×
Ad

ಶಾಸಕ ಗೂಳಿಹಟ್ಟಿ ಶೇಖರ್‌ ತಾಯಿ ಕ್ರೈಸ್ತ ಧರ್ಮದ ಅನುಯಾಯಿ, ಬಲವಂತದ ಮತಾಂತರವಲ್ಲ: ಪೊಲೀಸ್ ವರದಿ

Update: 2021-03-07 13:14 IST
ಶಾಸಕ ಗೂಳಿಹಟ್ಟಿ ಶೇಖರ್

ಬೆಂಗಳೂರು : ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿ ಸೇರಿ ಹೊಸದುರ್ಗ ತಾಲ್ಲೂಕಿನ ಹಲವರು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದಾರೆ ಎಂಬ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದು, ಬಲವಂತದ ಮತಾಂತರ ನಡೆದಿರುವುದಕ್ಕೆ ದಾಖಲೆಗಳು ಲಭ್ಯವಾಗಿಲ್ಲ. ಕೆಲವರು ಸ್ವಯಂಪ್ರೇರಿತವಾಗಿ ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂದು ಪೊಲೀಸರ ತನಿಖಾ ವರದಿಯಿಂದ ತಿಳಿದುಬಂದಿದೆ.

‘ಮತಾಂತರಕ್ಕೆ ಸಂಬಂಧಿಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ ತನಿಖೆ ನಡೆಸಲಾಗಿತ್ತು. ಶಾಸಕ ಗೂಳಿಹಟ್ಟಿ ಶೇಖರ್ ತಾಯಿ ಪುಟ್ಟಮ್ಮ ಅವರ ಹೇಳಿಕೆಯನ್ನು ಪಡೆಯಲಾಗಿದ್ದು, ಹಲವು ವರ್ಷಗಳಿಂದ ಸ್ವಯಂಪ್ರೇರಿತವಾಗಿ ಚರ್ಚ್‌ಗೆ ಹೋಗುತ್ತಿರುವುದಾಗಿ ಅವರು ಸ್ಪಷ್ಟನೆ ನೀಡಿದ್ದಾರೆ. ಬಲವಂತದ ಮತಾಂತರ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ ಮಾಹಿತಿ ನೀಡಿದ್ದಾರೆ.

ಸಿಪಿಐ ನೇತೃತ್ವದ ತನಿಖಾ ತಂಡ ಮತಾಂತರಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದೆ. ಹೊಸದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿರುವ ಎಲ್ಲ ಚರ್ಚ್‌ಗಳಿಗೆ ಭೇಟಿ ನೀಡಿ ಧಾರ್ಮಿಕ ಮುಖಂಡರ ಹೇಳಿಕೆ ಪಡೆದಿದೆ. ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿರುವವರ ಹೇಳಿಕೆ ಪಡೆದಿದೆ. ಜಿಲ್ಲೆಯಲ್ಲಿ ಬಲವಂತದ ಮತಾಂತರ ನಡೆದಿಲ್ಲ ಎಂಬ ವರದಿಯನ್ನು ಸರ್ಕಾರಕ್ಕೆ ಈ ತಂಡ ಸಲ್ಲಿಸಿದೆ.

ಹಿರಿಯ ಮಗನನ್ನು ಯಾವ ದೇವರು ಕಾಪಾಡಲಿಲ್ಲ. ಮಗ ನಿಧನನಾದ ಬಳಿಕ ದೇವರ ಮೇಲಿನ ಭರವಸೆ ಹೊರಟು ಹೋಗಿದೆ. ಅಂದಿನಿಂದ ದೇವರ ಪೂಜೆ ಮಾಡುವುದನ್ನು ಕೈಬಿಟ್ಟಿದ್ದೇನೆ. ಚರ್ಚ್‌ಗೆ ಬರಲಾರಂಭಿಸಿದ ಬಳಿಕ ನೆಮ್ಮದಿ ಸಿಕ್ಕಿದೆ ಎಂದು ಶಾಸಕ ಗೂಳಿಹಟ್ಟಿ ಶೇಖರ್‌ ಅವರ ತಾಯಿ ಪುಟ್ಟಮ್ಮ ಹೇಳಿಕೆ ನೀಡಿದ್ದಾರೆ.

ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಅವರ ತಾಯಿ ಪುಟ್ಟಮ್ಮ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿಲ್ಲ ಎಂದು ಪಟ್ಟಣದ ಹಿರಿಯೂರು ರಸ್ತೆ ಚರ್ಚ್‌ ಫಾದರ್‌ ಜಾರ್ಜ್‌ ಸ್ಟೀವನ್‌ ಡಿಸೋಜ ತಿಳಿಸಿದ್ದಾರೆ.

‘ಚರ್ಚ್‌ಗೆ ಬಂದು ಪ್ರಾರ್ಥನೆ ಸಲ್ಲಿಸಿದ ಮಾತ್ರಕ್ಕೆ ಮತಾಂತರ ಆಗುವುದಿಲ್ಲ. ಅವರು ಏಳು ವರ್ಷಗಳಿಂದ ಚರ್ಚ್‌ಗೆ ಬರುತ್ತಿದ್ದು, ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ. ಮಾನಸಿಕ ನೆಮ್ಮದಿಗೆ ಜನರು ದೇವಸ್ಥಾನ, ಮಸೀದಿಗೆ ಹೋಗುವಂತೆ ಅವರು ಚರ್ಚ್‌ಗೆ ಬರುತ್ತಿದ್ದಾರೆ’ ಎಂದಿದ್ದಾರೆ.

ನನ್ನ ತಾಯಿ ಕ್ರಿಶ್ಚಿಯನ್‌ ಧರ್ಮಕ್ಕೆ ಅನಧಿಕೃತವಾಗಿ ಪರಿವರ್ತನೆ ಹೊಂದಿದ್ದಾರೆ. ಬಡತನ, ಮಾನಸಿಕ ತೊಳಲಾಟದಲ್ಲಿ ಇರುವವರನ್ನು ಮೋಡಿ ಮಾಡಿ ಚರ್ಚ್‌ಗೆ ಕರೆದೊಯ್ಯುವ ಕ್ರಿಶ್ಚಿಯನ್‌ ಮಿಷನರಿಗಳ ವ್ಯವಸ್ಥಿತ ಜಾಲ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ’ ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್‌ ಆರೋಪಿಸಿದ್ದಾರೆ.

‘ತಂದೆ ಮತ್ತು ಸಹೋದರ ಒಂದೇ ವರ್ಷದಲ್ಲಿ ನಿಧನರಾದರು. ಇದರಿಂದ ತಾಯಿ ಖಿನ್ನತೆಗೆ ಒಳಗಾಗಿದ್ದರು. ಊರಲ್ಲಿದ್ದ ತಾಯಿಯನ್ನು ಪುಸಲಾಯಿಸಿ ಚರ್ಚ್‌ಗೆ ಕರೆದೊಯ್ದು ಪರಿವರ್ತನೆ ಮಾಡಲಾಗಿದೆ. ಇದನ್ನು ಅಧಿಕೃತವಾಗಿ ಸಾಬೀತುಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News