು ಕಳುಹಿಸುವ ಪರಿಸ್ಥಿತಿಯುಂಟಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದವರು ಜನರ ಋಣ ತೀರಿಸಬೇಕು. ಜನ ಪ್ರತಿನಿಧಿಗಳು ಸಿಟ್ಟಾಗಬಾರದು. ಸೋತವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮಗಳ ಅಭಿವೃದ್ಧಿ ಮಾಡಿ, ಮುಂದಿನ ಚುನಾವಣೆಯಲ್ಲೂ ಮತ್ತೆ ಆಯ್ಕೆಯಾಗಬೇಕು. ಇದಕ್ಕಾಗಿ ಹೆಚ್ಚಿನ ಅನುದಾನ ಪಡೆಯಲು ಸಂಸದರು, ಶಾಸಕರ ಬೆನ್ನು ಹತ್ತಿ ಎಂದು ಕಿವಿಮಾತು ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಯಡಿ ಗ್ರಾಮ ಪಂಚಾಯತ್‌ಗಳಿಗೆ ಅನುದಾನ ಬರುತ್ತದೆ. ಸ್ಥಳೀಯ ಗ್ರಾಮ ಪಂಚಾಯತ್ ನಿಂದಲೂ ತೆರಿಗೆ ಸಂಗ್ರಹವಾಗುತ್ತದೆ. ಇದರ ಬಳಕೆಯಾವ ರೀತಿ ಮಾಡಬೇಕು ಮತ್ತು ಅನುದಾನ ಯಾವ ರೀತಿ ತರಬೇಕು ಎಂಬ ವಿಷಯದಲ್ಲಿ ಗೆದ್ದ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಅಧ್ಯಕ್ಷ, ಉಪಾಧ್ಯಕ್ಷರಿಗೆ ರಾಜ್ಯದ ಒಟ್ಟ ೨೮೫ ಕೇಂದ್ರಗಳಲ್ಲಿ ತರಬೇತಿ ನೀಡಲಾಗುವುದು. ಒಂದು ಕೇಂದ್ರದಲ್ಲಿ ೪೦ ಜನರಿಗೆ ಅವಕಾಶವಿದೆ. ತರಬೇತಿಯನ್ನು ತಪ್ಪಿಸಿಕೊಳ್ಳಬೇಡಿ ಎಂದರು.

ಶೌಚಾಲಯ ನಿರ್ಮಾಣಕ್ಕೆ ಮೊದಲ ಆದತೆ ನೀಡಿ, ಶಾಲಾ ಮೈದಾನ, ಅಂಗನವಾಡಿ ರಿಪೇರಿ, ಕಾಂಪೌಂಡ್ ನಿರ್ಮಾಣಕ್ಕೆ ಸರ್ಕಾರ ಹಣ ನೀಡುತ್ತದೆ. ಅದನ್ನು ಬಳಸಿಕೊಳ್ಳಿ ಮೊದಲ ಆಧ್ಯತೆ ಶೌಚಾಲಯ ನಿರ್ಮಾಣಕ್ಕೆ ಕೊಡಿ. ಗ್ರಾಮದ ಯಾವೊಬ್ಬ ಹೆಣ್ಣು ಮಕ್ಕಳು ಶೌಚಾಲಯವನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ ಇರಬಾರದು. ಅದರ ಜೊತೆಗೆ ಪಕ್ಷ ಸಂಘಟನೆಗೆ ಮತ್ತು ಪಕ್ಷದ ಕೆಲಸಕ್ಕೆ ಆದ್ಯತೆ ನೀಡಿ ಎಂದರು.

ಶಾಸಕ ಕೆ.ಬಿ. ಅಶೋಕ್ ನಾಯ್ಕ ಮಾತನಾಡಿ, ಕಟ್ಟಡಕ್ಕೆ ತಳಪಾಯ ಗಟ್ಟಿಇರುವ ರೀತಿಯಲ್ಲಿಯೇ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮುಂದಿನ ಎಲ್ಲಾ ಚುನಾವಣೆಯಲ್ಲೂ ಗೆಲವು ಸಾದಿಸಬಹುದು. ಇತ್ತೀಚಿನ ಚುನಾವಣೆ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದ್ದು, ಸರ್ಕಾರದ ಎಲ್ಲಾ ಯೋಜನೆಗಳನ್ನು ನಾಗರೀಕರಿಗೆ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆಯನೂರು ಮಂಜುನಾಥ್, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಬಿಜೆಪಿ ಪ್ರಮುಖರಾದ ಭಾನು ಪ್ರಕಾಶ್, ಕೆ.ಜಿ. ಕುಮಾರಸ್ವಾಮಿ,  ಪವಿತ್ರಾ ರಾಮಯ್ಯ, ಸಿದ್ರಾಮಣ್ಣ, ಜ್ಯೋತಿ ಪ್ರಕಾಶ್, ಕೆ.ಇ. ಕಾಂತೇಶ್, ಗೀತಾ ಜಯಶೇಖರ್ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News