ಉದ್ಯಮಿಗಳಿಗೆ ಲಾಭ ನೀಡುವ ಉದ್ದೇಶದಿಂದ ಕೇಂದ್ರ ಸರಕಾರ ರೈತರ ಭವಿಷ್ಯ ಕಸಿಯಲು ಬಯಸಿದೆ: ರಾಹುಲ್ ಗಾಂಧಿ

Update: 2021-03-21 16:54 GMT

ರಾಯಪುರ, ಮಾ. 17: ನೂತನ ಮೂರು ಕೃಷಿ ಕಾಯ್ದೆಗಳ ವಿರುದ್ಧ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ರವಿವಾರ ತನ್ನ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕೇಂದ್ರ ಸರಕಾರ ದೇಶದ ಕೆಲವು ಉನ್ನತ ಉದ್ಯಮಿಗಳಿಗೆ ಲಾಭ ಮಾಡುವ ಉದ್ದೇಶದಿಂದ ರೈತರ ಆದಾಯ ಹಾಗೂ ಭವಿಷ್ಯ ಕಸಿಯಲು ಬಯಸಿದೆ ಎಂದು ಹೇಳಿದ್ದಾರೆ. ರಾಜ್ಯ ಸರಕಾರದ ಎರಡು ಯೋಜನೆಗಳ ಅಡಿಯಲ್ಲಿ ಜಾನುವಾರು ಸಾಕುವವರು ಹಾಗೂ ರೈತರಿಗೆ ನಗದು ವಿತರಿಸಲು ಚತ್ತೀಸ್ಗಢದ ರಾಜಧಾನಿ ರಾಯಪುರದಲ್ಲಿ ಆಯೋಜಿಲಾಗಿದ್ದ ಕಾರ್ಯಕ್ರಮದಲ್ಲಿ ವೀಡಿಯೊ ಸಂದೇಶದಲ್ಲಿ ಅವರು ಹೇಳಿದರು.

ಭೂಪೇಶ್ ಬಾಘಲ್ ನೇತೃತ್ವದ ಸರಕಾರದ ಈ ನಗದು ವಿತರಣೆಯನ್ನು ಪ್ರಶಂಸಿಸಿದ ರಾಹುಲ್ ಗಾಂಧಿ, ಚತ್ತೀಸ್ಗಢ ಹಾಗೂ ಇತರ ರಾಜ್ಯಗಳಲ್ಲಿರುವ ತನ್ನ ಪಕ್ಷದ ಆಡಳಿತ ರೈತ ಕಾರ್ಮಿಕರಿಗೆ, ಕಾರ್ಮಿಕರಿಗೆ, ಸಣ್ಣ ಉದ್ಯಮಿಗಳಿಗೆ, ಯುವಕರಿಗೆ ಹಾಗೂ ಮಹಿಳೆಯರಿಗೆ ಬೆಂಬಲ ನೀಡುತ್ತಿರುವ ಹಾದಿಯಲ್ಲಿ ಸಾಗುತ್ತಿರುವ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನಗದು ಅಮಾನ್ಯೀಕರಣ, ಜಿಎಸ್ಟಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, "ನರೇಂದ್ರ ಮೋದಿ ಸರಕಾರ ನೋಟ್ ಬಂಧಿ ಹಾಗೂ ಜಿಎಸ್ಟಿಯನ್ನು ಅನುಷ್ಠಾನಗೊಳಿಸಿತು. ಈಗ ಉದ್ಯೋಗ ಸೃಷ್ಟಿಸಲು ವಿಫಲವಾಗಿರುವುದನ್ನು ನೀವು ನೋಡಬಹುದು ಎಂದರು.

ಇದಕ್ಕೆ ತದ್ವಿರುದ್ಧವಾಗಿ ಚತ್ತೀಸ್ಗಢ ಸರಕಾರ ರೈತರಿಗೆ ಬೆಂಬಲ ವಿಸ್ತರಿಸಿದೆ ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಸಬಲಗೊಳಿಸಿದೆ" ಎಂದು ಅವರು ಹೇಳಿದ್ದಾರೆ. ‘‘ನಾವು ಗ್ರಾಮೀಣ ಆರ್ಥಿಕತೆಯಲ್ಲಿ ಹಣ ಹೂಡಿದ್ದೇವೆ. ಆದುದರಿಂದ ಇತರ ರಾಜ್ಯಗಳಂತೆ ಚತ್ತೀಸ್ಗಢ ಯಾವುದೇ ರೀತಿಯ ಸಮಸ್ಯೆ ಎದುರಿಸುತ್ತಿಲ್ಲ (ಕೊರೋನ ವೈರಸ್ ಸಂದರ್ಭ).’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News