ಮಸೀದಿ-ದರ್ಗಾಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಕಡಿವಾಣ ಹಾಕುವಂತೆ ರಾಜ್ಯ ವಕ್ಫ್ ಬೋರ್ಡ್ ಸುತ್ತೋಲೆ

Update: 2021-03-16 13:08 GMT

ಬೆಂಗಳೂರು, ಮಾ.16: ಶಬ್ದ ಮಾಲಿನ್ಯ ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯದ ವಕ್ಫ್ ಬೋರ್ಡ್ ನಲ್ಲಿ ನೋಂದಣಿಯಾಗಿರುವ ಸುಮಾರು 32 ಸಾವಿರ ಮಸೀದಿಗಳು ಹಾಗೂ ದರ್ಗಾಗಳಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳ ಬಳಕೆಗೆ ಕಡಿವಾಣ ಹಾಕುವಂತೆ ರಾಜ್ಯ ವಕ್ಫ್ ಬೋರ್ಡ್ ಮಾ.9ರಂದು ಮಹತ್ವದ ಸುತ್ತೋಲೆಯನ್ನು ಹೊರಡಿಸಿದೆ.

2020ರ ಡಿ.19ರಂದು ನಡೆದ ರಾಜ್ಯ ವಕ್ಫ್ ಬೋರ್ಡ್ ನ 327ನೆ ಸಭೆಯಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಚರ್ಚೆ ನಡೆಸಿ, ಎಲ್ಲ ಮಸೀದಿ ಹಾಗೂ ದರ್ಗಾಗಳ ಆಡಳಿತ ಸಮಿತಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿತ್ತು.

ಶಬ್ದ ಮಾಲಿನ್ಯದಿಂದಾಗಿ ಆರೋಗ್ಯದ ಮೇಲಷ್ಟೇ ಅಲ್ಲ, ಜನಸಾಮಾನ್ಯರ ಮನಸ್ಸಿನ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ. ಆದುದರಿಂದ, ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ನ್ಯಾಯಾಲಯವು ಘೋಷಿಸಿರುವ ನಿಶ್ಯಬ್ಧ ವಲಯಗಳಲ್ಲಿ ಧ್ವನಿವರ್ಧಕಗಳನ್ನು ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಬಳಸುವುದು ಕೇಂದ್ರ ಸರಕಾರದ ಪರಿಸರ ಸಂರಕ್ಷಣಾ ಕಾಯ್ದೆ 1986ರ ಅನ್ವಯ ದಂಡನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಮಸೀದಿಗಳು ಹಾಗೂ ದರ್ಗಾಗಳಿಗೆ ರಾಜ್ಯ ವಕ್ಫ್ ಬೋರ್ಡ್ ಸುತ್ತೋಲೆ ಹೊರಡಿಸಿ, ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಉಳಿದ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಬಳಸುವಾಗ ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಗಮದಲ್ಲಿಟ್ಟುಕೊಂಡು ಬಳಸಬೇಕು ಎಂದು ರಾಜ್ಯ ವಕ್ಫ್ ಬೋರ್ಡ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಯೂಸುಫ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಅಝಾನ್ ಹೇಳಲು ಧ್ವನಿವರ್ಧಕ ಬಳಸಬಹುದು: ಮಸೀದಿಗಳಲ್ಲಿ ಅಝಾನ್ ಹೇಳಲು, ಮರಣ ವಾರ್ತೆ, ದಫನ್ ಕಾರ್ಯದ ಸಮಯ, ಚಂದ್ರ ದರ್ಶನದ ಮಾಹಿತಿ ನೀಡುವುದು ಸೇರಿದಂತೆ ಇನ್ನಿತರ ಪ್ರಮುಖ ಉದ್ದೇಶಗಳಿಗಾಗಿ ಮಾತ್ರ ಧ್ವನಿವರ್ಧಕವನ್ನು ಬಳಸಬಹುದು. 

