ಬೆಂಬಲ ಬೆಲೆಗೆ ಒತ್ತಾಯ: ಯೋಗೇಂದ್ರ ಯಾದವ್ ನೇತೃತ್ವದಲ್ಲಿ ಮಾ.22ರಂದು ವಿಧಾನಸೌಧಕ್ಕೆ ಮುತ್ತಿಗೆ

Update: 2021-03-07 14:42 GMT

ಬೆಂಗಳೂರು, ಮಾ.7: ರಾಷ್ಟ್ರವ್ಯಾಪಿ ನಡೆಯುತ್ತಿರುವ ಬೆಂಬಲ ಬೆಲೆ ಹಕ್ಕೊತ್ತಾಯ (ಎಂಎಸ್‍ಪಿ ದಿಲಾವ್) ಹೋರಾಟದ ಭಾಗವಾಗಿ ಮಾ.22ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಅಖಿಲ ಭಾರತ ರೈತ ಸಂಘಟನೆಗಳ ಮೈತ್ರಿಕೂಟದ ಸಂಚಾಲನಾ ಸಮಿತಿ ಸದಸ್ಯ ಯೋಗೇಂದ್ರ ಯಾದವ್ ಘೋಷಿಸಿದರು.

ರವಿವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಸಂಯುಕ್ತ ಹೋರಾಟ ಮೈತ್ರಿಕೂಟದ ಸದಸ್ಯರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿಯಿಂದ ಆರಂಭವಾಗಿರುವ ಬೆಂಬಲ ಬೆಲೆ ಹಕ್ಕೊತ್ತಾಯ (ಎಂಎಸ್ ಪಿ ದಿಲಾವ್) ದೇಶದಾದ್ಯಂತ ಮುಂದುವರಿಯಲಿದೆ. ಹೋರಾಟದ ಭಾಗವಾಗಿ ಕರ್ನಾಟಕ ಸಂಯುಕ್ತ ಹೋರಾಟ ಮೈತ್ರಿಕೂಟದ ನೇತೃತ್ವದಲ್ಲಿ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹೋರಾಟ ನಡೆಯಲಿದೆ ಎಂದರು.

ಕೇಂದ್ರ ಸರಕಾರ ಜನಪರವಾಗಿಲ್ಲ, ರೈತಪರವಾಗಿಲ್ಲ, ದುಡಿವ ಜನರ ಪರವಾಗಿಲ್ಲ ಎಂಬುದು ಗೊತ್ತಾಗಿದೆ. ಅಲ್ಲದೆ, ಬೆಂಬಲ ಬೆಲೆಯ ವಿಚಾರದಲ್ಲಿ ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ. ಕೃಷಿ ಸಂಬಂಧಿ ಹೊಸ ಕಾಯ್ದೆಗಳ ಜಾರಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಮತ್ತು ಬೆಂಬಲ ಬೆಲೆ ವ್ಯವಸ್ಥೆಗಳು ನಾಶವಾಗಲಿವೆ ಎಂದ ಅವರು, ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲೇ ಇದಕ್ಕೆ ಸಾಕ್ಷ್ಯ ದೊರೆತಿದೆ ಎಂದು ವಾಗ್ದಾಳಿ ನಡೆಸಿದರು.

