ವಿರಾಜಪೇಟೆ ಪೊಲೀಸರ ಕಾರ್ಯಾಚರಣೆ: 25 ವರ್ಷಗಳ ಹಿಂದಿನ ಕೊಲೆ ಪ್ರಕರಣದ ಆರೋಪಿ ಬಂಧನ
ಮಡಿಕೇರಿ ಮಾ.19 : ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ತಾಲೂಕಿನ ಹೆಮ್ಮಾಡು ಭೇತ್ರಿ ಗ್ರಾಮದ ನಿವಾಸಿ ಕುಂಬಾರರ ನಂಜಪ್ಪ (47) ಎಂಬಾತನೆ ಬಂಧಿತ ವ್ಯಕ್ತಿ.
ಹೆಮ್ಮಾಡು ಬೇತ್ರಿ ಗ್ರಾಮದಲ್ಲಿ 1996ರ ಆಗಸ್ಟ್ ತಿಂಗಳಿನಲ್ಲಿ ಗೌರಿ-ಗಣೇಶ ಉತ್ಸವದ ಸಂದರ್ಭ ಸಹೋದರರಾದ ಪೂಣಚ್ಚ, ನಂಜಪ್ಪ, ಬಿದ್ದಪ್ಪ, ಕಾಳಪ್ಪ ಮತ್ತು ಕುಶಾಲಪ್ಪ ಎಂಬವರು ಕ್ಷುಲ್ಲಕ್ಕ ಕಾರಣಕ್ಕೆ ಹೆಮ್ಮಾಡುವಿನ ದಿನಸಿ ಅಂಗಡಿ ಮಾಲಕ ತೋರೆರ ನಂಜಪ್ಪ ಎಂಬವರನ್ನು ಮಚ್ಚಿನಿಂದ ಕಡಿದು ಹತ್ಯೆಗೈದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲಿಸರು ಸಹೋದರರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪೂಣಚ್ಚನಿಗೆ ಜೀವಾವಧಿ ಶಿಕ್ಷೆಯಾಗಿತ್ತು. ಕಾಳಪ್ಪ ಮತ್ತು ಕುಶಾಲಪ್ಪ ಆರೋಪದಿಂದ ಮುಕ್ತರಾಗಿದ್ದರು. ಬಿದ್ದಪ್ಪ ಸಾವನ್ನಪ್ಪಿದ್ದು, ಕುಂಬಾರರ ನಂಜಪ್ಪ ತಲೆ ಮರೆಸಿಕೊಂಡಿದ್ದ. ಇದೀಗ ಪೊಲೀಸರು ಆರೋಪಿ ಕುಂಬಾರರ ನಂಜಪ್ಪನನ್ನು ಬೆಂಗಳೂರಿನ ಅಶೋಕ ನಗರದಲ್ಲಿ ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಎಸ್ಪಿ ಕ್ಷಮಾ ಮಿಶ್ರ ಮಾರ್ಗದರ್ಶನದಂತೆ, ವಿರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ನಿರ್ದೇಶನದಂತೆ ವಿರಾಜಪೇಟೆ ವೃತ್ತ ನಿರೀಕ್ಷಕರಾದ ಬಿ.ಎಸ್.ಶ್ರೀಧರ್, ಗ್ರಾಮಾಂತರ ಪೊಲೀಸು ಠಾಣೆಯ ಠಾಣಾಧಿಕಾರಿ ಸಿದ್ದಲಿಂಗ ಭೀ.ಬಾನಸೆ, ಗೊಣಿಕೊಪ್ಪಲು ಠಾಣೆಯ ಎಎಸ್ಐ ಸುಬ್ರಮಣಿ, ಸಿಬ್ಬಂದಿಗಳಾದ ರಾಮಪ್ಪ ಬಿ.ಎಂ., ಚಂದ್ರಶೇಖರ್ ಎಂ., ನೆಹರುಕುಮಾರ್, ಮತ್ತು ಸಿಡಿಆರ್ ವಿಭಾಗದ ರಾಜೇಶ್ ಮತ್ತು ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.