ಅಪ್ರಾಪ್ತೆಯ ಅತ್ಯಾಚಾರ: ಆರೋಪಿ ಬಂಧನ

Update: 2021-03-04 18:20 GMT

ಚಿಕ್ಕಮಗಳೂರು, ಮಾ.4: ಕೆಲಸ ನೀಡಿದ್ದ ಮಾಲಕನ ಮೇಲಿನ ದ್ವೇಷಕ್ಕೆ ಮಾಲಕನ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಪ್ರಕರಣದ ಸಂಬಂಧ ಆರೋಪಿ ಮಹೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ತಿಳಿಸಿದ್ದಾರೆ.

ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ ಮಹೇಶ್ ಏಳು ತಿಂಗಳ ಹಿಂದೆ ಬಾಲಕಿಯ ತಂದೆಯ ಬಳಿ ಹಿಟಾಚಿ ಡ್ರೈವರಾಗಿ ಕಾರ್ಯನಿರ್ವಹಿಸುತ್ತಿದ್ದ. ಕೆಲಸಕ್ಕೆ ಬರುವ ವೇಳೆ ಹಿಟಾಚಿ ಮಾಲಕರ ಮಗಳ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದನ್ನು ಗಮನಿಸಿದ ಪೋಷಕರು ಮಹೇಶ್‌ಗೆ ಎಚ್ಚರಿಕೆ ನೀಡಿ ಕೆಲಸದಿಂದ ತಗೆದು ಹಾಕಿದ್ದರು. ಆದರೆ, ಕೆಲಸ ಕಳೆದುಕೊಂಡ ಆರೋಪಿ ಮಹೇಶ್ ಕೋಪಗೊಂಡು ಫೆ.26ರಂದು ಬಾಲಕಿಯನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಆಕೆಯನ್ನು ಪುಸಲಾಯಿಸಿದ್ದಾನೆ. ನಂತರ ಬಾಲಕಿ ಓದುತ್ತಿದ್ದ ಶಾಲೆ ಬಳಿ ತೆರಳಿ ಆಕೆಯನ್ನು ಕರೆದುಕೊಂಡು ಕಳಸ ಸಮೀಪದ ಹೋಮ್‌ಸ್ಟೇಗೆ ಹೋಗಿದ್ದಾನೆ. ಅಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಕೃತ್ಯ ಎಸಗಿದ್ದಾನೆ ಎಂದು ತಿಳಿಸಿದರು.

ಕೃತ್ಯ ನಡೆದ ದಿನ ರಾತ್ರಿ ತಡವಾಗಿ ಬಂದ ಬಾಲಕಿ ಬೆಳಗ್ಗೆ ಲವಲವಿಕೆಯಿಂದ ಇಲ್ಲದಿರುವುದನ್ನು ಪೋಷಕರು ಗಮನಿಸಿದ್ದಾರೆ. ನಂತರ ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಪೋಷಕರು ನೀಡಿದ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿ ಮಹೇಶ್‌ನನ್ನು ಬಂಧಿಸಿದ್ದಾರೆಂದು ತಿಳಿಸಿದರು.

ಕುಡಿಯುವ ನೀರಿನಲ್ಲಿ ಮತ್ತೇರುವ ಪುಡಿಯನ್ನು ಬೆರಸಿ ಅತ್ಯಾಚಾರವೆಸಗಲಾಗಿದೆ ಎಂದು ಪೋಷಕರು ದೂರಿನಲ್ಲಿ ದಾಖಲಿಸಿದ್ದು, ವೈದ್ಯಕೀಯ ಪರೀಕ್ಷೆ ಬಳಿಕ ಈ ಬಗ್ಗೆ ಸತ್ಯಾಂಶ ಹೊರಬರಲಿದೆ ಎಂದು ಇದೇ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್.ಅಕ್ಷಯ್ ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News