ಸರಿಯಾದ ರೀತಿಯಲ್ಲಿ ಬೆಂಬಲ ಬೆಲೆ ದೊರಕದ ಕಾರಣದಿಂದ 2019-20ರಲ್ಲಿ ಕರ್ನಾಟಕದ ರೈತರಿಗೆ 13 ಬೆಳೆಗಳಲ್ಲಿ  3319 ಕೋಟಿ ರೂ. ನಷ್ಟವಾಗಿದೆ. ಸ್ವಾಮಿನಾಥನ್ ವರದಿಯ ಶಿಫಾರಸಿನಂತೆ ಲೆಕ್ಕ ಹಾಕಿದರೆ ನಷ್ಟದ ಪ್ರಮಾಣ 20,339 ಕೋಟಿ ಆಗುತ್ತದೆ. ಬೆಂಬಲ ಬೆಲೆ ನೀಡಲು ಲಕ್ಷಾಂತರ ಕೋಟಿ ರೂಪಾಯಿ ಬೇಕಾಗಿಲ್ಲ. ಅಧಿಕಾರದಲ್ಲಿ ಇರುವವರಿಗೆ ಬದ್ಧತೆ ಮತ್ತು ಇಚ್ಛಾಶಕ್ತಿ ಇರಬೇಕು ಎಂದು ನುಡಿದರು.

ಇನ್ನು, ಕರ್ನಾಟಕದ ಕಲಬುರ್ಗಿ, ಬಳ್ಳಾರಿ ಜಿಲ್ಲೆಗಳ ಎಪಿಎಂಸಿಗಳಿಗೆ ಭೇಟಿ ನೀಡಿ ಅಧ್ಯಯನ ಮಾಡಲಾಗಿದೆ. ರೈತರಿಗೆ ಬೆಂಬಲ ಬೆಲೆಗಿಂತ ಕಡಿಮೆ ದರ ದೊರೆಯುತ್ತಿರುವುದು ಕಂಡುಬಂದಿದೆ. ಎಪಿಎಂಸಿಗಳಿಗೆ ಕೃಷಿ ಉತ್ಪನ್ನಗಳ ಆವಕದ ಪ್ರಮಾಣವೂ ಕುಸಿದಿದೆ. ಮತ್ತೊಂದೆಡೆ, ಡಾ.ಎಂ.ಎಸ್.ಸ್ವಾಮಿನಾಥನ್ ವರದಿಯ ಆಧಾರದಲ್ಲಿ ಬೆಂಬಲ ಬೆಲೆಯನ್ನು ಕಾನೂನಿನ ಮೂಲಕ ಖಾತರಿಪಡಿಸಬೇಕು ಎಂಬುದು ರೈತರ ಬೇಡಿಕೆ. ಅದನ್ನು ಪಡೆಯುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಯಾದವ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಂಜಾಬ್ ಜಾಂಬೂರಿ ಕಿಸಾನ್ ಸಭಾ ಅಧ್ಯಕ್ಷ ಡಾ.ಸತ್ನಾಂ ಸಿಂಗ್ ಅಜ್ಞಾಲ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಜನಾಂದೋಲನ ಮಹಾಮೈತ್ರಿಯ ಅಧ್ಯಕ್ಷ ಎಸ್.ಆರ್.ಹಿರೇಮಠ ಸೇರಿ ಪ್ರಮುಖರಿದ್ದರು.

ಭೂಮಿಯೊಳಗೆ ಹೂತುಹಾಕಲು ಯತ್ನಿಸಿತು: ‘ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರವು ರೈತ ಹೋರಾಟವನ್ನು ಹತ್ತಿಕ್ಕಿ, ಭೂಮಿಯೊಳಗೆ ಹೂತುಹಾಕಲು ಯತ್ನಿಸಿತು. ಅದಕ್ಕಾಗಿಯೇ ಸುಳ್ಳುಗಳನ್ನು ಹೊಸೆಯಿತು. ನಾನಾ ತರಹದ ಅಪಪ್ರಚಾರ ಮಾಡಿತು. ಸರಕಾರ ಹತ್ತಿಕ್ಕಲು ಯತ್ನಿಸಿದಂತೆಲ್ಲ ಹೋರಾಟ ವಿಸ್ತಾರವಾಗಿ ಬೆಳೆಯುತ್ತಿದೆ'

-ಯೋಗೇಂದ್ರ ಯಾದವ್, ರೈತ ಸಂಘಟನೆಗಳ ಮೈತ್ರಿಕೂಟದ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News