ಕೊಡಗು: ಹುಲಿ ದಾಳಿಗೆ ಬಾಲಕ ಮೃತ್ಯು, ಮತ್ತೋರ್ವ ವ್ಯಕ್ತಿಗೆ ಗಂಭೀರ ಗಾಯ
ಮಡಿಕೇರಿ, ಮಾ.8: ದಕ್ಷಿಣ ಕೊಡಗಿನಲ್ಲಿ ಹುಲಿಯ ಅಟ್ಟಹಾಸ ಮುಂದುವರೆದಿದ್ದು, ಇಂದು ವ್ಯಾಘ್ರ ದಾಳಿಗೆ ಬಾಲಕನೋರ್ವ ದಾರುಣವಾಗಿ ಮೃತಪಟ್ಟಿದ್ದಾನೆ.
ಪೊನ್ನಂಪೇಟೆ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ತೋಟದ ಕೆಲಸ ಮಾಡುತ್ತಿದ್ದ ನಂಜನಗೂಡು ಮೂಲದ ಕೂಲಿ ಕಾರ್ಮಿಕರ ಮೇಲೆ ಹುಲಿ ದಾಳಿ ಮಾಡಿದೆ. ಘಟನೆಯಿಂದ ತೋಟದಲ್ಲಿದ್ದ ಬಾಲಕ ರಂಗಸ್ವಾಮಿ(8) ಸ್ಥಳದಲ್ಲೇ ಮೃತಪಟ್ಟಿದ್ದು, ಈತನ ತಾತ ಕೆಂಚಶೆಟ್ಟಿ(52) ಗಂಭೀರವಾಗಿ ಗಾಯಗೊಂಡಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೃತ ಬಾಲಕ ಮಹದೇವ ಸ್ವಾಮಿ ಎಂಬವರ ಪುತ್ರ.
ಕಳೆದ 16 ದಿನಗಳಲ್ಲಿ ಮೂರು ಮಾನವ ಜೀವಹಾನಿ ಮತ್ತು 12 ಹಸುಗಳು ಹುಲಿ ದಾಳಿಗೆ ಬಲಿಯಾಗಿವೆ. ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದ್ದು, ಗ್ರಾಮಸ್ಥರು ಹಾಗೂ ವಿವಿಧ ಸಂಘ, ಸಂಸ್ಥೆಗಳು ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಶ್ರೀಮಂಗಲದ ಟಿ.ಶೆಟ್ಟಿಗೇರಿ ವ್ಯಾಪ್ತಿಯಲ್ಲಿ ಇದೇ ಫೆ.21 ರಂದು ವಿದ್ಯಾರ್ಥಿ ಎರವರ ಅಯ್ಯಪ್ಪ (16) ಹಾಗೂ 22 ರಂದು ಕಾರ್ಮಿಕ ಮಹಿಳೆ ಚಿಣ್ಣಿ (60) ಎಂಬುವವರ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು.