ರೈತರ ಆದಾಯ ದ್ವಿಗುಣ ಆಗುತ್ತೆ ಎಂದು ಬುರುಡೆ ಬಿಡುತ್ತಿದ್ದಾರೆ: ಪ್ರಧಾನಿ ವಿರುದ್ಧ ಯೋಗೇಂದ್ರ ಯಾದವ್ ವಾಗ್ದಾಳಿ

Update: 2021-03-05 16:43 GMT

ಕಲಬುರಗಿ: ದೇಶದಲ್ಲಿ ರೈತರ ಹೋರಾಟ ನಡೆಯುತ್ತಿದೆ. ದೇಶದ ಪ್ರಧಾನ ಮಂತ್ರಿಗಳು ರೈತರಿಗೆ ಮೂರು ಕೃಷಿ ಕಾನೂನುಗಳು ಉಡುಗೊರೆಯಾಗಿ ನೀಡುತ್ತಿದ್ದೇನೆ, ರೈತರೆಲ್ಲರ ಆದಾಯ ದ್ವಿಗುಣ ಆಗುತ್ತೆ ಅಂತ ಬುರುಡೆ ಬಿಡುತ್ತಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ನಾಯಕ ಹಾಗೂ ಖ್ಯಾತ ಹೋರಾಟಗಾರ ಯೋಗೇಂದ್ರ ಯಾದವ್ ಹೇಳಿದರು.

ಅವರು ನಗರದ ಗಂಜ್ ಪ್ರದೇಶದ ಎಪಿಎಂಸಿ ಆವರಣದಲ್ಲಿ ಶುಕ್ರವಾರ ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ದಲಿತ, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಮಹಿಳಾ ಸಂಘಟನೆಯ ಸಮನ್ವ ಸಮಿತಿಯ ವತಿಯಿಂದ ಆಯೋಜಿಸಿದ ‘ಬೆಂಬಲ ಬೆಲೆ ಕೊಡಿ ಆಂದೋಲನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತರಿಗೆ ಬೆಂಬಲ ಬೆಲೆ ಕೊಡಿ ಎಂಬ ಹಕ್ಕಿನ ಹೋರಾಟ ಪ್ರಾರಂಭವಾಗಿದೆ. ಈ ಹೋರಾಟ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಹಾಗೂ ಕೃಷಿ ಭೂಮಿ ಉಳಿವಿಗಾಗಿ ಅವಶ್ಯಕವಾಗಿದೆ. ಪ್ರೊಫೆಸರ್ ನಂಜುಂಡಸ್ವಾಮಿ ಕಟ್ಟಿದ ರೈತ ಸಂಘಟನೆಯು ಇದೇ ಕರ್ನಾಟಕದ ಕಲಬುರಗಿಯಿಂದಲೇ ಬೆಂಬಲ ಬೆಲೆ ಕೊಡಿಸಿ ಅಭಿಯಾನ ಆರಂಭಿಸಿದೆ ಎಂದು ತಿಳಿಸಿದರು.

ಮೂರು ಕಪ್ಪು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ನಾಲ್ಕು ದಿಕ್ಕುಗಳಲ್ಲಿ ರೈತರು ಕುಳಿತಿದ್ದಾರೆ. ನೂರು ದಿನಗಳು ಕಳೆದಿವೆ. ಆದರೂ ಸರ್ಕಾರ ರೈತರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದರು.

ಕಡಲೆಗೆ 5,100 ರೂ. ಬೆಂಬಲ ಬೆಲೆ ಸಿಗಬೇಕು. ಆದರೆ, ಇಲ್ಲಿ ಈಗ 4,800 ರೂ.ಗೆ ಕಡಲೆ ಮಾರಾಟವಾಗುತ್ತದೆ. ಮೋದಿ ಅವರೇ ಬೆಂಬಲ ಬೆಲೆ ಕೊಡಿಸಿ. ರೈತರು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಆಗಿದ್ದಾಗ ಡಾ.ಮನಮೋಹನ್ ಸಿಂಗ್ ಗೆ ಬೆಂಬಲ ಬೆಲೆ ಕಾನೂನು ಮಾಡಿ ಎಂದು ಪತ್ರ ಬರೆದಿದ್ದರು. ಆ ಮಾತನ್ನೇ ಇಂದು ನಾವು ಕೇಳುತ್ತಿದ್ದೇವೆ, ಕಾನೂನು ಮಾಡಿ ಎಂದು ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಬಿಆರ್ ಪಾಟೀಲ್ ಪ್ರಾಸ್ತಾವಿಕ ಮಾತನಾಡಿದರು. ಶೌಕತ್ ಅಲಿ ಆಲೂರ್ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಬಿಹಾರದ ದೀಪಕ್ ಲಂಬಾ, ಪಂಜಾಬ್ ನ ಸದ್ದಾಂ ಸಿಂಗ್, ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಎಚ್ ಕೆಸಿಸಿಐ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ್, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಜನವಾದಿ ಮಹಿಳಾ ಸಂಘಟನೆಯ ಕೆ ನೀಲಾ, ಚಾಮರಾಜ ಪಾಟೀಲ್, ಶರಣಬಸಪ್ಪ ಮಮಶೆಟ್ಟಿ, ಮೌಲಾ ಮುಲ್ಲಾ, ಮಹಿಳೆಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News