ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ 5 ಕೋಟಿ ರೂ. ವ್ಯವಹಾರ: ಕುಮಾರಸ್ವಾಮಿ ಗಂಭೀರ ಆರೋಪ

Update: 2021-03-05 10:53 GMT

ಮೈಸೂರು, ಫೆ.5: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ದೊಡ್ಡ ದೊಡ್ಡವರೇ ಇದ್ದು, 5 ಕೋಟಿ ರೂ. ವ್ಯವಹಾರ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದ ಈ ಪ್ರಕರಣಕ್ಕೆ ಸಂಬಂಧಿಸಿತೆ ಡೀಲ್ ನಡೆದಿದೆ. ಈ ಪ್ರಕರಣದಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ. ಇದನ್ನು ತನಿಖೆ ಮಾಡಿಸುವ ಜವಾಬ್ದಾರಿ ಸರ್ಕಾರದ್ದು, ನಾನು ಪ್ರಕರಣ ನೋಡಿ ಕುಷಿ ಪಡುವವನಲ್ಲ ಎಂದು ಹೇಳಿದರು.

ರಾಜಕಾರಣಿಗಳ ಸಿಡಿ ಇದೆ ಎನ್ನುವವರು ಮೊದಲು ಅಂತವರನ್ನ ಒದ್ದು ಎರೋಪ್ಲೇನ್ ಹತ್ತಿಸಲಿ. ಅವರನ್ನ ಬಂಧಿಸಿ ಅವರ ಬಳಿ ಇರುವ ಸಿಡಿಗಳನ್ನ ಸರ್ಕಾರವೇ ಜನರ ಮುಂದೆ ಬಿಡುಗಡೆ ಮಾಡಲಿ. ಸಿಡಿ ಇದೆ ಎಂದು ಕೆಲವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದು ಬ್ಲ್ಯಾಕ್‌ಮೇಲ್‌ನ ಕಾರ್ಯತಂತ್ರ.

ಇದಕ್ಕೆ ಪುಷ್ಠಿ ಕೊಟ್ಟು ಬೆಳಸಬೇಡಿ. ಅದ್ಯಾರೋ ಒಬ್ಬ, ಮಾಜಿ ಸಿಎಂ ಅದೆಲ್ಲೋ ಹೋಗಿ ಬರುತ್ತಾರೆ. ಅದರ ಸಿಡಿ ನನ್ನ ಬಳಿ ಇದೆ ಅಂತಾನೆ. ರಾಜ್ಯದಲ್ಲಿ ದೇವೇಗೌಡ, ಎಸ್‌ಎಂ ಕೃಷ್ಣ ಹಾದಿಯಾಗಿ ತುಂಬಾ ಜನ ಇದ್ದಾರೆ. ಯಾರು ಆ ಮಾಜಿ ಸಿಎಂ ಎಂದು ಬಾಯಿ ಬಿಡಿಸಿ. ಸುಮ್ಮನೆ ನಾವು ಹೊರಗೆ ಓಡಾಡುವಾಗ ಮುಜುಗರ ತರಬೇಡಿ ಎಂದು ತಿಳಿಸಿದರು.

ಹಿಂದೆ ಅದ್ಯಾವುದೋ ಆ್ಯಂಕರ್ ವಿಚಾರದಲ್ಲೂ ನನ್ನ ಹೆಸರು ತಂದರು. ಆಗಲೂ ಸರಿಯಾಗಿ ಜಾಡಿಸಿದ್ದೇ‌ನೆ. ನನಗೆ ಈ ವಿಚಾರದಲ್ಲಿ ಯಾವುದೇ ಭಯವಿಲ್ಲ. ಈ ಪ್ರಕರಣದಲ್ಲಿ ನಾನು ತುಂಬಾ ಕ್ಲೀನ್ ಆಗಿದ್ದೇನೆ. ಆದರೆ ಇಂತಹ ಬ್ಲ್ಯಾಕ್ ಮೇಲ್‌ಗಳು ನಿಲ್ಲಬೇಕು. ಇಂತಹ ಪ್ರಕರಣಗಳು ಹೇಸಿಗೆ ಬರುವಂತ ಸ್ಥಿತಿ ನಿರ್ಮಾಣ ಮಾಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News