ಶಾಸಕರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ: ಸಚಿವ ಡಾ.ಕೆ.ಸುಧಾಕರ್

Update: 2021-03-24 15:30 GMT

ಬೆಂಗಳೂರು, ಮಾ.24: ಆರು ಸಚಿವರ ವಿರುದ್ಧ ನಿರಂತರ ತೇಜೋವಧೆ, ಆರೋಪ ಮಾಡುತ್ತಿರುವಾಗ ನಮಗಾದ ಅವಮಾನ, ನೋವು ಯಾರಿಗೂ ಅರಿವಾಗಲಿಲ್ಲ. ಈಗ ನಾನು ನೀಡಿದ ಹೇಳಿಕೆಯನ್ನು ಶಬ್ದಶಃ ಅರ್ಥೈಸದೆ ನಮ್ಮ ಭಾವನೆಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿರುವುದಾಗಿ ಸ್ಪಷ್ಟನೆ ನೀಡಿರುವ ಅವರು, ಜೊತೆಗೆ ಈ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನೂ ಸೇರಿದ ಹಾಗೆ ಕೆಲ ಸಚಿವರ ನೈತಿಕ ಅರ್ಹತೆಯನ್ನು ಕೆಲ ವಿಪಕ್ಷ ನಾಯಕರು ಸದನದ ಒಳಗೆ ಹಾಗೂ ಹೊರಗೆ ನಿರಂತರವಾಗಿ ಪ್ರಶ್ನೆ ಮಾಡಿ ನಮ್ಮ ಘನತೆಗೆ, ಗೌರವಕ್ಕೆ ಹಾನಿ ಉಂಟು ಮಾಡಿದ್ದಾರೆ ಎಂದು ತಿಳಿಸಿದ್ದಾರೆ. 

ರಾಜಕೀಯ ಷಡ್ಯಂತ್ರದ ಪರಿಣಾಮ ಇತ್ತೀಚೆಗೆ ಆಗಿರುವ ಕೆಲ ಆಘಾತಕಾರಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪರಿಣಿತರು, ಹಿರಿಯರ ಸಲಹೆ ಸೂಚನೆ ಮೇರೆಗೆ ನಾವು ನಮ್ಮ ಹಕ್ಕುಗಳ ರಕ್ಷಣೆಗೆ ಸಾಂವಿಧಾನಿಕವಾಗಿ ಲಭ್ಯ ಇರುವ ಅವಕಾಶಗಳ ಅಡಿಯಲ್ಲಿ ಉಪಕ್ರಮಕ್ಕೆ ಮುಂದಾಗಿದ್ದು ನಿಜ. ಅದರ ಅರ್ಥ ನಾವೇನೋ ಅಪರಾಧ ಎಸಗಿದ್ದೇವೆ ಅಂತಲ್ಲ. ಹೀಗೆ ಕಾನೂನು ರಕ್ಷಣೆಯ ಮೊರೆ ಹೋಗಿದ್ದು ನಾವೇ ಮೊದಲಲ್ಲ, ಕೊನೆಯೂ ಆಗಲಾರದು ಎಂದು ಸುಧಾಕರ್ ಹೇಳಿದ್ದಾರೆ.

ಇದೆಲ್ಲ ತಿಳಿದೂ ಕೆಲ ಹಿರಿಯ ನಾಯಕರು ನಮ್ಮ ತೇಜೋವಧೆ ಮಾಡಿ, ವ್ಯಕ್ತಿತ್ವಕ್ಕೆ ಕಳಂಕ ತಂದು ನಮ್ಮ ಸಾರ್ವಜನಿಕ ಜೀವನಕ್ಕೆ ಇತಿಶ್ರೀ ಹೇಳಲು ಮುಂದಾದಾಗ ಅನಿವಾರ್ಯವಾಗಿ ನನ್ನ ಮನಸ್ಸಿಗಾದ ನೋವನ್ನು ಬಹಿರಂಗವಾಗಿ ತೋಡಿಕೊಂಡಿದ್ದೇನೆ. ನನ್ನ ಹೇಳಿಕೆ ಹಿಂದೆ ಇರುವ ನನ್ನ ಮನಸ್ಸಿನ ವೇದನೆ ನೋವನ್ನು ಅರ್ಥ ಮಾಡಿಕೊಳ್ಳಬೇಕೆ ವಿನಹ ನಾನಾಡಿದ ಮಾತುಗಳ ಶಬ್ದಶಃ ವ್ಯಾಖ್ಯಾನ ಮಾಡಕೂಡದೆಂದು ವಿನಮ್ರವಾಗಿ ಕೋರುತ್ತೇನೆ ಎಂದು ಅವರು ಮನವಿ ಮಾಡಿದ್ದಾರೆ.

ಶಾಸಕರು, ಶಾಸನ ಸಭೆ ಬಗ್ಗೆ ಅಪಾರ ಗೌರವ ಹೊಂದಿರುವ ನಾನು ಯಾರ ಸ್ವಾಭಿಮಾನ, ಗೌರವಕ್ಕೆ ಧಕ್ಕೆ ತರುವ ಮಾತೇ ಇಲ್ಲ. ಆದಾಗ್ಯೂ ಯಾರಿಗಾದರೂ ಮನಸ್ಸಿಗೆ ನೋವಾಗಿದ್ದರೆ ಆ ಕುರಿತು ವಿಷಾದಿಸುತ್ತೇನೆ. ನಮಗಾಗಿರಬಹುದಾದ ಅವಮಾನ, ಮಾನಸಿಕ, ಭಾವನಾತ್ಮಕ ನೋವು ಯಾರಿಗೂ ಅರ್ಥವಾಗಲಿಲ್ಲ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವ ನನ್ನ ಹೇಳಿಕೆ ಕೆಲವರಿಗೆ ಬಹಳ ತಪ್ಪಾಗಿ ಕಾಣುತ್ತಿದೆ ಎಂದು ಸುಧಾಕರ್ ಹೇಳಿದ್ದಾರೆ.

ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

17 ಜನರ ವಿರುದ್ದ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೆ ಹೊರತು ಎಲ್ಲ ಶಾಸಕರಿಗೆ ನೋವುಂಟು ಮಾಡುವ ಉದ್ದೇಶ ನನಗಿಲ್ಲ. ಕೆಲ ದಿನಗಳಿಂದ ಮಹತ್ವವಾಗಿರುವ ರಾಜ್ಯ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆಯಲು ಬಿಡದೆ ಅನವಶ್ಯಕ ವಿಚಾರಗಳನ್ನು ಪ್ರಸ್ತಾಪಿಸಿ ಸದನದ ಮತ್ತು ಶಾಸಕರ ಸಮಯವನ್ನು ಕಾಂಗ್ರೆಸ್ ವ್ಯರ್ಥ ಮಾಡಿದೆ. ರಾಜಕೀಯ ದುರುದ್ದೇಶದಿಂದ 6 ಸಚಿವರ ತೇಜೋವಧೆ ಮಾಡಲು ಯತ್ನಿಸಿದೆ ಎಂದು ಸುಧಾಕರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News