ಅಡಿಕೆ ಬೆಳೆ ನಾಶ: ಬಜೆಟ್‍ನಲ್ಲಿ 25 ಕೋಟಿ ರೂ. ವಿಶೇಷ ಪ್ಯಾಕೇಜ್‍ಗೆ ಸಿಎಂಗೆ ಮನವಿ

Update: 2021-03-05 16:27 GMT

ಮಡಿಕೇರಿ, ಮಾ.5: ಹಳದಿ ರೋಗದಿಂದ ಅಡಿಕೆ ತೋಟ ನಾಶ ಹೊಂದಿದವರಿಗೆ ಒಂದು ಬಾರಿ ಪರಿಹಾರವಾಗಿ 25 ಕೋಟಿ ರೂ. ಪ್ಯಾಕೇಜ್‍ನ್ನು ಬಜೆಟ್‍ನಲ್ಲಿ ಘೋಷಿಸಲು ಹಾಗೂ ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವಂತೆ ಕರಾವಳಿ ಮತ್ತು ಮಲೆನಾಡು ಭಾಗದ ಸಚಿವರು ಮತ್ತು ಶಾಸಕರು ತೋಟಗಾರಿಕೆ ಸಚಿವರಾದ ಆರ್.ಶಂಕರ್ ಅವರೊಂದಿಗೆ ಸಭೆ ನಡೆಸಿ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.  

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಜೆಟ್‍ನಲ್ಲಿ ಪ್ಯಾಕೇಜ್ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ. ಹಳದಿ ರೋಗ ನಿವಾರಣೆಗೆ ಉನ್ನತ ಮಟ್ಟದ ಸಂಶೋಧನೆಗೆ ಆದೇಶ ನೀಡುವುದಾಗಿಯೂ ಮುಖ್ಯಮಂತ್ರಿ ಅವರು ಭರವಸೆ ನೀಡಿದ್ದಾರೆ.   

ತೋಟಗಾರಿಕಾ ಸಚಿವರಾದ ಆರ್.ಶಂಕರ್ ಅವರ ಜೊತೆ ಸಚಿವರಾದ ಎಸ್.ಅಂಗಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಶಾಸಕರ ನಿಯೋಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿತ್ತು. ಅಡಿಕೆಗೆ ಪ್ರಸ್ತುತ ಬೆಲೆ ಬಂದಿದೆ. ಆದರೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಹಳದಿ ರೋಗದಿಂದ ಅಡಿಕೆ ತೋಟಗಳು ಸರ್ವ ನಾಶವಾಗಿವೆ. ಅಡಿಕೆ ಬೆಳೆಗಾರರನ್ನು ರಕ್ಷಣೆ ಮಾಡುವ ಅವಶ್ಯಕತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಅಡಿಕೆಗೆ ಹಳದಿ ರೋಗದಿಂದ ಭಾದಿತರಾದ ರೈತರಿಗೆ ಸಾಲ ಮನ್ನಾ ಮಾಡಬೇಕು. ಪರ್ಯಾಯ ಕೃಷಿ ಮಾಡುವವರಿಗೆ ದೀರ್ಘಾವಧಿ ಸಾಲ ಮಂಜೂರು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಶಾಸಕರಾದ ಕೆ.ಜಿ.ಬೋಪಯ್ಯ, ಸಂಜೀವ ಮಠಂದೂರು, ಹರೀಶ್ ಪೂಂಜಾ, ರಾಜೇಶ್ ನಾಯ್ಕ, ಅರಗ ಜ್ಞಾನೇಂದ್ರ ಇತರರು ನಿಯೋಗದಲ್ಲಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News