ಸಾಮೂಹಿಕ ನಮಾಝ್, ಶುಕ್ರವಾರದ ನಮಾಝ್ ವೇಳೆ ನೀಡುವ ಖುತ್ಬಾ(ಪ್ರವಚನ), ಬಯಾನ್, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಜ್ಞಾನಾರ್ಜನೆ ಆಧಾರಿತ ಸಭೆ, ಸಮಾರಂಭಗಳನ್ನು ಧಾರ್ಮಿಕ ಕೇಂದ್ರದ ಆವರಣದಲ್ಲಿ ಅಳವಡಿಸಿರುವ ಸ್ಪೀಕರ್‌ಗಳನ್ನು ಬಳಸಿಕೊಂಡು ನಿರ್ವಹಿಸಬೇಕು. ಸ್ಥಳೀಯ ಪರಿಸರ ಅಧಿಕಾರಿಯನ್ನು ಸಂಪರ್ಕಿಸಿ ಧ್ವನಿವರ್ಧಕಗಳಿಂದ ಹೊರಹೊಮ್ಮುವ ಧ್ವನಿಯನ್ನು ನಿಯಂತ್ರಿಸುವ ಸಾಧನವನ್ನು ಸಂಸ್ಥೆಗಳಲ್ಲಿ ಅಳವಡಿಸಬೇಕು.

ಮಸೀದಿ, ದರ್ಗಾಗಳ ಆವರಣದಲ್ಲಿ ಅಥವಾ ಹೊರ ಭಾಗದಲ್ಲಿ ಯಾವುದೇ ಸಮಾರಂಭಗಳ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸುವಂತಿಲ್ಲ. ಸಾಧ್ಯವಾದಲ್ಲಿ, ಮಸೀದಿ ಹಾಗೂ ದರ್ಗಾಗಳ ಆವರಣದಲ್ಲಿ ಲಭ್ಯವಿರುವ ಖಾಲಿ ಜಾಗಗಳಲ್ಲಿ ಹಣ್ಣುಗಳ ಗಿಡಗಳು, ನೆರಳು ನೀಡುವಂತಹ ಗಿಡಗಳು, ಅಲಂಕಾರಿಕ ಗಿಡಗಳನ್ನು ನೆಡಬೇಕು. ಪ್ರಾಣಿಗಳು ಹಾಗೂ ಪಕ್ಷಿಗಳ ಉಪಯೋಗಕ್ಕಾಗಿ ನೀರಿನ ತೊಟ್ಟಿಗಳನ್ನು ಕಟ್ಟಿಸಬೇಕು.

ಧಾರ್ಮಿಕ ಕೇಂದ್ರಗಳ ಆವರಣದಲ್ಲಿ ಸ್ವಚ್ಛವಾದ ವಾತಾವರಣವನ್ನು ಕಾಪಾಡಬೇಕು. ಅಲ್ಲದೆ, ಭಿಕ್ಷಾಟನೆಗೆ ಯಾವುದೆ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು. ಈ ಬಗ್ಗೆ ಸಂಸ್ಥೆಗಳ ಮಟ್ಟದಲ್ಲೆ ಕ್ರಮ ಕೈಗೊಳ್ಳಬೇಕು. ಎಲ್ಲ ವಕ್ಫ್ ಅಧಿಕಾರಿಗಳು, ವಕ್ಫ್ ನಿರೀಕ್ಷಕರು, ಸರ್ವೇಯರ್‌ಗಳು ಹಾಗೂ ಲೆಕ್ಕಪರಿಶೋಧಕರು, ಮಸೀದಿಗಳು ಹಾಗೂ ದರ್ಗಾಗಳ ಸಿಬ್ಬಂದಿಗಳಿಗೆ ಮಾರ್ಗದರ್ಶನ ನೀಡಬೇಕು. ಅಲ್ಲದೆ, ಮಸೀದಿ ಹಾಗೂ ದರ್ಗಾಗಳ ಆಡಳಿತ ಸಮಿತಿಗಳಿಗೆ ಈ ನಿಯಮಗಳನ್ನು ಪಾಲಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಶಬ್ದ ನಿಯಂತ್ರಣ ಪ್ರಮಾಣ
ಕೈಗಾರಿಕಾ ಪ್ರದೇಶ: ಬೆಳಗ್ಗೆ-75 ಡೆಸಿಬಲ್, ರಾತ್ರಿ-70 ಡೆಸಿಬಲ್
ವಾಣಿಜ್ಯ ಪ್ರದೇಶ: ಬೆಳಗ್ಗೆ 65 ಡೆಸಿಬಲ್, ರಾತ್ರಿ 55 ಡೆಸಿಬಲ್
ವಸತಿ ಪ್ರದೇಶ: ಬೆಳಗ್ಗೆ 55 ಡೆಸಿಬಲ್, ರಾತ್ರಿ 45 ಡೆಸಿಬಲ್
ನಿಶ್ಯಬ್ಧ ವಲಯ: ಬೆಳಗ್ಗೆ 50 ಡೆಸಿಬಲ್, ರಾತ್ರಿ 40 ಡೆಸಿಬಲ್
ಪ್ರಮಾಣದಲ್ಲಿ ಬಳಕೆ ಮಾಡುವಂತೆ ಸೂಚಿಸಲಾಗಿದೆ.

