ಪಾಕಿಸ್ತಾನದಲ್ಲಿ ಪತ್ನಿ, ಮಕ್ಕಳ ಕತ್ತು ಸೀಳಿ ಕೊಲೆಗೈದು, ಆತ್ಮಹತ್ಯೆಗೈದ ವ್ಯಕ್ತಿ

Update: 2021-03-10 10:09 GMT

ಹೊಸದಿಲ್ಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹಿಂದು ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೈದ ಘಟನೆಯನ್ನು ಝೀ ನ್ಯೂಸ್‌ ಸೇರಿದಂತೆ ಭಾರತದ ಹಲವು ಮಾಧ್ಯಮಗಳು ಉತ್ಪ್ರೇಕ್ಷಿಸಿ ವರದಿ ಮಾಡಿವೆಯಲ್ಲದೆ ಪಾಕಿಸ್ತಾನದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆಂಬಂತಹ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ ಎಂದು altnews.in ವರದಿ ಮಾಡಿದೆ.

ರಾಮ್ ಚಂದ್ ಎಂಬ ವೃತ್ತಿಯಲ್ಲಿ ಟೈಲರ್ ಆಗಿರುವ ವ್ಯಕ್ತಿ ತನ್ನ ಪತ್ನಿ ಹಾಗೂ ಮಕ್ಕಳನ್ನು ಮಾರ್ಚ್ 5ರಂದು ಕತ್ತು ಸೀಳಿ ಹತ್ಯೆಗೈದಿದ್ದನಲ್ಲದೆ ನಂತರ ತಾನೂ  ಚೂರಿಯಿಂದ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದ. ನಂತರ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆತನ ಪತ್ನಿಯ ಸೋದರ  ನೀಡಿದ ದೂರಿನಲ್ಲಿ ರಾಮ್ ಚಂದ್ ಯಾವತ್ತೂ  ತನ್ನ ಪತ್ನಿಯನ್ನು ಸಂಶಯದಿಂದ ನೋಡುತ್ತಿದ್ದ ಹಾಗೂ ಆಕೆಗೆ ಅಕ್ರಮ ಸಂಬಂಧವಿರಬಹುದೆಂದು ಶಂಕಿಸಿದ್ದ, ಇದೇ ಕಾರಣದಿಂದ ಆಕೆಯನ್ನು ಹತ್ಯೆಗೈದಿದ್ದಾನೆ ಎಂದು ಆರೋಪಿಸಿದ್ದಾನೆ.

ಆದರೆ ಭಾರತದ ಹಲವು ಮಾಧ್ಯಮಗಳು ಈ ಘಟನೆಗೆ ಬೇರೆಯೇ ಬಣ್ಣ ನೀಡಿದ್ದವಲ್ಲದೆ ಟೈಮ್ಸ್ ನೌ ವಾಹಿನಿಯಂತೂ ಪಾಕಿಸ್ತಾನದಲ್ಲಿ ಹಿಂದುಗಳ ಮೇಲೆ ನಡೆಯುವ ದೌರ್ಜನ್ಯವನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗ  ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿಕೊಂಡಿತ್ತು.

ಪಾಕಿಸ್ತಾನದಲ್ಲಿ ಹಿಂದು ಕುಟುಂಬದ ಐದು ಸದಸ್ಯರ ಹತ್ಯೆ ಅಲ್ಲಿನ ಹಿಂದು ಸಮುದಾಯದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದು ಎಬಿಪಿ ನ್ಯೂಸ್ ತನ್ನ ವರದಿಯಲ್ಲಿ ತಿಳಿಸಿತ್ತು.

ಅಮರ್ ಉಜಾಲ ಹಾಗೂ ನವಭಾರತ್ ಟೈಮ್ಸ್ ತಮ್ಮ ವರದಿಯಲ್ಲಿ ಸಂತೋಷದಿಂದ ಬಾಳುತ್ತಿದ್ದ ಕುಟುಂಬವೊಂದನ್ನು ಹತ್ಯೆಗೈಯ್ಯಲಾಗಿದೆ, ಯಾಕೆ ಹತ್ಯೆಗೈಯ್ಯಲಾಗಿದೆ ಎಂದು ತಿಳಿದು ಬಂದಿಲ್ಲ ಎಂದು ಹೇಳಿದ್ದವು.

ಓಪಿ ಇಂಡಿಯಾ ತನ್ನ ವರದಿಯಲ್ಲಿ ಇದು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ವಿರುದ್ಧ ನಡೆದ ಅಪರಾಧ ಎಂದು ಬಣ್ಣಿಸಿತ್ತು.

ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ಹಾಗೂ ಇನ್ನಿತರ ಮಾಧ್ಯಮಗಳು ಆತ ಪತ್ನಿ ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿದ್ದಾಗಿ ವರದಿ ಮಾಡಿತ್ತು. ಮಾತ್ರವಲ್ಲದೇ ಮೃತ ವ್ಯಕ್ತಿಯ ಸಹೋದರ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಈ ಕುರಿತಾದಂತೆ ಉಲ್ಲೇಖಿಸಿದ್ದ ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News