ಚನ್ನರಾಯಪಟ್ಟಣ: ರಸ್ತೆ ಅಪಘಾತಕ್ಕೆ ಮದುಮಗ ಬಲಿ, ಮೂವರಿಗೆ ಗಂಭೀರ ಗಾಯ

Update: 2021-03-06 08:17 GMT
ಅಭಿಷೇಕ್ ಗೌಡ

ಹುಣಸೂರು, ಮಾ.6: ಮದುವೆಗೆ ಬಟ್ಟೆ ಖರೀದಿಸಿ ಹಿಂದಿರುಗುತ್ತಿದ್ದ ವೇಳೆ ಕಾರಿಗೆ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಮದುಮಗ ಮೃತಪಟ್ಟ ಘಟನೆ ಶನಿವಾರ ಮುಂಜಾನೆ ಚನ್ನರಾಯಪ್ಪಣದ ಬಳಿ ಸಂಭವಿಸಿದೆ. ಘಟನೆಯಲ್ಲಿ ಮದುಮಗನ ತಾಯಿ ಸಹಿತ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಹುಣಸೂರಿನ ಹಿರಿಕ್ಯಾತನಹಳ್ಳಿ ನಿವಾಸಿ ಜಗದೀಶ್ ಎಂಬವರ ಪುತ್ರ ಅಭಿಷೇಕ್ ಗೌಡ(26) ಮೃತಪಟ್ಟ ಮದುಮಗ. ಅಭಿಷೇಕ್ ತಾಯಿ ಮಂಜುಳಾ, ಸ್ನೇಹಿತ ನಟರಾಜ್ ಹಾಗೂ ಯುವತಿಯೊಬ್ಬಳು ಗಂಭೀರ ಗಾಯಗೊಂಡಿದ್ದು, ಅವರನ್ನು ಚನ್ನರಾಯಪಟ್ಟಣ ಮತ್ತು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಭಿಷೇಕ್ ಗೌಡರ ವಿವಾಹ ನಿಗದಿಯಾಗಿದ್ದು, ಈ ಸಂಬಂಧ ಇವರು ನಾಲ್ವರು ಬಟ್ಟೆ ಖರೀದಿಗೆಂದು ದಾವಣಗೆರೆಗೆ ತೆರಳಿದ್ದರು. ಬಟ್ಟೆ ಖರೀದಿಸಿ ಜಗದೀಶ್ ಬಟ್ಟೆಯೊಂದಿಗೆ ಟಿ.ಟಿ. ವಾಹನದಲ್ಲಿ ಹುಣಸೂರಿನತ್ತ ಬರುತ್ತಿದ್ದರೆ, ಅಭಿಷೇಕ್ ಗೌಡ, ಮಂಜುಳಾ  ನಟರಾಜ್ ಹಾಗೂ ಯುವತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರೆನ್ನಲಾಗಿದೆ. ಇವರ ಕಾರು ಇಂದು ಬೆಳಗಿನ ಜಾವ 3:30ರ ಸುಮಾರಿಗೆ ಚನ್ನರಾಯಪ್ಪಣದ ಬಳಿ ತಲುಪಿದಾಗ ಈ ಅಪಘಾತ ಸಂಭವಿಸಿದೆ.

ಭಾರೀ ಮಂಜು ಬೀಳುತ್ತಿದ್ದುದರಿಂದ ಎದುರಿನಿಂದ ಬರುತ್ತಿದ್ದ ತುಫಾನ್ ಜೀಪ್ ಢಿಕ್ಕಿ ಅಭಿಷೇಕ್ ಅವರಿದ್ದ ಕಾರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡಿದ್ದ ಅಭಿಷೇಕ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ, ನಟರಾಜ್ ಹಾಗೂ ಮಂಜುಳಾರಿಗೆ ತೀವ್ರ ತರಹದ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಐದು ವರ್ಷಗಳ ಹಿಂದೆ ಜಗದೀಶರ ಮೊದಲ ಪುತ್ರ ಪ್ರವಾಸಕ್ಕೆ ಹೋಗಿದ್ದ ವೇಳೆ ನದಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಇದೀಗ ಹಸೆಮಣೆ ಏರಬೇಕಿದ್ದ ಎರಡನೇ ಪುತ್ರನನ್ನು ಕಳೆದುಕೊಂಡ ಆ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

ಈ ಬಗ್ಗೆ ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News