‘ಮಸೀದಿಗಳಲ್ಲಿ ಬೆಳಗಿನ ಫಝರ್ ಅಝಾನ್ ಹೇಳುವಂತಿಲ್ಲ’ ಎಂದು ಎಲ್ಲಿಯೂ ನಾವು ಸುತ್ತೋಲೆಯಲ್ಲಿ ತಿಳಿಸಿಲ್ಲ. 2017ರಲ್ಲಿಯೂ ಮಸೀದಿ ಹಾಗೂ ದರ್ಗಾಗಳಲ್ಲಿ ಮೈಕ್‌ಗಳನ್ನು ಯಾವ ರೀತಿ ಬಳಸಬೇಕು ಎಂದು ಸೂಚಿಸಿ ಒಂದು ಸುತ್ತೋಲೆ ಹೊರಡಿಸಲಾಗಿತ್ತು. ಧ್ವನಿವರ್ಧಕಗಳ ಬಳಕೆ ಕುರಿತು ವಕ್ಫ್ ಸಂಸ್ಥೆಗಳ ಮುತವಲ್ಲಿ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳಲ್ಲಿ ಜಾಗೃತಿ ಮೂಡಿಸಲು ನಾವು ಮುಂದಾಗಿದ್ದೇವೆ. ಕಳೆದ ಸಾಲಿನ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಥಣಿಸಂದ್ರದಲ್ಲಿರುವ 7 ಮಸೀದಿಗಳಿಂದ ಶಬ್ದ ಮಾಲಿನ್ಯವಾಗುತ್ತಿದೆ ಎಂದು ಹೈಕೋರ್ಟ್ ನಲ್ಲಿ ಸ್ಥಳೀಯರಿಂದ ಪಿಐಎಲ್ ದಾಖಲಾಗಿತ್ತು. ಅದರಂತೆ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆ ಮಸೀದಿಗಳಲ್ಲಿ ಅಳವಡಿಸಿದ್ದ ಧ್ವನಿವರ್ಧಕಗಳನ್ನು ತೆರವುಗೊಳಿಸಿದರು. ಆನಂತರ, ಪೊಲೀಸರು ನೀಡಿದ ವರದಿಯ ಹಿನ್ನೆಲೆಯಲ್ಲಿ ಹೈಕೋರ್ಟ್ ಆ ಪಿಐಎಲ್ ಅನ್ನು ಇತ್ಯರ್ಥಗೊಳಿಸಿತು. ಇದೀಗ, ಇನ್ನೂ 10 ಮಸೀದಿಗಳ ವಿರುದ್ಧ ಪಿಐಎಲ್ ದಾಖಲು ಮಾಡಲಾಗಿದೆ. ಆದುದರಿಂದ, ಇತರ ಮಸೀದಿಗಳು, ದರ್ಗಾಗಳ ಆಡಳಿತ ಸಮಿತಿಯವರಲ್ಲಿ ಜಾಗೃತಿ ಮೂಡಿಸುವಂತೆ ನಮ್ಮ ಇಲಾಖೆಯ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದೇವೆ.
-ಮುಹಮ್ಮದ್ ಯೂಸುಫ್, ಸಿಇಒ, ರಾಜ್ಯ ವಕ್ಫ್ ಬೋರ್ಡ್

Writer - ಅಮ್ಜದ್ ಖಾನ್ ಎಂ.

contributor

Editor - ಅಮ್ಜದ್ ಖಾನ್ ಎಂ.

contributor

Similar News